ಬಿಜೆಪಿ ಬಂಡಾಯ ಶಾಸಕನ ಕುತೂಹಲದ ನಡೆ, ಶ್ರೀರಾಮುಲು ಮಣಿಸಲು ಪ್ಲಾನ್?
ಚಿತ್ರದುರ್ಗ, ಏಪ್ರಿಲ್ 16: ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಕ್ಕೊಳಗಾಗಿರುವ ಚಿತ್ರದುರ್ಗದ ಮೊಳಕಾಲ್ಮೂರು ಶಾಸಕ ಬಿಜೆಪಿ ತಿಪ್ಪೇಸ್ವಾಮಿ ಇಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಪಾದಯಾತ್ರೆ ಹೊರಟ ತಿಪ್ಪೇಸ್ವಾಮಿ ಬೆಂಬಲಿಗರು
ಮೊಳಕಾಲ್ಮೂರಿನಲ್ಲಿ ಬಿಜೆಪಿಯಿಂದ ಸಂಸದ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿದ್ದು, ಹಾಲಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಕಡೆಗಣಿಸಲಾಗಿದೆ. ಹಾಗಾಗಿ ರೊಚ್ಚಿಗೆದ್ದಿರುವ ತಿಪ್ಪೆಸ್ವಾಮಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಇಂದು ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಶಾಸಕ ತಿಪ್ಪೆಸ್ವಾಮಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ತಿಪ್ಪೇಸ್ವಾಮಿ ಅವರು ಈಗಾಗಲೇ ಶ್ರೀರಾಮುಲು ಅವರನ್ನು ಸೋಲಿಸಿಯೇ ಸಿದ್ದ ಎಂದು ಗುಟುರು ಹಾಕಿದ್ದು, ಈಗ ಡಿಕೆಶಿವಕುಮಾರ್ ಅವರನ್ನು ಭೇಟಿ ಆಗಿರುವುದು ಕುತೂಹಲ ಕೆರಳಿಸಿದೆ.
ಬಂಡಾಯವಾಗಿಯಾದರೂ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸುತ್ತೇನೆ ಎಂದು ತಿಪ್ಪೇಸ್ವಾಮಿ ಹೇಳಿದ್ದರು. ಇದೀಗ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರಿಂದ ಅವರು ಕಾಂಗ್ರೆಸ್ ಸೇರಬಹುದು ಎಂಬ ಊಹಾಪೋಹ ಹರಿದಾಡುತ್ತಿದೆ. ಈಗಾಗಲೇ ಮೊಳಕಾಲ್ಮೂರುವಿನಲ್ಲಿ ಕಾಂಗ್ರೆಸ್ನ ಡಾ.ಯೋಗೇಶ್ ಬಾಬು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ಎಸ್.ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ತಪ್ಪಿದ ಕೂಡಲೇ ಮೊಳಕಾಲ್ಮೂರುವಿನಲ್ಲಿ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಶ್ರೀರಾಮುಲು ಅವರ ಕಾರಿಗೆ ಕಲ್ಲು ಸಹ ತೂರಲಾಯಿತು.