ಸಿಎಂ ರಾಜಿನಾಮೆ ಆಗ್ರಹಕ್ಕೆ ಬಿಜೆಪಿ ಕಂಡುಕೊಂಡ ಇತ್ತೀಚಿನ ಕಾರಣ
ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಸಿಕ್ಕ ಹೊಸ ಕಾರಣಗಳು. ರಾಜ್ಯ ಬಿಜೆಪಿ ನಾಯಕರಿಗೆ ಸಿಕ್ಕಿರುವ ಕಾರಣಗಳ ಪಟ್ಟಿ.
Recommended Video
ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಕೇಳಿಬರುತ್ತಿರುವ ಬಿಜೆಪಿಯ ಆಗ್ರಹ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ.
ಗಣಪತಿ ಆತ್ಮಹತ್ಯೆ ಕೇಸ್ ಸಿಬಿಐ ವಹಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶವಿರಬಹುದು, ಮಂಗಳೂರಿನಲ್ಲಿ ಶರತ್ ಮಡಿವಾಳ ಅವರ ಹತ್ಯೆಯ ಕೇಸ್ ಇರಬಹುದು ಅಥವಾ ಇತ್ತೀಚೆಗೆ ನಡೆದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವಿರಬಹುದು, ಇವೆಲ್ಲವೂ ಸಿದ್ದರಾಮಯ್ಯ ಅವರ ಸರ್ಕಾರವನ್ನು ಇಕ್ಕಟ್ಟಿಗೆ ತಂದು ನಿಲ್ಲಿಸಿರುವುದಂತೂ ಸುಳ್ಳಲ್ಲ.
'ಸಿದ್ದು ಸಾಕು': ಸರ್ಕಾರದ ವೈಫಲ್ಯಕ್ಕೆ ಟ್ವಿಟ್ಟಿಗರಿಂದ ಕೂಗು
ಕಳೆದ ವರ್ಷ ಊಬ್ಲೋ ವಾಚ್ ಪ್ರಕರಣ, ಸ್ಟೀಲ್ ಬ್ರಿಡ್ಜ್ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಅವರನ್ನು ಆಕ್ಷೇಪಿಸುತ್ತಿದ್ದ ಹಾಗೂ ಅವರ ರಾಜಿನಾಮೆಗೆ ಆಗ್ರಹಿಸುತ್ತಿದ್ದ ಬಿಜೆಪಿ ನಾಯಕರ ಪಾಲಿಗೆ ಈಗ ಕಳೆದ ಆರು ತಿಂಗಳಲ್ಲಿ ಹೊಸ ಹೊಸ ಕಾರಣಗಳು ಸಿಕ್ಕಿವೆ.
ಅವೆಲ್ಲವನ್ನೂ ಒಗ್ಗೂಡಿಸಿಕೊಂಡು ಸಿದ್ದರಾಮಯ್ಯ ಅವರ ರಾಜಿನಾಮೆಗಾಗಿ ಈಗ ಕಮಲ ಪಕ್ಷದ ಒತ್ತಾಯ ಹೆಚ್ಚಾಗುತ್ತಲೇ ಇದೆ. ರಾಜ್ಯ ಬಿಜೆಪಿ ನಾಯಕರ ಈ ಆಗ್ರಹವು ಎರಡೂ ಪಕ್ಷಗಳ ಹೈಕಮಾಂಡ್ ಮಟ್ಟಕ್ಕೂ ಹೋಗಿ ಆ ಲೆವೆಲ್ ನ ನಾಯಕರೂ ಪರಸ್ಪರ ಕೆಸರೆರೆಚಾಟದಲ್ಲಿ ನಿರತವಾಗುವಂತಾಗಿದೆ.
ಸಿದ್ದರಾಮಯ್ಯ ರಾಜಿನಾಮೆಗೆ ಟ್ವಿಟ್ಟರಿಗರ ಆಗ್ರಹ
ಹಾಗಾದರೆ, ರಾಜ್ಯ ಬಿಜೆಪಿ ನಾಯಕರಿಗೆ ಕಳೆದ ಆರು ತಿಂಗಳುಗಳಲ್ಲಿ ಸಿಕ್ಕ ಅಂಥ ಪ್ರಕರಣಗಳು ಯಾವುವು? ಸಿದ್ದರಾಮಯ್ಯ ಅವರ ರಾಜಿನಾಮೆಗೆ ಇಂಬು ಕೊಡುವಂಥ ಯಾವ ವಿಚಾರಗಳನ್ನು ಬಿಜೆಪಿ ನಾಯಕರು ಆಶ್ರಯಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
ಹದಗೆಟ್ಟ ಕಾನೂನು ವ್ಯವಸ್ಥೆ: ಆರೋಪ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಮಾಜ ಘಾತುಕ ಶಕ್ತಿಗಳು ಯಾವುದೇ ಭೀತಿ ಇಲ್ಲದೆ ಕೊಲೆ, ಸುಲಿಗೆಗಳನ್ನು ಮಾಡುತ್ತಿರುವುದು ಕಾನೂನು ಸುವ್ಯವಸ್ಥೆ ಹಾಳಾಗಿರುವುದನ್ನು ಎತ್ತಿ ತೋರುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಗಣಪತಿ ಆತ್ಮಹತ್ಯೆ ಪ್ರಕರಣ ಬಿಸಿ
ಮಾಜಿ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯು ಸಿಬಿಐಗೆ ವಹಿಸಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದ ಬೆನ್ನಲ್ಲೇ ಬಿಜೆಪಿ ಹಾಗೂ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಕೇಸ್ ನ ಸಿಐಡಿ ತನಿಖೆಯಲ್ಲಿ ಹಲವಾರು ಲೋಪಗಳಾಗಿರುವುದನ್ನು ವಿಧಿವಿಜ್ಞಾನ ತಜ್ಞರು ಪತ್ತೆ ಹಚ್ಚಿದ್ದರ ವಿರುದ್ಧ ಪ್ರತಿಪಕ್ಷಗಳು ಸಿದ್ದರಾಮಯ್ಯ ಅವರ ರಾಜಿನಾಮೆಗೆ ಒತ್ತಾಯಿಸಿದ್ದವು.
ಗೋವಿಂದರಾಜು ಡೈರಿ ಪ್ರಕರಣ
ಸಿಎಂ ಆಪ್ತರಾಗಿರುವ ಎಂಎಲ್ ಸಿ ಗೋವಿಂದರಾಜು ಅವರ ಮನೆಯ ಮೇಲೆ ಆಗಿದ್ದ ರೈಡ್ ವೇಳೆ, ಸಿಕ್ಕಿತ್ತೆನ್ನಲಾಗಿರುವ ಡೈರಿಯಲ್ಲಿನ ವಿವರಗಳ ಬಗ್ಗೆ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಡೈರಿಯಲ್ಲಿ, ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯ ಸರ್ಕಾರದಿಂದ ಹೋಗಿರುವ ಕಪ್ಪ ಕಾಣಿಕೆಯ ವಿವರಗಳ ಬಗ್ಗೆ ವಾಹಿನಿಯೊಂದು ವಿಸ್ತೃತ ವರದಿ ನೀಡಿತ್ತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬಿಜೆಪಿಯು ಸಿದ್ದರಾಮಯ್ಯ ಅವರ ರಾಜಿನಾಮೆಯನ್ನು ಕೇಳಿದ್ದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಆರೋಪ
ರಾಜ್ಯದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಕೇಂದ್ರದಿಂದ ಬರುತ್ತಿರುವ ಅನುದಾನಗಳ ಸದ್ಬಳಕೆಯಾಗುತ್ತಿಲ್ಲ. ಹಾಗಾಗಿ, ಸಿದ್ದರಾಮಯ್ಯ ಸೇರಿದಂತೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಹಲವಾರು ಸಚಿವರು ತಮ್ಮ ಸ್ಥಾನಳಿಗೆ ರಾಜಿನಾಮೆ ಸಲ್ಲಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಅದರಂತೆ, ಮಂಗಳೂರಿನಲ್ಲಿ ಇತ್ತೀಚೆಗೆ ಶರತ್ ಮಡಿವಾಳ ಅವರ ಹತ್ಯೆಯಾದಾಗಲೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ, ಅವರ ಕೊಲೆಗಳನ್ನು ಸರಿಯಾಗಿ ತನಿಖೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ.
ಪ್ರಗತಿಪರ ಚಿಂತಕರಿಗೆ ರಕ್ಷಣೆಯಿಲ್ಲ ಎಂಬ ಆರೋಪ
ಪ್ರೊಫೆಸರ್ ಎಂ.ಎಂ. ಕಲಬುರಗಿ ಹತ್ಯೆಯ ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆಯೆಂಬ ಕೂಗು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲೇ, ಇದೀಗ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯೂ ಆದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪ್ರಗತಿಪರ ಚಿಂತಕರಿಗೆ ರಕ್ಷಣೆಯಿಲ್ಲ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಬಿಜೆಪಿ ಆಗ್ರಹಿಸಿದೆ.