ಕಾವೇರಿ ವಿಚಾರಣೆ: ಬೆಂಗಳೂರಿನಲ್ಲಿ ಭಾರೀ ಭದ್ರತೆ
ಬೆಂಗಳೂರು, ಸೆಪ್ಟೆಂಬರ್ 27: ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನೀರಿನ ವಿಚಾರವಾಗಿ ಮಂಗಳವಾರ ವಿಚಾರಣೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಭಾರೀ ಭದ್ರತೆ ಮಾಡಲಾಗಿದೆ. ತಮಿಳರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಮುಖ ರಸ್ತೆಗೆಳು, ಸ್ಥಳಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಅಗತ್ಯ ಎಚ್ಚರಿಕೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಮೇಘರಿಕ್ ಹೇಳಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಪಡೆಯ ಆರು ತುಕಡಿ, ಬಿಎಸ್ ಎಫ್, ಸೀಮಾ ಸುರಕ್ಷಾ ಬಲದ ತಲಾ ಮೂರು ಕಂಪೆನಿ, ಒಂದು ಇಂಡೋ ಟಿಬೆಟನ್ ಬಾರ್ಡರ್ ಪಡೆ, ಕೆಎಸ್ ಆರ್ ಪಿಯ ನಲವತ್ತು ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.[ಕಾವೇರಿ ನೀರು ಬಿಡುವುದು ಬಿಡದಿರುವುದು ದೈವೇಚ್ಛೆ ಮೈಲಾರ್ಡ್!]
ಈ ಎಲ್ಲದರ ಜೊತೆಗೆ ಹದಿನೈದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿದ್ದು, ನಗರದಲ್ಲಿ ಇತ್ತೀಚೆಗೆ ಜಾರಿಗೊಳಿಸಿದ್ದ ನಿಷೇಧಾಜ್ಞೆಯು ಮಂಗಳವಾರ ರಾತ್ರಿಯವರೆಗೂ ಮುಂದುವರಿಯಲಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.