ಪಟಾಕಿ ತಲೆಗೆ ಬಡಿದು 12 ವರ್ಷದ ಬಾಲಕ ಸಾವು
ಬೆಂಗಳೂರು, ಜನವರಿ 15: ಪಟಾಕಿ ಪ್ರದರ್ಶನ ನೋಡಲು ಹೋಗಿದ್ದ ಬಾಲಕನ ಮೇಲೆ ಪಟಾಕಿ ಬಿದ್ದು ಮೃತಪಟ್ಟಿರುವ ಘಟನೆ ನಗರದ ಹಲಸೂರಿನಲ್ಲಿ ನಡೆದಿದೆ.
ಹಲಸೂರಿನ ಕೆಂಬ್ರಿಡ್ಜ್ ರಸ್ತೆ ಬಳಿ ಲೂರ್ದ್ ಚರ್ಚ್ನಲ್ಲಿ ನಿನ್ನೆ ರಾತ್ರಿ ಬೃಹತ್ ಪಟಾಕಿ ಪ್ರದರ್ಶನ ಆಯೋಜಿಸಲಾಗಿತ್ತು, ಪ್ರದರ್ಶನ ನೋಡಲು ಬಾಲಕ ಧನುಷ್(12) ಸಹ ಹೋಗಿದ್ದ ಆದರೆ ಆತನ ಅದೃಷ್ಟ ಕೈಕೊಟ್ಟು, ಹಾರಿ ಬಂದ ರಾಕೆಟ್ ಪಟಾಕಿ ಒಂದು ಧನುಶ್ ತಲೆಗೆ ತಗುಲಿ ಸ್ಪೋಟಗೊಂಡು ಧನುಶ್ ಅಲ್ಲೇ ಜೀವ ಬಿಟ್ಟಿದ್ದಾನೆ.
ಅಲಿಘಡದಲ್ಲಿ ಪಟಾಕಿ ಸಿಡಿದು ತಾಯಿ, ಮಗಳ ದುರ್ಮರಣ
ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಧನುಶ್, ಆತನ ತಂದೆ-ತಾಯಿಗೆ ಒಬ್ಬನೇ ಮಗ.
ಬೃಹತ್ ಪಟಾಕಿ ಪ್ರದರ್ಶನ ಏರ್ಪಡಿಸಿದ್ದರೂ ಅಲ್ಲಿ ಯಾವುದೇ ಪೊಲೀಸ್ ಕಾವಲಿರಲಿಲ್ಲ, ಆಂಬುಲೆನ್ಸ್ ಆಗಲಿ ಅಥವಾ ಅಗ್ನಿ ಅವಘಡ ಸಂಭವಿಸಿದರೆ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ವಾಹನ ಸಹ ಇರಲಿಲ್ಲ, ಆಯೋಜಕರ ನಿರ್ಲಕ್ಷ್ಯತನದಿಂದಲೇ ಬಾಲಕನ ಜೀವ ಹೋಗಿದೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಲೂರ್ದ್ ಚರ್ಚ್ ವತಿಯಿಂದ ಹಲವು ವರ್ಷಗಳಿಂದ ಹೊಸ ವರ್ಷದ ಎರಡನೇ ಭಾನುವಾರ ಪಟಾಕಿ ಪ್ರದರ್ಶನ ಆಯೋಜಿಸಲಾಗುತ್ತದೆ. ಪಟಾಕಿ ಪ್ರದರ್ಶನದಲ್ಲಿ ಬೃಹತ್ ಗಾತ್ರದ ರಾಕೆಟ್ಗಳು, ಪಟಾಕಿಗಳನ್ನು ಹಚ್ಚಲಾಗುತ್ತದೆ, ಇದನ್ನು ನೋಡಲು 1000 ಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ.
ಪ್ರಸ್ತುತ ಪಟಾಕಿ ಪ್ರದರ್ಶನ ಆಯೋಜಿಸಿದ್ದ ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.