ವಾಜಪೇಯಿ ಅಸ್ತಂಗತ ಎಂದು ಟ್ವೀಟಿಸಿ, ಡಿಲೀಟ್ ಮಾಡಿದ ಯಡಿಯೂರಪ್ಪ!
ಬೆಂಗಳೂರು, ಆಗಸ್ಟ್ 16: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿ ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ.
Live Updates:ವಿಷಮಿಸಿದ ಅಟಲ್ ಆರೋಗ್ಯ,ಸದ್ಯದಲ್ಲೇ ಹೆಲ್ತ್ ಬುಲೆಟಿನ್
ಬೆಳಗ್ಗೆಯಷ್ಟೇ ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದಾರೆಂದು ಟ್ವೀಟ್ ಮಾಡಿ ಪ್ರಮಾದ ಎಸಗಿದ್ದರು. ಇದೀಗ ಏಮ್ಸ್ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಬರುವ ಮೊದಲೇ ಯಡಿಯೂರಪ್ಪ ಅವರೂ ಈ ರೀತಿ ಟ್ವೀಟ್ ಮಾಡಿ ಪ್ರಮಾದ ಎಸಗಿರುವುದು ವಾಜಪೇಯಿ ಅವರ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.
ಜೊತೆಗೆ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಸಹ ವಾಜಪೇಯಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.
ವಾಜಪೇಯಿ ನಿಧನ ಎಂದು ಟ್ವೀಟಿಸಿ ಪ್ರಮಾದ ಎಸಗಿದ ತ್ರಿಪುರ ರಾಜ್ಯಪಾಲ
ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಇಂಥ ಬೇಜವಾಬ್ದಾರಿ ವರ್ತನೆ ತೋರುವುದು ಸರಿಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.
ಅನಾರೋಗ್ಯದ ಕಾರಣ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವಾಜಪೇಯಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಶೀಘ್ರದಲ್ಲೇ ಅವರ ಆರೋಗ್ಯಕ್ಕೆ ಸಂಬಂಧಿಸಿದ ಹೆಲ್ತ್ ಬುಲೆಟಿನ್ ಅನ್ನು ಏಮ್ಸ್ ಆಸ್ಪತ್ರೆ ಬಿಡುಗಡೆ ಮಾಡಲಿದೆ.