ಬಿಬಿಎಂಪಿಯಿಂದ ಸಂಗ್ರಹವಾಗ್ತಿರೋ ಸಾವಿರಾರು ಕೋಟಿ ಎಲ್ಲಿ ಖರ್ಚಾಗ್ತಿದೆ?
ಬೆಂಗಳೂರು, ಸೆಪ್ಟೆಂಬರ್ 30: ಬಿಬಿಎಂಪಿಯಿಂದ ಒಂಬತ್ತು ಸಾವಿರ ಕೋಟಿ ಮಾತ್ರ ಏಕೆ ಸಂಗ್ರಹವಾಗುತ್ತಿದೆ? ಅದಿನ್ನೂ ಹೆಚ್ಚು ಇರಬೇಕು. ಈ ಮೊತ್ತ ಖರ್ಚು ಮಾಡುವುದಕ್ಕೆ ಸಂಬಂಧಿಸಿದ ಹಾಗೆ ಆಡಿಟ್ ಏಕೆ ಆಗುತ್ತಿಲ್ಲ? ಆ ಮೊತ್ತ ಎಲ್ಲಿ ಹೋಗುತ್ತಿದೆ? ಕಾನೂನು ಬಾಹಿರವಾದ ಸ್ಕೈವಾಕ್ ಗಾ ಎಂದು ಪ್ರಶ್ನಿಸಿದ್ದಾರೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್.
ನಮ್ಮ ಬೆಂಗಳೂರು ಫೌಂಡೇಷನ್, ಯುನೈಟೆಡ್ ಬೆಂಗಳೂರು ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಇಂದಿರಾನಗರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ಸರಕಾರ ಹಾಗೂ ಬಿಬಿಎಂಪಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗಬೇಕು. ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಆಗುವ ಬಗ್ಗೆಯೇ ನಮ್ಮ ಗಮನ ಎಂದು ಅವರು ಹೇಳಿದರು.
ಆಸ್ತಿ ಮೌಲ್ಯಗಳಿಗೆ ಹೊಸ ಮಾರ್ಗಸೂಚಿ ದರ ಪ್ರಕಟಿಸಿದ ಸರ್ಕಾರ
ಈ ಸಂವಾದಕ್ಕೆ ಪರಮೇಶ್ವರ್ ಬಂದಿಲ್ಲ. ಜತೆಗೆ ಬಿಬಿಎಂಪಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಈ ಸಭೆಗೆ ಬಾರದಂತೆ ಸೂಚನೆ ನೀಡಿದ್ದಾರೆ. ಇದರಿಂದ ಬಹಳ ನಿರಾಶೆಯಾಗಿದೆ. ನಮ್ಮ ಬೆಂಗಳೂರು ನಾಗರಿಕರ ಜತೆಗೆ ಕೆಲಸ ಮಾಡಲು ನಾನಂತೂ ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.
ಬೆಂಗಳೂರು ನಗರ ಇದೇ ಪರಿಸ್ಥಿತಿಯಲ್ಲಿ ಮುಂದುವರಿದರೆ ಮುಂದಿನ ಏಳು ವರ್ಷದಲ್ಲಿ ಶೇ 95ರಷ್ಟು ಕಾಂಕ್ರೀಟ್ ಕಾಡಾಗಿರುತ್ತದೆ ಎಂದು ಶನಿವಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತ್ಯಾಜ್ಯ ವಿಲೇವಾರಿ ಸಮಸ್ಯೆ, ಹಸಿರು ಪ್ರಮಾಣ ಕಡಿಮೆ ಆಗುತ್ತಿರುವುದು, ರೇರಾ ಕಾಯ್ದೆಯ ಮೂಲಕವೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.
ನಿವಾಸಿಗಳ ಹಿತರಕ್ಷಣಾ ಒಕ್ಕೂಟದ ಕನಿಷ್ಠ ಐನೂರು ಮಂದಿ ಪಾಲ್ಗೊಂಡರು. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಅಪಾರ್ಟ್ ಮೆಂಟ್ ಗಳಿಂದ ಕೆರೆಗಳು ಕಣ್ಣು ಮುಚ್ಚುತ್ತಿವೆ. ಬಿಲ್ಡರ್ ಗಳು ಮತ್ತು ಸರಕಾರ ಎಲ್ಲ ಸಣ್ಣ ಸಣ್ಣ ಕೆರೆಗಳನ್ನು ಒತ್ತುವರಿ ಮಾಡಿರುವುದು ಕಂಡುಬರುತ್ತದೆ ಎಂದು ಐಐಎಸ್ಸಿಯ ಪರಿಸರ ವಿಜ್ಞಾನ ಕೇಂದ್ರದ ಟಿ.ವಿ.ರಾಮಚಂದ್ರ ಹೇಳಿದರು.
ಭೂಪರಿವರ್ತನೆ ಪ್ರಕ್ರಿಯೆ ಸರಳಗೊಳಿಸಲು ರಾಜ್ಯ ಸರ್ಕಾರ ತೀರ್ಮಾನ
ಫ್ರೆಂಡ್ಸ್ ಆಫ್ ಲೇಕ್ಸ್ ಫೌಂಡೇಷನ್ ನ ಸಹ ಸ್ಥಾಪಕ ವಿ.ರಾಮಪ್ರಸಾದ್ ಮಾತನಾಡಿ, ಕಸ ಸಂಗ್ರಹ ವ್ಯವಸ್ಥೆಯಲ್ಲೇ ಸಮಸ್ಯೆ ಇರುವುದರಿಂದ ಕೆರೆಗಳು ಕಸ ಸುರಿಯುವ ತೊಟ್ಟಿಗಳಾಗಿವೆ. ಈ ವರ್ಷ ಸ್ವಚ್ಛ ಸರ್ವೇಕ್ಷಣಾ ಆರಂಭವಾಗಿದೆ. ಬಿಬಿಎಂಪಿಯ ನಿರ್ಲಕ್ಷ್ಯದ ವಿರುದ್ಧ ಹೋರಾಟ ನಡೆಸಲಾಗುವುದು" ಎಂದರು.
ಮಲ್ಲೇಶ್ವರದ ಶಾಸಕ ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಸದ್ಯ ಸಾಕಷ್ಟು ಸಂಸ್ಥೆಗಳಿವೆ. ಒಂದೊಂದು ಸಂಸ್ಥೆಯು ಎರಡು ಕೆರೆಗಳನ್ನು ದತ್ತು ತೆಗೆದುಕೊಂಡರೂ ಮತ್ತೆ ಅವುಗಳ ಪುನರುಜ್ಜೀವನ ಸಾಧ್ಯ ಎಂದರು. ರೇರಾ ಕಾಯ್ದೆ ಸಮರ್ಪಕ ಅನುಷ್ಠಾನ ಆಗದ ಕಾರಣಕ್ಕೆ ಜನರಿಗೆ ಈಗಲೂ ಮೋಸ ಆಗುತ್ತಿದೆ ಎಂದು ವಕೀಲೆ ಹಾಗೂ ರೇರಾ ಕಾಯ್ದೆ ತಜ್ಞೆ ಎಚ್.ಶಾರದಾ ಖೇದ ವ್ಯಕ್ತಪಡಿಸಿದರು.
ಸಂಸದ ಪಿ.ಸಿ.ಮೋಹನ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.