ಎನ್ಆರ್ ರಮೇಶ್ ಮನವೊಲಿಕೆಗೆ ಬಿಎಸ್ವೈ ಯತ್ನ
ಬೆಂಗಳೂರು, ಏಪ್ರಿಲ್ 10: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪಕ್ಷದ ನಗರದ ಘಟಕದ ವಕ್ತಾರ ಎನ್.ಆರ್. ರಮೇಶ್, ಬಂಡಾಯದ ಸೂಚನೆ ನೀಡಿದ ಬೆನ್ನಲ್ಲೇ ಸೋಮವಾರ ಸಂಜೆ ಅವರನ್ನು ಯಡಿಯೂರಪ್ಪ ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು.
ಮಂಗಳವಾರ ಎಲ್ಲ ಮುಖಂಡರ ಜತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಎನ್.ಆರ್. ರಮೇಶ್ ಅವರಿಗೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಟಿಕೆಟ್ ಸಿಕ್ಕಿಲ್ಲವೆಂದು ಧೃತಿಗೆಡವುದು ಬೇಡ. ಒಂದು ದಿನದ ಕಾಲಾವಕಾಶ ನೀಡಿ ಎಂದು ಸಮಾಧಾನ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಟಿಕೆಟ್ ನೀಡದೆ ಉದ್ಯಮಿ ಉದಯ್ ಗರುಡಾಚಾರ್ ಅವರಿಗೆ ಮಣೆ ಹಾಕಿದ್ದು, ಎನ್.ಆರ್. ರಮೇಶ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸಕ್ಕೆ ಅವರನ್ನು ಕರೆಸಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಟಿಕೆಟ್ ನೀಡಿಕೆ ಕುರಿತಂತೆ ಎಲ್ಲ ವಿಚಾರಗಳನ್ನೂ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿವರಿಸಿದ್ದೇನೆ. ಅವರಿಗೆ ನನ್ನ ಬಗ್ಗೆ ಕಾಳಜಿ ಇದೆ ಎಂದು ಎನ್.ಆರ್. ರಮೇಶ್ ಹೇಳಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.
'ಆರ್.ಆರ್.ನಗರ ಟಿಕೆಟ್ ಕೈ ತಪ್ಪಲು ಸಂತೋಷ್ ಜಿ ಕಾರಣ
ಚಿಕ್ಕಪೇಟೆ ಕ್ಷೇತ್ರದಲ್ಲಿಯೇ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿರುವ ಎನ್.ಆರ್. ರಮೇಶ್, ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ನಿರಾಕರಿಸಿದ್ದಾರೆ. ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿದ್ದ ಅವರು, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು.
ಆದರೆ, ತಮ್ಮ ಬದಲು ಉದಯ ಗರುಡಾಚಾರ್ ಅವರಿಗೆ ಮನ್ನಣೆ ನೀಡಿದ್ದು, ಎನ್.ಆರ್. ರಮೇಶ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ತಮಗೆ ಟಿಕೆಟ್ ಕೈತಪ್ಪಲು ಕೇಂದ್ರ ಸಚಿವ ಅನಂತಕುಮಾರ್ ಅವರೇ ಕಾರಣ ಎಂದು ಅವರು ನೇರ ಆರೋಪ ಮಾಡಿದ್ದರು.
ಟಿಕೆಟ್ ಕೈತಪ್ಪಲು ಸಚಿವ ಅನಂತಕುಮಾರ್ ಕಾರಣ: ಎನ್,ಆರ್. ರಮೇಶ್
ಬಿಜೆಪಿಯ ನಗರ ಮತ್ತು ಬೆಂಗಳೂರು ಜಿಲ್ಲಾ ವಕ್ತಾರ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಅವರು, ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗುವ ಸುಳಿವು ನೀಡಿದ್ದರು.