ಕಸವನಹಳ್ಳಿ ಕಟ್ಟಡ ದುರಂತ : 15 ಕಾರ್ಮಿಕರ ರಕ್ಷಣೆ
ಬೆಂಗಳೂರು, ಫೆಬ್ರವರಿ 16 : ಕಸವನಹಳ್ಳಿಯಲ್ಲಿ ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 15 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಮೂರು ಜನರು ಮೃತಪಟ್ಟಿದ್ದಾರೆ.
17ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕದಳದ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿಗಳು 15 ಜನರನ್ನು ರಕ್ಷಣೆ ಮಾಡಿದ್ದಾರೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಇನ್ನೂ ಮುಂದುವರೆದಿದೆ.
ಕಟ್ಟಡ ಕುಸಿತ ತನಿಖೆಗೆ ತಂಡ, ಮೃತರ ಕುಟುಂಬಕ್ಕೆ ರು.5 ಲಕ್ಷ: ಕೆ.ಜೆ.ಜಾರ್ಜ್
'ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಗುರುವಾರ ಸಂಜೆ ಕಸವನಹಳ್ಳಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದುಬಿದ್ದಿತ್ತು. ಮೂರು ಜನರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದರು. ಗುರುವಾರ ಸಂಜೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಾನ್ಯ DGP ರವರ ನೇತೃತ್ವದಲ್ಲಿ ರಕ್ಷಣಾ ಕಾರ್ಯವನ್ನು ಅಗ್ನಿಶಾಮಕ ಇಲಾಖೆ SDRF&NDRF ಗಳನ್ನು ಬಳಸಿಕೊಂಡು ಉಳಿದ ಕಾರ್ಮಿಕರ ರಕ್ಷಣೆಗಾಗಿ ತೀವ್ರವಾದ ಶೋಧ ಕಾರ್ಯ ಬರದಿಂದ ಸಾಗಿದೆ.@DGP_FIRE , @IGP_Fire pic.twitter.com/RmPpL4Y838
— Karnataka Fire Dept (@KarFireDept) February 15, 2018
ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕಟ್ಟಡದ ಮಾಲೀಕ ರಫೀಕ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.