ಅರಿಮೆ ಮಾತುಕತೆ : ಬಾನಂಗಳದಲ್ಲಿ ಏನೇನು ಅಡಗಿದೆ?
ಬೆಂಗಳೂರು, ಅಕ್ಟೋಬರ್ 16: ಇದೇ ತಿಂಗಳ 22ರ ಭಾನುವಾರದಂದು ಬೆಳಗ್ಗೆ 11.30ಕ್ಕೆ ಮುನ್ನೋಟ ಪುಸ್ತಕ ಮಳಿಗೆಯಲ್ಲಿ 'ಬಾನಂಗಳದಲ್ಲಿ ಏನೇನು ಅಡಗಿದೆ ಗೊತ್ತೆ?' ಪುಸ್ತಕ ಬಿಡುಗಡೆ ಆಗಲಿದೆ. ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಸೌಥ್ ಅವೆನ್ಯೂ ಕಾಂಪ್ಲೆಕ್ಸ್ ನಲ್ಲಿ ಮುನ್ನೋಟ ಪುಸ್ತಕ ಮಳಿಗೆ ಇದೆ.
ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು, ಬಾನಬಂಡೆಗಳು, ಬೀಳ್ಚುಕ್ಕಿಗಳು, ಅಬ್ಬಬ್ಬಾ ..ಏನೆಲ್ಲ ಇದೆ ಈ ಬಾನಂಗಳದಲ್ಲಿ ! ಬೆಳಕಿನ ಬೆನ್ನಲ್ಲೇ ಬರುವ ಕತ್ತಲೆ, ಕತ್ತಲೆಯ ಕೊನೆಯಲ್ಲಿ ಕಾಣುವ ಬೆಳಕು. ಸೋಜಿಗದ ಈ ಜಗದಲ್ಲಿ ಏನೆಲ್ಲಾ ಇದೆ? ಅಷ್ಟಕ್ಕೂ ಈ ಜಗ ಹೇಗೆ ಉಂಟಾಯಿತು?
ಬಾನಿನಂಗಳದ ಈ ಎಲ್ಲ ವಿಸ್ಮಯದ ಪ್ರಶ್ನೆಗಳ ಬೆನ್ನು ಹತ್ತಿದ ವಿಜ್ಞಾನ ಪ್ರಪಂಚಕ್ಕೆ ಕಂಡದ್ದೇನು? ಬಾನಂಗಳದ ಕುರಿತ ವಿಜ್ಞಾನದ ಸಂಶೋಧನೆಗಳು ಮನುಕುಲಕ್ಕೆ ತಂದ ಅನುಕೂಲಗಳೇನು? ಬಾನರಿಮೆಯ ಎಲ್ಲ ಗುಟ್ಟನ್ನು ಕನ್ನಡದಲ್ಲೇ ರಟ್ಟು ಮಾಡುವ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮ ಇದು.
ಈ ಪುಸ್ತಕ ಬಿಡುಗಡೆಗೆ ಶಾಲೆಯಲ್ಲಿ ಓದುವ ನಿಮ್ಮ ಮಕ್ಕಳೂ ಇದ್ದರೆ ಒಳ್ಳೆಯದು. ಮಕ್ಕಳಿಗೆ ಗಣಿತ ಪಾಠ ಮಾಡುವ ಅಮರ್ ಹೊಳೆಗದ್ದೆ ಅವರು ಈ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.