ಹಳಿ ತಪ್ಪಿದ ವ್ಯವಸ್ಥೆಯಲ್ಲಿ ನಮ್ಮ ಮೆಟ್ರೋ: ಸಿಬ್ಬಂದಿಗಳಿಂದ ಮುಷ್ಕರ
ಬೆಂಗಳೂರು, ಮಾರ್ಚ್ 07: ಮೆಟ್ರೋ ನಿಗಮವು 8 ವರ್ಷದಿಂದ ಸೇವೆ ಸಲ್ಲಿಸಿದ ಸಿಬ್ಬಂದಿಗೂ ಬಡ್ತಿ ನೀಡದಿರುವ ಕ್ರಮವನ್ನು ಖಂಡಿಸಿ ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ಮತ್ತೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ವೇತನ ಪರಿಷ್ಕರಣೆಗೆ ಕೂಡ ಒಂದು ಬೇಡಿಕೆಯಾಗಿದೆ. ಮೆಟ್ರೊ ಸಿಬ್ಬಂದಿ ಸೇರಿ ಕಾರ್ಮಿಕ ಸಂಘಟನೆಯನ್ನು ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಮಾನ್ಯತೆ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆ ಆಗಿತ್ತು. ಆದರೆ, ಈ ಸಂಘಟನೆಗೆ ಮಾನ್ಯತೆ ನೀಡಲು ಬಿಎಂಆರ್ ಸಿಎಲ್ ಒಪ್ಪಿಲ್ಲ. ಇದು ಕೂಡಾ ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.
ಟೆಂಡರ್ ರದ್ದು: ಏರ್ಪೋರ್ಟ್ ಮೆಟ್ರೋ ನಿಧಾನ
2017ರ ಜುಲೈ 7ರಂದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಮೆಟ್ರೊ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ನಿಗಮದ ಅಧಿಕಾರಿಗಳು ರಕ್ಷಣೆಗೆ ಧಾವಿಸಿಲ್ಲ ಎಂದು ಆರೋಪಿಸಿ ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ದಿಢೀರ್ ಮುಷ್ಕರ ನಡೆಸಿದ್ದರು. ಇದರಿಂದಾಗಿ ಮೆಟ್ರೊ ಸೇವೆ ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸ್ಥಗಿತಗೊಂಡಿತ್ತು.
ಆಗ ನಡೆದ ಸಂಧಾನ ಸಭೆಯಲ್ಲಿ, ಸಿಬ್ಬಂದಿಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಿಗಮದ ಅಧಿಕಾರಿಗಳು ಒಪ್ಪಿದ್ದರು. ಆ ಬಳಿಕವಷ್ಟೇ ಸಿಬ್ಬಂದಿ ಮುಷ್ಕರ ಹಿಂದಕ್ಕೆ ಪಡೆದಿದ್ದರು.
ನಿಗಮದ ಕಾರ್ಯಾಚರಣೆ ವಿಭಾಗದ ಕೆಲವು ಸಿಬ್ಬಂದಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವುದೇ ಬಡ್ತಿ ನೀಡಿಲ್ಲ. ಸೆಕ್ಷನ್ ಎಂಜಿನಿಯರ್ಗಳಿಗೆ ಸಹಾಯಕ ವ್ಯವಸ್ಥಾಪಕರಾಗಿ ಬಡ್ತಿ ನೀಡಲು ಅವಕಾಶವಿದೆ. ಆದರೆ, ನಿಗಮವು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.
ನಿಗಮದ ಸಿಬ್ಬಂದಿಗೆ ಬಡ್ತಿ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ ಆಗಿದೆ, ಕೇಂದ್ರ ಸರ್ಕಾರ ಸ್ವಾಮ್ಯದ ಉದ್ದಿಮೆಗಳ ಸಿಬ್ಬಂದಿಯ ವೇತನ ಪರಿಷ್ಕರಣೆಗಾಗಿ ರಚಿಸಿರುವ 3ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವುದಕ್ಕೂ ನಿಗಮ ಹಿಂದೇಟು ಹಾಕುತ್ತಿದೆ ಎಂದು ಅವರು ದೂರಿದರು.
ಬೈಯಪ್ಪನಹಳ್ಳಿಯಲ್ಲಿನ ವಸತಿಗೃಹಗಳನ್ನು ವಿವಾಹಿತ ಸಿಬ್ಬಂದಿಗೆ ಹಂಚಿಕೆ ಮಾಡಲು ನಿಗಮ ಮುಂದಾಗಿತ್ತು. ಈ ನಿರ್ಧಾರದಿಂದ ದಿಢೀರ್ ಹಿಂದೆ ಸರಿಯಿತು. ಸಿಬ್ಬಂದಿಗಾಗಿ ಪೀಣ್ಯದಲ್ಲಿ ಹಾಗೂ ಬೈಯಪ್ಪನಹಳ್ಳಿಯಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಯೋಜನೆಯನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಅವರು ತಿಳಿಸಿದರು.