ಬಿಜೆಪಿ ಪಾಲಿಗೆ ಕಿಂಗ್ ಮೇಕರ್ ಆದ ಅಶೋಕ್ 'ದಿ ಸಾಮ್ರಾಟ್'!
ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯ ಇಲ್ಲ, ನಾವೆಲ್ಲಾ ಒಂದೇ ಎಂದು ಕಮಲದ ನಾಯಕರು ಸಾರಿಸಾರಿ ಹೇಳುತ್ತಿದ್ದರೂ, ರಾಜ್ಯ ಬಿಜೆಪಿ ಘಟಕದಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಎನ್ನುವ ಎರಡು ಬಣವಿರುವುದು ಗೊತ್ತಿರುವ ವಿಚಾರ.
ಮೊದಲಿನಿಂದಲೂ ಅನಂತ್ ಕುಮಾರ್ ಬಣದಲ್ಲಿ ಕಾಣಿಸಿಕೊಳ್ಳುತ್ತಿರುವ ಅಶೋಕ್, ಅತಿ ಕಮ್ಮಿ ಅವಧಿಯಲ್ಲಿ ಪಕ್ಷದಲ್ಲಿನ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗಿನ ಸಮಯದಲ್ಲಿ ದೊಡ್ಡ ಹುದ್ದೆಯನ್ನು ಅನುಭವಿಸಿದವರು.
ಪಕ್ಧದ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ 'ಸಾಮ್ರಾಟ್' ಎಂದೇ ಕರೆಸಿಕೊಳ್ಳುವ ಅಶೋಕ್, ಒಬ್ಬ ಅತ್ಯುತ್ತಮ ಸಂಘಟನಾಕಾರನಾಗಿ ಈ ಹಿಂದೆ ಹಲವು ಬಾರಿ ರಾಜ್ಯದಲ್ಲಿ ನರೇಂದ್ರ ಮೋದಿ ಸಾರ್ವಜನಿಕ ಭಾಷಣವನ್ನು ಅಚ್ಚುಕಟ್ಟಾಗಿ ನಿಭಾಯಿಸಿದವರು.(ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ)
ಜೊತೆಗೆ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ವಿಚಾರದಲ್ಲೂ ವೃತ್ತಿಪರತೆಯಿಂದ ಕೆಲಸ ಮಾಡಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಂದ ಸೈ ಎನಿಸಿಕೊಂಡಿದ್ದರು.
ಬಿಬಿಎಂಪಿ ಚುನಾವಣೆಯ ಜವಾಬ್ದಾರಿಯನ್ನು ಕೇಂದ್ರ ಬಿಜೆಪಿ ಮುಖಂಡರು ಅನಂತ್ ಕುಮಾರ್, ಸದಾನಂದ ಗೌಡ ಮತ್ತು ಅಶೋಕ್ ಅವರಿಗೆ ವಹಿಸಿದ್ದರೂ, ಚುನಾವಣೆಯ ಉಸ್ತುವಾರಿಯಾಗಿದ್ದ ಅಶೋಕ್ ಮೇಲೆ ಕೇಂದ್ರದ ಮುಖಂಡರು ಹೆಚ್ಚಿನ ವಿಶ್ವಾಸವಿಟ್ಟಿದ್ದರು ಎನ್ನುವುದು ಸೀಕ್ರೆಟ್ ಆಗಿ ಉಳಿದಿಲ್ಲ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ಪಕ್ಷಗಳಲ್ಲಿ ಇದ್ದಂತೆ ಬಿಜೆಪಿಯಲ್ಲೂ ಹಲವು ಗೊಂದಲಗಳಿದ್ದವು. ರಾಜ್ಯದ ಪ್ರಭಾವಿ ಲಿಂಗಾಯಿತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದರು ಎಂದು ಸಮುದಾಯದ ಮಠಾಧೀಶರು ಬಹಿರಂಗವಾಗಿವೇ ಅಶೋಕ್ ವಿರುದ್ದ ಕಿಡಿಕಾರಿದ್ದರು.
ಬಿಬಿಎಂಪಿ ಚುನಾವಣೆಯಲ್ಲಿ ಕಿಂಗ್ ಮೇಕರ್ ಆದ ಅಶೋಕ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಯಡಿಯೂರಪ್ಪ Vs ಅಶೋಕ್
ಖುದ್ದು ಯಡಿಯೂರಪ್ಪನವರು ರೆಕಮೆಂಡ್ ಮಾಡಿದ ಅಭ್ಯರ್ಥಿಗಳಿಗೂ ಟಿಕೆಟ್ ನಿರಾಕರಿಸಲಾಯಿತು, ಇದರಿಂದ ಯಡಿಯೂರಪ್ಪ ಪ್ರಚಾರಕ್ಕೇ ಬರುವುದಿಲ್ಲ ಎಂದು ಸಿಟ್ಟು ಮಾಡಿಕೊಂಡು ದೆಹಲಿಯಲ್ಲಿ ಠಿಕಾಣಿ ಹೂಡಿದರು ಎಂದು ಸುದ್ದಿಯಾಗಿತ್ತು. ಇದರ ಜೊತೆಗೆ ಯಡಿಯೂರಪ್ಪ ಬೆಂಬಲಿಗ ರುದ್ರೇಶ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಅಶೋಕ್, ಬಿಎಸ್ವೈ ವಿರುದ್ದ ಅಸಂಬದ್ದವಾಗಿ ಮಾತನಾಡಿದರು ಎಂದು ಸುದ್ದಿಯಾಗಿ ಅದಕ್ಕೆ ಅಶೋಕ್ ಸ್ಪಷ್ಟನೆ ನೀಡಿದ್ದೂ ಆಗಿತ್ತು.
ಚುನಾವಣೆಗೆ ಮುನ್ನ ಹಲವು ಗೊಂದಲಗಳು
ಪ್ರಭಾವಿ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ಹಂಚಿಕೆ, ಯಡಿಯೂರಪ್ಪನವರನ್ನು ಕಡೆಗಣಿಸಿದ್ದು, ಟಿಕೆಟ್ ಹಂಚಿಕೆಯಲ್ಲಿನ ಗೊಂದಲ, ಮಾಜಿ ಮೇಯರೊಬ್ಬರು ಪಕ್ಷದ ಮುಖಂಡರ ಬಗ್ಗೆ ಕೇವಲವಾಗಿ ಮಾತನಾಡಿದ್ದು ಇತ್ಯಾದಿ.. ಇತ್ಯಾದ.. ಘಟನೆಗಳು ಬಿಜೆಪಿಗೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದೇ ಭಾವಿಸಲಾಗಿತ್ತು.
ಸಿಎಂ ಸಿಟಿ ರೌಂಡ್
ಕಳೆದ ಐದು ವರ್ಷದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಬಿಜೆಪಿ ನಡೆಸಿದ ಭ್ರಷ್ಟಾಚಾರವನ್ನು ಕಾಂಗ್ರೆಸ್ ಮುಖಂಡರು ಪ್ರಚಾರಕ್ಕೆ ಬಳಸಿಕೊಂಡಿದ್ದು, ಸ್ವತಃ ಮುಖ್ಯಮಂತ್ರಿಗಳೇ ಆಖಾಡಕ್ಕಿಳಿದು ಸಿಟಿ ರೌಂಡ್ ಮಾಡಿದ್ದು ಬಿಜೆಪಿಗೆ ಮುಳುವಾಗಲಿದೆ ಎಂದೇ ವಾಖ್ಯಾನಿಸಲಾಗಿತ್ತು.
ಎಲ್ಲಾ ಲೆಕ್ಕಾಚಾರ ಉಲ್ಟಾ
ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದು ಬಿಜೆಪಿ ಬಿಬಿಎಂಪಿ ಚುನಾವಣೆಯಲ್ಲಿ ಜಯಗಳಿಸಿತು. ನಾಮಪತ್ರ ಹಿಂಪಡೆಯುವ ದಿನದಿಂದ ಚುನಾವಣೆಯ ದಿನದವರೆಗೂ ಅಶೋಕ್ ನೇತೃತ್ವದಲ್ಲಿ ಪಕ್ಷ ಯೋಜನಾಬದ್ದವಾಗಿ ಕೆಲಸ ಮಾಡಿತು. ಸಾಮಾಜಿಕ ಜಾಲ ತಾಣವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿತು. ಮೋದಿ ಹೆಸರನ್ನು ಅತಿರೇಕ ಎನಿಸುವಂತೆ ಬಳಸಿಕೊಂಡಿದ್ದೂ ಹೌದು..
ಅಶೋಕ್ ಪಕ್ಕಾ ವೃತ್ತಿಪರತೆ
ಮಹಾನಗರದ ಬಿಜೆಪಿ ಶಾಸಕರು ಅಶೋಕ್ ನೀಡಿದ್ದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರು. ಯಡಿಯೂರಪ್ಪನವರ ಪ್ರಾಮುಖ್ಯತೆ ಅರಿತ ಅಶೋಕ್ ಕೊನೇ ಕ್ಷಣದಲ್ಲಿ ಅವರನ್ನು ಪ್ರಚಾರಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಹೆಚ್ಚುಕಮ್ಮಿ ಇಡೀ ಕ್ಯಾಬಿನೆಟ್ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದರೂ, ಬಹಿರಂಗ ಪ್ರಚಾರದ ಕೊನೆಯ ಸಮಯದಲ್ಲಿ ತನ್ನ ಪಕ್ಷದ ಪ್ರಮುಖ ಮುಖಂಡರನ್ನು ಕರೆಸಿ, ಮನವೊಲಿಸಿ ಅಶೋಕ್ ಪ್ರಚಾರಕ್ಕೆ ಅಂತಿಮ ಸ್ಪರ್ಷ ನೀಡಿದರು.
ಚುನಾವಣೆಯ ದಿನ
ಚುನಾವಣೆಯ ದಿನ ಪಕ್ಷದ ಕಾರ್ಯಕರ್ತರಿಗೆ, ಬೂತ್ ಮಟ್ಟದ ಮುಖಂಡರಿಗೆ ಮನೆಯಿಂದಲೇ ನಿರ್ದೇಶನ ನೀಡಿ ಪಕ್ಕಾ ಬಿಜೆಪಿ ಮತದಾರರನ್ನು ಮತಕೇಂದ್ರಕ್ಕೆ ಕರೆತರಲು ಅಶೋಕ್ ಸೂಚಿಸಿದ್ದರು. ಚುನಾವಣೆಗೆ ದಿನಾಂಕ ಘೋಷಣೆಯಾದಾಗಲೇ, ಪಕ್ಷದ ನಿಷ್ಟಾವಂತ ಮತದಾರರನ್ನು ಗುರುತಿಸಿ, ಮೋದಿ ಹೆಸರನ್ನು ಬಳಸಿಕೊಳ್ಳಿ ಎನ್ನುವ ಸೂಚನೆಯನ್ನು ಅಶೋಕ್ ನೀಡಿದ್ದರು ಎನ್ನುವ ಸುದ್ದಿಯಿದೆ.
ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ ಅಶೋಕ್
ಒಟ್ಟಿನಲ್ಲಿ ಹಲವು ಅಡೆತಡೆಗಳ ನಡುವೆಯೂ ಬಿಜೆಪಿ, ಅಶೋಕ್ ಮುಂದಾಳುತ್ವದಲ್ಲಿ ನಡೆಸಿದ ವ್ಯವಸ್ಥಿತ ಪ್ರಚಾರ, ಅಂತಿಮ ಕ್ಷಣದಲ್ಲಿ ತಿಳಿಗೊಂಡ ಪಕ್ಷದ ಮುಖಂಡರ ಗೊಂದಲ, ಎಲ್ಲಕ್ಕಿಂತ ಹೆಚ್ಚಾಗಿ ವರ್ಕೌಟ್ ಆಗುತ್ತಿರುವ ಮೋದಿ ಅನ್ನೋ ಹೆಸರು, ಬಿಜೆಪಿಯನ್ನು ಮತ್ತೆ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಾಯ ಮಾಡಿತು. ಚುನಾವಣಾ ಉಸ್ತುವಾರಿಯಾಗಿ ಪಕ್ಕಾ ಪ್ರೊಫೆಸಲ್ ರೀತಿಯಲ್ಲಿ ಕೆಲಸ ಮಾಡಿದ ಸಾಮ್ರಾಟ್ ಅಶೋಕ್ ಬಿಜೆಪಿ ಪಾಲಿಗೆ ಬಿಬಿಎಂಪಿ ಚುನಾವಣೆಯಲ್ಲಿ 'ಕಿಂಗ್ ಮೇಕರ್' ಆದರು.