ಹೋಹೋ ಫೇಲ್; ಆಹಾ ಬರುತಿದೆ ಬೆಂಗಳೂರು ದರ್ಶಿನಿ
ಬೆಂಗಳೂರು, ಜ. 3: ಅಂದದೂರು, ಚೆಂದದೂರು ಬೆಂಗಳೂರು ನೋಡಲು ರಾಜ್ಯದ ಹಲವೆಡೆಯಿಂದ ಜನರು ಬರುತ್ತಾರೆ. ಸಿಲಿಕಾನ್ ಸಿಟಿ ಎಂಬ ಖ್ಯಾತಿ ಸಿಕ್ಕ ಮೇಲೆ, ಅಮೆರಿಕ ಅಧ್ಯಕ್ಷ ಒಬಾಮಾ ಬಾಯಲ್ಲಿ ಕೇಳಿದ ಮೇಲೆ ನಗರ ನೋಡಲು ಬರುವವರು ಹೆಚ್ಚಾಗಿದ್ದಾರೆ.
ಅವರ ಕುತೂಹಲ ತಣಿಸಲು 'ಬೆಂಗಳೂರು ದರ್ಶಿನಿ' ಬಸ್ ಸೇವೆ ಆರಂಭಿಸಲು ಬಿಎಂಟಿಸಿ ನಿರ್ಧರಿಸಿದೆ. ಜೊತೆಯಲ್ಲಿಯೇ ಮೆಜೆಸ್ಟಿಕ್ನಿಂದ ವಿಮಾನ ನಿಲ್ದಾಣಕ್ಕೆ 'ತಡೆರಹಿತ ವಾಯುವಜ್ರ ಸೇವೆ'ಯೂ ಆರಂಭವಾಗುವುದು. ಈ ಎರಡೂ ಬಸ್ಗಳಿಗೆ ಜ. 7ರಂದು ಚಾಲನೆ ನೀಡಲಾಗುವುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ದರ್ಶಿನಿ ಯೋಜನೆಯಡಿ ಎರಡು ಹವಾನಿಯಂತ್ರಿತ ಬಸ್ಗಳನ್ನು ಸೇವೆಗೆ ಬಳಸಿಕೊಳ್ಳಲಾಗುವುದು. ಇವು ಮೆಜೆಸ್ಟಿಕ್ನಿಂದ ಪ್ರವಾಸಿಗರನ್ನು ಹೊತ್ತು ನಗರದ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿಸುತ್ತದೆ. ನಂತರ ಮತ್ತೆ ಮೆಜೆಸ್ಟಿಕ್ಗೆ ತಂದುಬಿಡುತ್ತದೆ. ಒಂದು ದಿನದ ಪಿಕ್ನಿಕ್ನಲ್ಲಿ ಸಂಪೂರ್ಣ ಬೆಂಗಳೂರು ಸುತ್ತಿಸಿ, ಕುತೂಹಲ ತಣಿಸುವ ಉದ್ದೇಶ ಬಿಎಂಟಿಸಿಯದ್ದು. [ಓಎಲ್ಎಕ್ಸ್ ನಲ್ಲಿ ಬಿಎಂಟಿಸಿ ಬಸ್ ಮಾರಾಟಕ್ಕಿಟ್ಟ ಕಿಡಿಗೇಡಿ]
ಈ ಬಸ್ನಲ್ಲಿ ವಯಸ್ಕರಿಗೆ 400 ರು., ಮಕ್ಕಳಿಗೆ 300 ರು. ಪ್ರಯಾಣ ದರವಿರುತ್ತದೆ. ಈ ಸೇವೆಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವೂ ಇದೆ. ಬೆಂಗಳೂರು ದರ್ಶಿನಿಯ ಎರಡು ಬಸ್ಗಳಿಗೆ ಎರಡು ಮಾರ್ಗಗಳನ್ನು ನಿಗದಿಪಡಿಸಲಾಗಿದೆ.
ಬೆಂಗಳೂರು ದರ್ಶಿನಿ- 1 ಮಾರ್ಗ : ಮೆಜೆಸ್ಟಿಕ್ನಿಂದ ಈ ಬಸ್ ಪ್ರತಿದಿನ ಬೆಳಗ್ಗೆ 8.45ಕ್ಕೆ ಹೊರಡಲಿದೆ. ಟಿಪ್ಪು ಅರಮನೆ, ಬಸವನಗುಡಿಯ ದೊಡ್ಡಬಸವಣ್ಣ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನ, ಲಾಲ್ಬಾಗ್, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಕಬ್ಬನ್ ಪಾರ್ಕ್, ವಿಧಾನಸೌಧ, ಜವಾಹರಲಾಲ್ ನೆಹರು ತಾರಾಲಯ, ಇಂದಿರಾಗಾಂಧಿ ಸಂಗೀತ ಕಾರಂಜಿ, ಇಸ್ಕಾನ್, ಪ್ರಸನ್ನ ಆಂಜನೇಯ ದೇವಸ್ಥಾನವನ್ನು ಭೇಟಿ ಮಾಡಿಸಲಿದೆ. ರಾತ್ರಿ ಮತ್ತೆ 8ಕ್ಕೆ ಕೆಂಪೇ ಗೌಡ ಬಸ್ ನಿಲ್ದಾಣ ತಲುಪುತ್ತದೆ. [ಬಿಎಂಟಿಸಿ ಬಸ್ ಗೆ ನಾಲ್ವರ ಬಲಿ]
ಬೆಂಗಳೂರು ದರ್ಶಿನಿ- 2 ಮಾರ್ಗ : ಈ ಬಸ್ ಕೂಡ ಮೆಜೆಸ್ಟಿಕ್ನಿಂದ ಬೆಳಗ್ಗೆ 8.45ಕ್ಕೆ ಹೊರಡಲಿದೆ. ಇಸ್ಕಾನ್, ಪ್ರಸನ್ನ ಆಂಜನೇಯ ದೇವಸ್ಥಾನ, ಜವಾಹರಲಾಲ್ ನೆಹರು ತಾರಾಲಯ, ಇಂದಿರಾಗಾಂಧಿ ಸಂಗೀತ ಕಾರಂಜಿ, ಕಬ್ಬನ್ ಪಾರ್ಕ್, ವಿಧಾನಸೌಧ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಲಾಲ್ಬಾಗ್, ಬನಶಂಕರಿ ದೇವಸ್ಥಾನ, ದೊಡ್ಡ ಬಸವಣ್ಣ ದೇಗುಲ, ಗವಿಗಂಗಾಧರೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನ, ಟಿಪ್ಪು ಅರಮನೆ ಭೇಟಿ ಮಾಡಿಸಿ ಮತ್ತೆ ರಾತ್ರಿ 8 ಗಂಟೆಗೆ ಮೆಜೆಸ್ಟಿಕ್ ತಲುಪಲಿದೆ.
'ಹೋಹೋ' ಫೇಲ್ : ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ 'ಪಾಪ್ ಆನ್ ಹಾಪ್ ಆಫ್' (ಹೋಹೋ) ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ, ಆರಂಭವಾದಾಗಿನಿಂದ ಇಂದಿನವರೆಗೂ ಈ ಬಸ್ ಬರೀ ನಷ್ಟವನ್ನೇ ದಾಖಲಿಸುತ್ತಿದೆ.
ಕೇವಲ 250 ರೂ.ಗಳಿಗೆ ಬೆಂಗಳೂರು ಮಹಾನಗರದ 22ರಿಂದ 25 ಪ್ರೇಕ್ಷಣೀಯ ಸ್ಥಳಗಳನ್ನು ಹೋಹೋ ಬಸ್ ಸುತ್ತಿಸುತ್ತಿತ್ತು. ಆದರೆ, ಈ ಯೋಜನೆಯಿಂದ ಕೇವಲ ಏಳು ತಿಂಗಳುಗಳಲ್ಲಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಆದ್ದರಿಂದ ಹೋಹೋ ಬಸ್ ಸೇವೆ ಸ್ಥಗಿತಗೊಳಿಸಲಾಗುವುದು. ಅದೇ ಬಸ್ಗಳನ್ನು ಮೆಜೆಸ್ಟಿಕ್ನಿಂದ ವಿಮಾನ ನಿಲ್ದಾಣಕ್ಕೆ ತಡೆರಹಿತ ವಾಯುವಜ್ರ ಸೇವೆ ನೀಡಲು ಬಳಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.