ಮೂರು ತಿಂಗಳಲ್ಲಿ ಜಯದೇವ ಫ್ಲೈಓವರ್ ತೆರವು ಕಾರ್ಯ ಆರಂಭ
ಬೆಂಗಳೂರು, ಆಗಸ್ಟ್ 10: ನಮ್ಮ ಮೆಟ್ರೋದ ಎರಡನೇ ಹಂತದ ಐದನೇ ರೀಚ್ ಕಾಮಗಾರಿಗಾಗಿ ಜಯದೇವ ಹೃದ್ರೋಗ ಆಸ್ಪತ್ರೆ ಸಮೀಪದಲ್ಲಿರುವ ಫ್ಲೈಓವರ್ನ್ನು ತೆರವುಗೊಳಿಸಲು ಸಿದ್ಧತೆ ನಡೆದಿದ್ದು, ಇನ್ನು ಮೂರು ತಿಂಗಳಲ್ಲಿ ತೆರವು ಕಾರ್ಯ ಆರಂಭವಾಗಲಿದೆ.
ಜಯದೇವ ಫ್ಲೈಓವರ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಫ್ಲೈಓವರ್ ತೆರವು ಕಾರ್ಯ ಆರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ ಆರ್.ವಿ.ರಸ್ತೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ 797.29 ಕೋಟಿ ರೂ. ವೆಚ್ಚದಲ್ಲಿ ಮೆಟ್ರೊ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. ಆರ್.ವಿ.ರಸ್ತೆಯಿಂದ ಬರುವ ಮೆಟ್ರೊ ಮಾರ್ಗವು ಇದೇ ಮೇಲುರಸ್ತೆಯ ಮೂಲಕ ಹಾದುಹೋಗಲಿದೆ.
ತಾಂತ್ರಿಕ ದೋಷ: ಆರ್ವಿ ನಿಲ್ದಾಣದಲ್ಲಿ 10 ನಿಮಿಷ ನಿಂತ ಮೆಟ್ರೋ
ಹೀಗಾಗಿ ಮೇಲುರಸ್ತೆಯನ್ನು ಕೆಡವಲು ಸಿದ್ಧತೆ ನಡೆಸಲಾಗಿದೆ. 21 ಕೋಟಿ ರೂ. ವೆಚ್ಚದಲ್ಲಿ ಮೇಲುರಸ್ತೆ ನಿರ್ಮಿಸಿದ್ದ ಬಿಡಿಎ 2006 ರಲ್ಲಿ ಇದನ್ನು ಸಂಚಾರಕ್ಕೆ ಮುಕ್ತಗೊಳಿಸಿತ್ತು. ಬನ್ನೇರುಘಟ್ಟಕ್ಕೆ ಹೋಗುವ ದಾರಿಯಲ್ಲಿ ಬಿಟಿಎಂ ಲೇಔಟ್, ಜೆಪಿ ನಗರ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಕೊಂಡಿಯಾಗಿದ್ದ ಈ ಮೇಲುರಸ್ತೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಮಾಣವಾಗಿತ್ತು. 11 ವರ್ಷಗಳ ಬಳಿಕ ಮೇಲುರಸ್ತೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
21.25 ಕಿ.ಮೀ. ಉದ್ದದ ಗೊಟ್ಟಿಗೆರೆ- ನಾಗವಾರ ಮಾರ್ಗ ಹಾಗೂ 18.82 ಕಿ.ಮೀ. ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗಗಳು ಜಯದೇವ ಆಸ್ಪತ್ರೆ ಬಳಿ ಇಂಟರ್ಚೇಂಜ್ ನಿಲ್ದಾಣ ಹೊಂದಲಿವೆ. ಆರ್.ವಿ.ರಸ್ತೆ-ಸಿಲ್ಕ್ ಬೋರ್ಡ್ ಮಾರ್ಗವನ್ನು ಪ್ಯಾಕೇಜ್ ಆಗಿ ವಿಂಗಡಿಸಿ ಟೆಂಡರ್ ನೀಡಲಾಗಿದೆ. ಈ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ (ಇಂಟರ್ಚೇಂಜ್), ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ನಿಲ್ದಾಣಗಳು ನಿರ್ಮಾಣವಾಗಲಿದೆ.
ಸೆಪ್ಟೆಂಬರ್ನಲ್ಲಿ ಆರು ಬೋಗಿಗಳ ಮತ್ತೊಂದು ಮೆಟ್ರೋ ಆರಂಭ
ಈ ಯೋಜನೆ ರೂಪಿಸುವ ಹಂತದಲ್ಲಿ ಮೇಲುರಸ್ತೆಯನ್ನು ಕೆಡವದೆ ಮಾರ್ಗ ನಿರ್ಮಿಸಬೇಕು ಎಂದೂ ಚರ್ಚೆಯಾಗಿತ್ತು. ಈ ಭಾಗದಲ್ಲಿ ಸುರಂಗ ಮಾರ್ಗವನ್ನೂ ನಿರ್ಮಿಸಬಹುದು ಎಂಬ ಸಲಹೆ ಕೇಳಿಬಂದಿತ್ತು. ಆದರೆ, ಪರ್ಯಾಯ ಯೋಜನೆಯಿಲ್ಲದೆ ಮೇಲುರಸ್ತೆಯನ್ನು ಕೆಡವಲಾಗುತ್ತಿದೆ.
ಕಾಮಗಾರಿಗೆ ಚಾಲನೆ ನೀಡಲು ಕಳೆದ ಒಂದು ವರ್ಷದಿಂದ ಪ್ರಕ್ರಿಯೆ ನಡೆಯುತ್ತಿದ್ದು, ಮಾರ್ಗದ ನಿರ್ಮಾಣ ಗುತ್ತಿಗೆಯನ್ನು ಕಳೆದ ಜುಲೈನಲ್ಲಿ ಎಚ್ಸಿಸಿ ಕಂಪನಿಗೆ ನೀಡಲಾಗಿತ್ತು. ಕಾಮಗಾರಿಯು 36 ತಿಂಗಳು ನಡೆಯಲಿದ್ದು, ಈ ಹಂತದಲ್ಲಿ ಸಂಚಾರ ಪೊಲೀಸರ ಅನುಮತಿ ಪಡೆಯುವುದು ಮುಖ್ಯವಾಗಿದೆ. ಅದರಂತೆ ಸಂಚಾರಿ ಪೊಲೀಸರ ಬಳಿ ದೀರ್ಘ ಮಾತುಕತೆ ನಡೆಸಿ ಅನುಮತಿ ಪಡೆದಿದ್ದು, ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಪೊಲೀಸರು ಗುರುತಿಸುತ್ತಿದ್ದಾರೆ.
ಬೊಮ್ಮಸಂದ್ರದ ಕಡೆ ತೆರಳಲು ಕಾರು, ದ್ವಿಚಕ್ರ ವಾಹನಗಳಿಗೆ ಮಾರೇನಹಳ್ಳಿ ರಸ್ತೆಯನ್ನು ಪರ್ಯಾಯವಾಗಿ ಗುರುತಿಸಲಾಗಿದೆ. ಬಸ್ಸು, ಲಾರಿಗಳು ಇಲ್ಲಿ ಚಲಿಸಲು ಅಸಾಧ್ಯವಾಗಿರುವುದರಿಂದ ಬೇರೊಂದು ದೂರದ ಮಾರ್ಗವನ್ನು ಗುರುತಿಸಲಾಗುತ್ತಿದೆ. ಕಾಮಗಾರಿ ಆರಂಭವಾಗುವ ಮುನ್ನ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸಾರ್ವಜನಿಕರಿಗೆ ತಿಳಿಸಲಿದ್ದಾರೆ.ಗುತ್ತಿಗೆ ಪಡೆದ ಸಂಸ್ಥೆಯು, ಸಿಲ್ಕ್ ಬೋರ್ಡ್ವರೆಗಿನ ಮಾರ್ಗ ಹಾಗೂ ನಿಲ್ದಾಣವನ್ನು ನಿರ್ಮಿಸಲಿದೆ.
ಇಲ್ಲಿಂದ ಎಚ್ಎಸ್ಆರ್ ಲೇಔಟ್, ಆಕ್ಸ್ಫರ್ಡ್ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಪುರ, ಹೊಸ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ಮಾರ್ಗದಲ್ಲಿ ಹಳಿ ಸಾಗಲಿದೆ. ಒಟ್ಟು ಈ ಯೋಜನೆಯಲ್ಲಿ 18 ನಿಲ್ದಾಣಗಳು ನಿರ್ಮಾಣವಾಗಲಿದೆ.