ಸಿಎಂ ರ 'ದಂಗೆ' ಹೇಳಿಕೆಗೆ ಬಿಜೆಪಿ ಆಕ್ರೋಶ, ಪ್ರಕರಣ ದಾಖಲಿಸಲು ನಿರ್ಧಾರ
ಬೆಂಗಳೂರು, ಸೆಪ್ಟೆಂಬರ್ 20: ಸಿಎಂ ಕುಮಾರಸ್ವಾಮಿ ಅವರ 'ದಂಗೆ ಹೇಳಿಕೆ' ಹಾಗೂ ಅದರ ಬೆನ್ನಲ್ಲೆ ಯಡಿಯೂರಪ್ಪ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಘಟನೆಯಿಂದ ಭಾರಿ ಆಕ್ರೋಶಗೊಂಡಿರುವ ಬಿಜೆಪಿಯು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಆರ್.ಅಶೋಕ್, ಈ ವರೆಗೆ ಯಾವ ಮುಖ್ಯಮಂತ್ರಿಯೂ ದಂಗೆ ಏಳುವಂತೆ ಹೇಳಿರಲಿಲ್ಲ, ಕುಮಾರಸ್ವಾಮಿ ಅವರ ಈ ಮಾತು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದು ದೂರಿದರು.
ನಕ್ಸಲರು, ಮಾವೋವಾದಿಗಳು ನೀಡುವ ಹೇಳಿಕೆಯನ್ನು ಕಾನೂನು ರಕ್ಷಣೆ ಮಾಡಬೇಕಾದ ಮುಖ್ಯಮಂತ್ರಿ ಒಬ್ಬರು ಹೇಳಿದ್ದಾರೆ. ಅವರ ವಿರುದ್ಧ ಸೆಕ್ಷನ್ 124A ಅಡಿ ರಾಜದ್ರೋಹ (ಸೆಡಿಶನ್) ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಎಸ್ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿ
ಯಡಿಯೂರಪ್ಪ ಜತೆ ಚರ್ಚಿಸಿ ರಾಜ್ಯಪಾಲರಿಗೆ ಸಿಎಂ ವಿರುದ್ಧ ದೂರು ನೀಡುವುದಾಗಿಯೂ ಅವರು ಹೇಳಿದರು. ಅಲ್ಲದೆ ದಂಗೆ ಹೇಳಿಕೆ ವಿರುದ್ಧವೂ ದೂರು ದಾಖಲಿಸುವುದಾಗಿ ಅವರು ಹೇಳಿದರು.
'ಗಲಾಟೆ ಆಗಿ ಗಂಟೆಯಾದರೂ ಪೊಲೀಸರು ಬರಲಿಲ್ಲ'
ವಿರೋಧ ಪಕ್ಷದ ನಾಯಕನ ಮನೆಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಆದರೆ ಕುಮಾರಸ್ವಾಮಿ ಅವರು ಅದನ್ನೇ ಮರೆತಿದ್ದಾರೆ. ತಮ್ಮದೇ ಸರ್ಕಾರದ ಮಿತ್ರ ಪಕ್ಷದ ಕಾರ್ಯಕರ್ತರನ್ನು ಯಡಿಯೂರಪ್ಪ ಅವರ ನಿವಾಸದ ಮುಂದೆ ದಾಂಧಲೆ ಮಾಡಲು ಕಳುಹಿಸಿದ್ದಾರೆ ಎಂದು ಅವರು ಆರೋಪಿಸಿದರು. ಪೊಲೀಸರು ಸಹ ಗಲಾಟೆ ಆರಂಭವಾದ ಮೇಲೆ ಒಂದು ಗಂಟೆ ತಡವಾಗಿ ಬಂದರು ಎಂದು ಅವರು ಹೇಳಿದರು.
ಸಿಎಂ ಇಷ್ಟೊಂದು ಪೌರುಷದ ಮಾತುಗಳನ್ನು ಆಡುವ ಅವಶ್ಯಕತೆ ಇಲ್ಲ:ಸಿಟಿ ರವಿ
ಯಡಿಯೂರಪ್ಪ ಬಾಯಿ ಮುಚ್ಚಿಸಲು ತಂತ್ರ
ಯಡಿಯೂರಪ್ಪ ಅವರ ಟೀಕೆಗಳನ್ನು ಹತ್ತಿಕ್ಕಲು ಕುಮಾರಸ್ವಾಮಿ ಅವರು ಈ ರೀತಿ ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಬಗ್ಗುವ ಪಕ್ಷ ನಮ್ಮದಲ್ಲ. ಕೂಡಲೇ ಯಡಿಯೂರಪ್ಪ ಅವರೊಡನೆ ಮಾತನಾಡಿ ಕುಮಾರಸ್ವಾಮಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್ಡಿಕೆ
ಆಪರೇಷನ್ ಕಮಲ ಮಾಡುತ್ತಿಲ್ಲ
ನಾವು ಯಾವುದೇ ಆಪರೇಷ್ ಕಮಲ ಮಾಡುತ್ತಿಲ್ಲ, ಅದು ಕೇಲವ ಮಾಧ್ಯಮಗಳ ಹಾಗೂ ಆಡಳಿತ ಪಕ್ಷಗಳ ಸೃಷ್ಠಿ ಅಷ್ಟೆ ಎಂದು ಅಶೋಕ್ ಹೇಳಿದರು. ನಮ್ಮನ್ನು ಕರೆದರು ಎಂದು ಶಾಸಕರು ಹೇಳುತ್ತಿರುವುದು ಕೂಡಾ ಕೇವಲ ಹಸಿ ಸುಳ್ಳು, ಬಿಜೆಪಿ ಸರ್ಕಾರ ಬೀಳಿಸುವ ಯತ್ನ ಮಾಡುತ್ತಿಲ್ಲ, ಆದರೆ ಕಾಂಗ್ರೆಸ್ ಪಕ್ಷದಲ್ಲೇ ಆಂತರಿಕ ಕಲಹ ಪ್ರಾರಂಭವಾಗಿದ್ದು, ಕೆಲವು ಶಾಸಕರು ತಾವಾಗಿಯೇ ಪಕ್ಷ ಬಿಟ್ಟು ಹೊರಡಲಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅಪರಾಧ ಮಾಡಿಲ್ಲ
ಯಡಿಯೂರಪ್ಪ ಅವರನ್ನು ಪದೇ-ಪದೇ ಜೈಲಿಗೆ ಹೋಗಿ ಬಂದವರು ಎಂದು ಕುಮಾರಸ್ವಾಮಿ ಹಾಗೂ ಇತರ ನಾಯಕರು ಹೇಳುವ ಮಾತಿಗೆ ಸ್ಪಷ್ಟನೆ ನೀಡಿದ ಅವರು, ಯಡಿಯೂರಪ್ಪ ಅವರು ಅಪರಾಧಿ ಅಲ್ಲ ಎಂದು ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಇಂದಿರಾ ಗಾಂಧಿ ಸಹ ಜೈಲಿಗೆ ಹೋಗಿದ್ದರು, ಕಾಂಗ್ರೆಸ್ ಹಿರಿಯ ಮೊಯ್ಲಿ ಸಹ ಜೈಲಿಗೆ ಹೋಗಿದ್ದರು ಎಂದು ಅವರು ಹೇಳಿದರು.
ಡಿ.ಕೆ.ಶಿ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ
ಡಿ.ಕೆ.ಶಿವಕುಮಾರ್ ಅವರ ಪ್ರಕರಣದ ಬಗ್ಗೆಯೂ ಮಾತನಾಡಿದ ಅಶೋಕ್, ಡಿ.ಕೆ.ಶಿವಕುಮಾರ್ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲವಾದರೆ ನಿರಪರಾಧಿ ಎಂದು ಸಾಬೀತಾಗುತ್ತದೆ. ಅವರ ಪ್ರಕರಣದಲ್ಲಿ ಬಿಜೆಪಿಯ ಪಾತ್ರ ಎಳ್ಳಷ್ಟೂ ಇಲ್ಲ ಎಂದು ಅವರು ಹೇಳಿದರು.