ಸಿದ್ದರಾಮಯ್ಯ ಭೇಟಿ ಮಾಡಿದ ಎಂ.ಬಿ. ಪಾಟೀಲ: ಚರ್ಚೆಯ ಗುಟ್ಟೇನು?
Recommended Video
ಬೆಂಗಳೂರು, ಸೆಪ್ಟೆಂಬರ್ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಬರುತ್ತಲೇ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯ ಬಗೆಗೆ ಚಟುವಟಿಕೆಗಳು ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಮಂಗಳವಾರ ಕಾವೇರಿ ಗೆಸ್ಟ್ ಹೌಸ್ ನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಅವಕಾಶ ಸಿಗದೆ ಇರುವ ಕಾರಣ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಮಾಜಿ ಸಚಿವ ಎಂಬಿ ಪಾಟೀಲ್ ಸಂಪುಟದಲ್ಲಿ ಅವಕಾಶ ಸಿಗುತ್ತದೆ ಎಂದು ನಂಬಿದ್ದಾರೆ. ಈಗಾಗಲೇ ಎಂಬಿ ಪಾಟೀಲ ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂಬ ಹಲವಾರು ವದಂತಿಗಳ ನಡುವೆಯೂ ಸ್ವತಃ ಎಂಬಿ ಪಾಟೀಲ್ ಅದನ್ನು ಅಲ್ಲಗಳೆದಿದ್ದಾರೆ.
ಪರಿಷತ್ ಚುನಾವಣೆ: ಎಂಬಿ ಪಾಟೀಲ್ ಸಹೋದರ ಸುನೀಲ್ಗೆ ಗೆಲುವು
ಆದರೆ ಸಂಪುಟ ವಿಸ್ತರಣೆ ವೇಳೆ ಎಂಬಿ ಪಾಟೀಲ್ ಅವಕಾಶ ಸಿಗದಿದ್ದರೆ ಮತ್ತೊಂದು ಸುತ್ತಿನ ಬಂಡಾಯ ಏಳುವುದು ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಎಂಬಿ ಪಾಟೀಲ್ ತಮ್ಮ ಮನದಾಳದ ಇಂಗಿತವನ್ನು ತಿಳಿಸಿದ್ದಾರೆ.
ಈ ವೇಳೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಸಂಪುಟ ವಿಸ್ತರಣೆ ವೇಳೆ ಹೈಕಮಾಂಡ್ ಎಲ್ಲವನ್ನೂ ಸರಿಪಡಿಸುತ್ತದೆ ಎಂದಷ್ಟೇ ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಎಂಬಿ ಪಾಟೀಲ್ ಸಹೋದರ ಸುನೀಲ್ ಪಾಟೀಲ್ ಗೆ ಕಾಂಗ್ರೆಸ್ ನಿಂದ ಟಿಕೇಟ್ ನೀಡಲಾಗಿತ್ತು. ವಿಧಾನ ಪರಿಷತ್ ಗೆ ಸುನೀಲ್ ಪಾಟೀಲ್ ಆಯ್ಕೆಯಾಗಿದ್ದು, ಒಂದೇ ಕುಟುಂಬದಲ್ಲಿ ಇಬ್ಬರು ಶಾಸಕರಾದಂತಾಗಿದೆ.
ಸಚಿವರಾಗದ ಪಾಟೀಲ್, ರಾಮಸ್ವಾಮಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆ
ಮತ್ತೆ ಸಚಿವ ಸಂಪುಟದಲ್ಲಿ ಎಂಬಿ ಪಾಟೀಲ್ ಗೆ ಸಚಿವ ಸ್ಥಾನ ನೀಡುವುದು ಅನುಮಾನ ಎಂಬಂತಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಎಂಬಿ ಪಾಟೀಲ್ ಈ ಬಾರಿ ಸಚಿವ ಸ್ಥಾನ ಸಿಗದಿದ್ದರೆ ತಮ್ಮ ಬೆಂಬಲಿಗರಿಗೆ ಉತ್ತರ ನೀಡುವುದು ತಮಗೆ ಕಷ್ಟವಾಗುತ್ತದೆ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಂಬಿ ಪಾಟೀಲ್ ಹಾಗೂ ಸಿದ್ದರಾಮಯ್ಯ ಭೇಟಿ ಕುತೂಹಲ ಕೆರಳಿಸಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಮಾಜಿ ಸಚಿವ ಎಂಬಿ ಪಾಟೀಲ್ ಗೆ ಈ ಬಾರಿ ಅವಕಾಶ ನೀಡಿದರೆ, ವಿಜಯಪುರ ಜಿಲ್ಲೆಯಲ್ಲಿ ಸಚಿವ ಸ್ಥಾನ ಸಿಕ್ಕಂತಾಗುತ್ತದೆ.ಕಾಂಗ್ರೆಸ್ ನಿಂದ ಶಿವಾನಂದ ಪಾಟೀಲ, ಜೆಡಿಎಸ್ ಎಂಸಿ ಮನಗೂಳಿ ಸಚಿವರಾಗಿದ್ದಾರೆ. ಒಂದೇ ಜಿಲ್ಲೆಯಲ್ಲಿ ಮೂವರಿಗೆ ಸಚಿವ ಸ್ಥಾನ ನೀಡುವುದು ಅನುಮಾನವೇ ಎನ್ನಲಾಗುತ್ತಿದೆ.