ತಮಿಳುನಾಡಿಗೆ ತೆರಳುವ ಕೆಎಸ್ ಆರ್ ಟಿಸಿ ಬಸ್ ಸೇವೆ ರದ್ದು
ಬೆಂಗಳೂರು, ಡಿಸೆಂಬರ್ 5: ತಮಿಳುನಾಡಿಗೆ ತೆರಳುವ ಎಲ್ಲ ಬಸ್ ಸೇವೆಗಳನ್ನು ಕೆಎಸ್ ಆರ್ ಟಿಸಿ ತಾತ್ಕಾಲಿಕವಾಗಿ ರದ್ದು ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಭಾನುವಾರ ಹೃದಯಾಘಾತವಾಗಿದ್ದು, ತಮಿಳುನಾಡಿನಲ್ಲಿ ಉದ್ವಿಗ್ನ ವಾತಾವರಣವಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ತಿರುವಣ್ಣಾಮಲೈನಲ್ಲಿ ಕೆಲ ದುಷ್ಕರ್ಮಿಗಳು ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ಎಸೆದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದಿಂದ ತಮಿಳುನಾಡಿಗೆ ಮತ್ತೆ ಯಾವಾಗ ಕೆಎಸ್ ಆರ್ ಟಿಸಿ ಬಸ್ ಸೇವೆ ಆರಂಭವಾಗುತ್ತದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.[ಬೆಳಗ್ಗೆ 11ಕ್ಕೆ ಎಐಎಡಿಎಂಕೆ ಶಾಸಕರ ಜಮೆ: ಮಹತ್ವದ ಘೋಷಣೆ ಸಾಧ್ಯತೆ!]
ಈ ಮಧ್ಯೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಗಡಿ ಭಾಗಕ್ಕೆ ಧಾವಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ಇನ್ನು ಜಯಲಲಿತಾ ಅವರು ದಾಖಲಾಗಿರುವ ಚೆನ್ನೈನ ಅಪೋಲೋ ಆಸ್ಪತ್ರೆ ಹೊರಭಾಗದಲ್ಲೂ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.[ಜಯಲಲಿತಾ ಅನಾರೋಗ್ಯ: ಸೆಪ್ಟೆಂಬರ್ 23ರಿಂದ ಡಿಸೆಂಬರ್ 4ರವರೆಗೆ]
ಜಯಲಲಿತಾ ಅವರಿಗೆ ಹೃದಯಾಘಾತವಾದ ಸುದ್ದಿ ಹರಡುತ್ತಿದ್ದಂತೆ ಅಪೋಲೋ ಆಸ್ಪತ್ರೆಯೆಡೆಗೆ ಗುಂಪು ಗುಂಪಾಗಿ ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನಜಂಗುಳಿ ನಿಯಂತ್ರಿಸುವ ಸಲುವಾಗಿ ಅಪೋಲೋ ಆಸ್ಪತ್ರೆ ಹೊರಭಾಗ ಬ್ಯಾರಿಕೇಡ್ ಹಾಕಲಾಗಿದೆ. ಆದರೂ ಜನರನ್ನು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿದೆ.