ಐಎಎಸ್ ಅಧಿಕಾರಿ ಮನೆಗೆ ಕನ್ನ ಹಾಕಿದ್ದ ಖದೀಮರು ಸಿಕ್ಕಿಬಿದ್ರು
ಬೆಂಗಳೂರು, ಜು.20: ಕೆಲ ತಿಂಗಳ ಹಿಂದೆ ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಹಾಗೂ ಮಾಜಿ ರಾಜ್ಯ ಚನಾವಣಾ ಆಯೋಗದ ಆಯುಕ್ತ ಪಿ.ಎನ್. ಶ್ರೀನಿವಾಸ್ ಆಚಾರಿ ಅವರ ಮನೆಗೆ ಕನ್ನಾ ಹಾಕಿದ್ದ ಖದೀಮರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಅಧಿಕಾರಿಗಳ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದರು. ರಾಜಸ್ಥಾನ ಮೂಲ ಜಗದೀಶ್(34) ರತನ್ ರಾಜೇಂದ್ರ (30) ಬಂಧಿತರು. ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಝೂಮ್ ಕಾರಲ್ಲಿ ಬರ್ತಿದ್ರು, ದರೋಡೆ ಮಾಡ್ತಿದ್ರು, ಕೊನೆಗೂ ಸಿಕ್ಕಿಬಿದ್ರು
ಬಂಧಿತ ಆರೋಪಿಗಳಿಂದ 600 ಗ್ರಾಂ ಚಿನ್ನ ಮತ್ತು 2.5 ಕೆ.ಜಿ ಬೆಳ್ಳಿ ಸೇರಿದಂತೆ ರೂ.19 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಕಳ್ಳತನ ನಡೆದಿದ್ದ ಮನೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅನುಮಾನದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
2017ರ ಜುಲೈ 17ರಂದು ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರು ಅಮೆರಿಕ ಪ್ರವಾಸ ಕೈಗೊಳ್ಳುವ ಸಲುವಾಗಿ ವೀಸಾಗೆ ಅರ್ಜಿ ಸಲ್ಲಿಸಲು ಚೆನ್ನೈಗೆ ಕುಟುಂಬ ಸಮೇತ ತೆರಳಿದ್ದರು. ಆ ವೇಳೆ ಅವರ ಮನೆ ಬೀಗ ಮುರಿದು 1 ಕೆ.ಜಿ ಬೆಳ್ಳಿ 240 ಗ್ರಾಂ ಚಿನ್ನಾಭರಣಗಳನ್ನು ಆರೋಪಿಗಳು ದೋಚಿದ್ದರು.
ಅದೇ ವರ್ಷ ಡಿಸೆಂಬರ್ 22 ರಂದು ತಮ್ಮ ಕುಟುಂಬ ಸಮೇತ ಮೈಸೂರಿಗೆ ತೆರಳಿದ್ದಾಗ ಚುನಾವಣಾ ಆಯುಕ್ತ ಶ್ರೀನಿವಾಸ್ ಆಚಾರಿ ಅವರ ಮನೆಗೆ ನುಗ್ಗಿ 100 ಗ್ರಾಂ ಚಿನ್ನ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದರು. ಅಲ್ಲದೆ, ಒಟ್ಟು ಆರೋಪಿಗಳಿಂದ 8 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.