ತಮಿಳುನಾಡು ಬೆಳೆಗಾಗಿ ಬೆಂಗಳೂರಿನ ಕುಡಿಯುವ ನೀರಿನ ತ್ಯಾಗ
ಬೆಂಗಳೂರು, ಸೆಪ್ಟೆಂಬರ್ 20 : ತಮಿಳುನಾಡಿನ ಬೆಳೆಗಾಗಿ ಬೆಂಗಳೂರಿನ ಜನತೆ ಕುಡಿಯುವ ನೀರನ್ನು ತ್ಯಾಗ ಮಾಡುವುದು ಅನಿವಾರ್ಯವಾಗಿದೆ! ಬೇಸಿಗೆಯ ವಿಷಯ ಬಿಡಿ, ಈ ವರ್ಷ ಚಳಿಗಾಲದಲ್ಲೂ ಬೆಂಗಳೂರಿನ ಜನತೆಯ ಬಾಯಾರಿಕೆಯನ್ನು ಇಂಗಿಸಲಾಗದು.
ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರ ನೀಡಿದ್ದ ಹೊಡೆತದ ಮೇಲೆ ಮತ್ತೊಂದು ಬಲವಾದ ಹೊಡೆತ ಕೊಟ್ಟಿದೆ. ಸೆ.21ರಿಂದ 27ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಹೇಳಿ ಬಾಯಾರಿದ ಕರ್ನಾಟಕದ ಕೈಯಲ್ಲಿದ್ದ ನೀರಿನ ಗ್ಲಾಸನ್ನೂ ಕಸಿದುಕೊಂಡಿದೆ. [ಗಾಯದ ಮೇಲೆ ಸುಪ್ರೀಂ ಬರೆ, ಜೈಲ್ ಭರೋ ಕರೆ]
ಗಾಯದ ಮೇಲೆ ಬರೆ ಎಳೆಯುವಂತೆ, ಮುಂದಿನ ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣೆ ಮತ್ತು ನಿಯಂತ್ರಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಕಾವೇರಿ ನಿರ್ಹಹಣಾ ಮಂಡಳಿ ರಚನೆಯಾಗುತ್ತಿರುವುದು ಕರ್ನಾಟಕದ ರೈತರ ಪಾಲಿಗೆ ಮರಣ ಶಾಸನವಾಗಲಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]
ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ತಮಿಳುನಾಡು ಮೊದಲಿನಿಂದಲೂ ಒತ್ತಡ ಹೇರುತ್ತಲೇ ಬಂದಿತ್ತು. ಈಗ ತಮಿಳುನಾಡಿಗೆ ಈ ಸಂಗತಿಯಲ್ಲಿಯೂ ಜಯ ಸಿಕ್ಕಂತಾಗಿದೆ. ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಕುರಿತಂತೆ ನೋಟಿಫಿಕೇಷನ್ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಸೆಪ್ಟೆಂಬರ್ 12ರಂದು ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರ ಆದೇಶದಂತೆ ನೀರನ್ನು ಹರಿಯಬಿಟ್ಟಿದ್ದರಿಂತ ಎಲ್ಲ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ನೀರು ಈಗಾಗಲೆ ಇಂಗಿಹೋಗಿದೆ. [ಬೆಂಗಳೂರಿನ ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]
ತಮಿಳುನಾಡಿನ ಬೆಳೆಗಾಗಿ ಕರ್ನಾಟಕ ಕುಡಿಯುವ ನೀರನ್ನು ಕೂಡ ತ್ಯಾಗ ಮಾಡಬೇಕಾಗುತ್ತದೆ. ಅಲ್ಲದೆ, ಬೆಂಗಳೂರಿಗೆ ಬರುವ ಕಾವೇರಿ ನೀರನ್ನು ಸಂಪೂರ್ಣ ಕತ್ತರಿಸುವಂತೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದು ನಿಜಕ್ಕೂ ಅನ್ಯಾಯ ಎಂದು ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ವಾದಕ್ಕೆ ಸುಪ್ರೀಂ ಕೋರ್ಟ್ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಬೆಂಗಳೂರಿಗೆಷ್ಟು ನೀರು ಬೇಕು? : ಬೆಂಗಳೂರಿಗೆ ಪ್ರತಿನಿತ್ಯ 600 ಕ್ಯೂಸೆಕ್ಸ್ ನೀರಿನ ಅಗತ್ಯವಿದೆ. ಮುಂದಿನ 10 ತಿಂಗಳವರೆಗೆ 15 ಟಿಎಂಸಿ ನೀರು ಬೆಂಗಳೂರಿಗೇ ಬೇಕು. ಆದರೆ, ಕೆಆರ್ಎಸ್ನಲ್ಲಿ ಲಭ್ಯವಿರುವುದು ಕೇವಲ 13 ಟಿಎಂಸಿ ನೀರು ಮಾತ್ರ. ಅದರಲ್ಲಿ ಬಳಸಲು ಲಭ್ಯವಿರುವುದು 4.5 ಟಿಎಂಸಿ ನೀರು ಮಾತ್ರ.
ಇನ್ನು ಸುಪ್ರೀಂ ಕೋರ್ಟ್ ಅಣತಿಯಂತೆ ಇನ್ನಷ್ಟು ನೀರು ತಮಿಳುನಾಡಿಗೆ ಹರಿದುಹೋದರೆ ಬೆಂಗಳೂರಿನ ನಾಗರಿಕರ ಸ್ಥಿತಿ ಭಯಾನಕವಾಗಿರಲಿದೆ. [ಸೆ.21ರಿಂದ 27ರವರೆಗೂ 6,000 ಕ್ಯೂಸೆಕ್ಸ್ ನೀರು ಹರಿಸಿ]