ಪರೇಶ್ ಸಾವು ಎನ್ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ರಾಜಭವನ ಚಲೋ
ಬೆಂಗಳೂರು, ಡಿಸೆಂಬರ್ 12: ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರಕ್ಷುಬ್ದ ಪರಿಸ್ಥಿತಿ, ಹಿಂದೂ ಪರ ಸಂಘಟನೆ ಕಾರ್ಯಕರ್ತ ಪರೇಶ್ ಮೆಸ್ತಾನ ಸಾವಿನ ತನಿಖೆಯನ್ನು ಎನ್ಐಎ ತಂಡಕ್ಕೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಮನವಿ ಸಲ್ಲಿಸಲಿದ್ದಾರೆ.
ಸರ್ಕಾರ ಗೂಂಡಾಗಿರಿ ಮಾಡುತ್ತಿದೆ : ಯಡಿಯೂರಪ್ಪ
ಈ ನಿಟ್ಟಿನಲ್ಲಿ ಮಂಗಳವಾರ ಬೆಳಗ್ಗೆ ವಿಧಾನಸೌಧದಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ವಿಧಾನಸೌಧ ಬಳಿಯ ಇರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ರಾಜಭವನಕ್ಕೆ ತೆರಳಲಾಗುತ್ತದೆ.
ವಿಧಾನಪರಿಷತ್ ನಾಯಕ ಕೆಎಸ್ ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಪಿ.ಸಿ ಮೋಹನ್, ಮಾಜಿ ಡಿಸಿಎಂ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ಪ್ರಮುಖ ನಾಯಕರು ರಾಜಭವನಕ್ಕೆ ತೆರಳಲಿದ್ದಾರೆ.
ಡಿಸೆಂಬರ್ 6ರಂದು, ಬಾಬ್ರಿ ಮಸೀದಿ ಧ್ವಂಸವಾದ 25ನೇ ವರ್ಷದ ದಿನದಂದು, 21 ವರ್ಷದ ಯುವಕರ ಪರೇಶ್ ಮೇಸ್ತಾ ನಿಗೂಢವಾಗಿ ಕಣ್ಮರೆಯಾಗಿದ್ದ. ಎರಡು ದಿನಗಳ ನಂತರ ಆತನ ಶವ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಆತನ ಮೇಲೆ ಮಚ್ಚಿನಿಂದ ಕೊಚ್ಚಿದ ಗುರುತುಗಳಿದ್ದವು, ಕಾದ ಎಣ್ಣೆಯನ್ನೂ ಆತನ ಮೇಲೆ ಚೆಲ್ಲಲಾಗಿತ್ತು.
ಹಿಂದೂ ಸಂಘಟನೆಗಳ ಪ್ರತಿಭಟನೆ : ಉತ್ತರ ಕನ್ನಡ ಉದ್ವಿಗ್ನ
ಈ ಹತ್ಯೆಯ ಹಿಂದೆ ಮತೀಯ ಶಕ್ತಿಗಳ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ನಂತರ ಪರೇಶ್ ಅವರು ಆಕಸ್ಮಿಕವಾಗಿ ಕೆರೆಗೆ ಜಾರಿ, ಮೃತಪಟ್ಟಿದ್ದಾರೆ ಎಂದು ವರದಿಗಳು ಬಂದಿವೆ. ಈ ಘಟನೆ ನಡೆದ ನಂತರ ಹೊನ್ನಾವರ ಹೊತ್ತಿ ಉರಿಯುತ್ತಿದೆ. ಮೂರು ದಿನಗಳವರೆಗೂ ನಿಷೇಧಾಜ್ಞೆ(ಸಿ ಆರ್ ಪಿಸಿ ಸೆಕ್ಷನ್ 144) ಜಾರಿಗೊಳಿಸಿ ಜಿಲ್ಲಾಧಿಕಾರಿ ನಕುಲ್ ಆದೇಶಿಸಿದ್ದಾರೆ.