ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಡೆಯಲು ಜಲಮಂಡಳಿ ಯೋಜನೆ ಏನು?
ಬೆಂಗಳೂರು, ಮಾರ್ಚ್ 07: ಬೇಸಿಗೆ ಪ್ರಾರಂಭದಲ್ಲಿದ್ದೇವೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಯಲು ಜಲಮಂಡಳಿ ಕ್ರಿಯಾ ಯೋಜನೆ ರೂಪಿಸಿದೆ.
ಕಾವೇರಿ ಕಣಿವೆ ಜಲಾಶಯಗಳಿಂದ ನಗರಕ್ಕೆ ಪ್ರತಿವರ್ಷ 18.90 ಟಿಎಂಸಿ ನೀರು ಪೂರೈಕೆಯಾಗುತ್ತಿದ್ದು, ಪ್ರತಿ ತಿಂಗಳು 1.57 ಟಿಎಂಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಮೂರು ಜಲಾಶಯಗಳಲ್ಲಿ 19.55 ಟಿಎಂಸಿ ನೀರಿದ್ದು, ಯಾವುದೇ ಸಮಸ್ಯೆಯಾಗದಂತೆ ನಿರ್ವಹಿಸಲಾಗುತ್ತದೆ ಎಂದು ಮೇಯರ್ ಸಂಪತ್ ರಾಜ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ 25 ಜೆಟ್ಟಿಂಗ್ ಯಂತ್ರ ಖರೀದಿ
ಕಾವೇರಿ ವಿವಿಧ ಹಂತಗಳಿಂದ ನಗರಕ್ಕೆ ನೀರು ಸರಬರಾಜಾಗುವ ಪ್ರಮಾಣವನ್ನು ಆಧರಿಸಿ ನಗರದಲ್ಲಿನ ನೆಲಮಟ್ಟದ ಜಲಾಶಯಗಳಲ್ಲಿ ನೀರು ಶೇಖರಣೆಯನ್ನು ನಿಗಾವಹಿಸಿ ವಲಯ ಮಟ್ಟದ ಅಪರ ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ವಿಶೇಷ ಅಧಿಕಾರಿಗಳು ಸಮಾನ ಪ್ರಮಾಣದಲ್ಲಿ ನೀರು ಸರಬರಾಜು ನಿರ್ವಹಣೆ ಮಾಡಲಿದ್ದಾರೆ ಎಂದು ಜಲಮಂಡಳಿ ಪ್ರಧಾನ ಅಭಿಯಂತರ ಕೆಂಪರಾಮಯ್ಯ ವಿವರಿಸಿದ್ದಾರೆ.
ನೀರು ಸರಬರಾಜು ಬಗ್ಗೆ ದೂರು ಸ್ವೀಕರಿಸಲು ಬಿಬಿಎಂಪಿ ಕಂಟ್ರೋಲ್ ರೂಂಗಳಲ್ಲಿ ಜಲಮಂಡಳಿ ವತಿಯಿಂದ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದೂರುಗಳು ಬಂದಲ್ಲಿ ಅವುಗಳನ್ನು ಇತ್ಯರ್ಥಪಡಿಸಲು ಈ ಸಿಬ್ಬಂದಿ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಟ್ಯಾಂಕರ್ ಮೂಲಕ ನೀರು ಪೂರೈಕೆ: ಜಲಮಂಡಳಿ ಸುರ್ದಿಯಲ್ಲಿ 68 ಟ್ಯಾಂಕರ್ ಗಳಿದ್ದು, ನೀರು ಸರಬರಾಜು ಕೊರತೆ ಪ್ರದೇಶಗಳಿಗೆ ನೀರು ಪೂರೈಸಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಕೊಳವೆ ಬಾವಿಗಳ ನಿರ್ವಹಣೆ: ಜಲ ಮಂಡಳಿ ವ್ಯಾಪ್ತಿಯ 1,600ಕೊಳವೆ ಬಾವಿ ಕಿರುನೀರು ಸರಬರಾಜು ಘಟಕಗಳನ್ನು ಶುದ್ಧಗೊಳಿಸಿ ಗುಣಮಟ್ಟದ ನೀರು ನೀಡಲಾಗುತ್ತಿದೆ. ಜತೆಗೆ ಜಲಮಂಡಳಿ ವತಿಯಿಂದ 9,275 ಸಾರ್ವಜನಿಕ ಕೊಳವೆ ಬಾವಿಗಳನ್ನು 40 ಗುತ್ತಿಗೆದಾರರ ಮೂಲಕ ಈಗಾಗಲೇ ನಿರ್ವಹಣೆ ಮಾಡಲಾಗುತ್ತಿದೆ.
ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಸಮಸ್ಯೆಗಳಿದ್ದಲ್ಲಿ 080-2223 8888 ಅಥವಾ 1916ಕ್ಕೆ ಕರೆ ಮಾಡಬಹುದು.