ಬೆಂಗಳೂರಲ್ಲಿ ಕಾವೇರಿಗಾಗಿ ರೂಪದರ್ಶಿಗಳ ಕ್ಯಾಟ್ವಾಕ್!
ಬೆಂಗಳೂರು, ಸೆಪ್ಟೆಂಬರ್ 20 : ಕನ್ನಡವೇ ನಮ್ಮ ಉಸಿರು; ಕಾವೇರಿಯಿಂದ ನಾಡು ಹಸಿರು, ಕಾವೇರಿಯ ತವರು ಕೊಡಗು; ಪ್ರಧಾನಿಗೆ ಕೇಳಿಸಲಿ ನಮ್ಮ ಕೂಗು, ಕಾವೇರಿ ಕರುನಾಡ ಗಂಗೆ: ಕನ್ನಡಿಗರು ಸಿಡಿದೆದ್ದರೆ ದಂಗೆ... ಇವು ಕಾವೇರಿ ಪ್ರತಿಭಟನೆಯಲ್ಲಿ ಕೇಳಿದ ಘೋಷಣೆಗಳಲ್ಲ. ಇವು ಮೊಳಗಿದ್ದು 'ಟಾಲೆಂಟ್ ಮಂತ್ರ' ಫ್ಯಾಷನ್ ಶೋನಲ್ಲಿ!
ಹೌದು, ನಗರದ ಕೆಸಿ ಪ್ಯಾಲೇಸ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಮನೋಜ್ ಶೆಟ್ಟಿ ಮತ್ತು ನಟ ರವಿಕುಮಾರ್ ಇವರ ಫ್ಯಾಷನ್ ವೀಕ್ನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲಿಂದಲೇ ಕನ್ನಡದ ಕಹಳೆ ಮೊಳಗಿಸಿದರು! ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಾವು ಇನ್ನೂ ಇಳಿದಿಲ್ಲ. ಈ ಹೊತ್ತಿನಲ್ಲಿ ನಡೆದ ಫ್ಯಾಷನ್ ಶೋ ಅಕ್ಷರಶಃ ಕನ್ನಡಮಯವಾಗಿತ್ತು.
ಮೂವರು ಖ್ಯಾತ ಡಿಸೈನರ್ಗಳ ಅತ್ಯಪೂರ್ವ ವಸ್ತ್ರ ವಿನ್ಯಾಸಗಳನ್ನು ಪ್ರದರ್ಶಿಸಲೆಂದೇ ಆಯೋಜಿಸಲಾಗಿದ್ದ ಈ 'ಟಾಲೆಂಟ್ ಮಂತ್ರ' ಫ್ಯಾಷನ್ ವೀಕ್ನಲ್ಲಿ ರೂಪದರ್ಶಿಗಳು, ಕಾವೇರಿ ನೀರಿನ ರಕ್ಷಣೆಗಾಗಿ ಕ್ಯಾಟ್ವಾಟ್ ನಡೆಸಿದರು. ಈ ಮೂಲಕ ಮಾಡೆಲ್ಗಳು ಕನ್ನಡಾಭಿಮಾನ ಮೆರೆದರು.
ಫ್ಯಾಷನ್ ಶೋನ ಜತೆಗೆ, ಒಂದಿಷ್ಟು ಮನರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಖ್ಯಾತ ಮಿಮಿಕ್ರಿ ಪಟು ರಾಜಗೋಪಾಲ್ ರಿಂದ ಮಿಮಿಕ್ರಿ ಶೋ ಸಹ ಆಯೋಜಿಸಲಾಗಿತ್ತು. ಅಮೃತವರ್ಷಿಣಿ ಖ್ಯಾತಿಯ ರಜನಿಯ ಮಧುರ ಕಂಠದ ಗಾಯನ ಎಲ್ಲರ ಮನ ಸೂರೆಗೊಂಡಿತು. ಬಾಲಿವುಡ್ ಡ್ಯಾನ್ಸರ್ಗಳಿಂದ ನಡೆದ ವೈವಿಧ್ಯಮಯ ನೃತ್ಯ ಫ್ಯಾಷನ್ ಶೋಗೆ ಇನ್ನಷ್ಟು ರಂಗು ತುಂಬಿತು.
ಮಯೂರಿ ಶಾ : ಫ್ಯಾಷನ್ ಶೋನಲ್ಲಿ ಸ್ಯಾಂಡಲ್ವುಡ್ನ ನಟಿ ಚಿಂಗಾರಿ ದೀಪಿಕಾ ಕಾಮಯ್ಯ ಸೆಲೆಬ್ರಿಟಿ ಜಡ್ಜ್ ಆಗಿ ಮಿಂಚಿದರೆ, ಖ್ಯಾತ ಮಾಡೆಲ್ ಮತ್ತು ರಿಯಾಲಿಟಿ ಸ್ಟಾರ್ ಮಯೂರಿ ಶಾ, ಶೋ ಸ್ಟಾಪರ್ ಮತ್ತು ಸೆಲೆಬ್ರಿಟಿ ಜಡ್ಜ್ ಆಗಿದ್ದರು. ಮಿಸ್ ರಚನಾ ಸ್ಮಿತ್, ಕನ್ನಡಮಯವಾಗಿದ್ದ 'ಟಾಲೆಂಟ್ ಮಂತ್ರ' ಫ್ಯಾಷನ್ ವೀಕ್ನ ಸೆಲೆಬ್ರಿಟಿ ಗೆಸ್ಟ್ ಆಗಿ ಉಪಸ್ಥಿತರಿದ್ದರು.