ಬಿಜೆಪಿ ಕಳ್ಳ ಎತ್ತು : ಸಿದ್ದರಾಮಯ್ಯ ವ್ಯಂಗ್ಯಭರಿತ ಟೀಕೆ
ಬೆಂಗಳೂರು, ಆಗಸ್ಟ್ 11: "ಬಿಜೆಪಿ ಒಂದು ಕಳ್ಳ ಎತ್ತು. ಗೇಯೋ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹಾಕಬಾರದು," ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವನಹಳ್ಳಿಯಲ್ಲಿ ಹೇಳಿದರು. ಈ ಮೂಲಕ ಬಿಜೆಪಿಗೆ ಮತ ನೀಡಬೇಡಿ ಎಂದು ಜನರ ಬಳಿ ಮನವಿ ಮಾಡಿಕೊಂಡರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ನೆರವೇರಿಸಿ ನಂತರ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
"ಯಡಿಯೂರಪ್ಪ ಮಿಷನ್ 150 ಎಂದು ಹೇಳುತ್ತಾ ಓಡಾಡುತ್ತಿದ್ದಾರೆ. ಅಮಿತ್ ಶಾ, ಮೋದಿ ಮ್ಯಾಜಿಕ್ ಮಾಡುತ್ತಾರೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮೋದಿ, ಶಾ ಆಟ ನಡೆಯಲ್ಲ. ಅವರ ಆಟ ಏನಿದ್ದರೂ ಯುಪಿ, ಗುಜರಾತ್ ಗೆ ಮಾತ್ರ. ಕರ್ನಾಟಕದಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ," ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ನೆರವೇರಿಸಿದ ಸಂದರ್ಭ. pic.twitter.com/QuX1DGdIkv
— CM of Karnataka (@CMofKarnataka) August 11, 2017
ಸಿದ್ದರಾಮಯ್ಯ ಆಧುನಿಕ ಭಗೀರಥ
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಸಿದ್ದರಾಮಯ್ಯ ಆಧುನಿಕ ಭಗೀರಥ ಎಂದು ಹೊಗಳಿದರು. "ಕಳೆದ 30 ವರ್ಗಳಲ್ಲಿ ಮಾಡಲಾಗದ ಕೆಲಸವನ್ನುಸಿದ್ದರಾಮಯ್ಯ ಕಳೆದ 3 ವರ್ಷಗಳಲ್ಲಿ ಮಾಡಿದ್ದಾರೆ," ಎಂದು ಅವರು ಹೊಗಳಿದರು.
ಇದಕ್ಕೂ ಮೊದಲು ಸಿದ್ದರಾಮಯ್ಯ ಹೆಬ್ಬಾಳ-ನಾಗವಾರ ಕಣಿವೆಯ ತ್ಯಾಜ್ಯ ನೀರು ಸಂಸ್ಕರಿಸಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಹೆಬ್ಬಾಳ-ನಾಗವಾರ ಕಣಿವೆಯ ತ್ಯಾಜ್ಯ ನೀರು ಸಂಸ್ಕರಿಸಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭ pic.twitter.com/1gfvMiFP92
— CM of Karnataka (@CMofKarnataka) August 11, 2017
ರಾಷ್ಟದಲ್ಲಿಯೇ ಮೊದಲ ಬಾರಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 65 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಏತ ನೀರಾವರಿ ಮೂಲಕ ತುಂಬಿಸಲಾಗುತ್ತದೆ.
ಇದಕ್ಕಾಗಿ ಹೆಬ್ಬಾಳದ ನಾಗವಾರ, ಹೊರಮಾವು ಹಾಗೂ ಹೆಣ್ಣೂರು ವ್ಯಾಪ್ತಿಯಲ್ಲಿ ರೂ. 883.54 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಲಾಗುತ್ತದೆ. 3 ಸಂಸ್ಕರಣಾ ಘಟಕಗಳಿಂದ ಒಟ್ಟು ದಿನನಿತ್ಯ 210 ದಶಲಕ್ಷ ಲೀಟರ್ ನೀರು ಲಭ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ಕೆ.ಜೆ. ಜಾರ್ಜ್, ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ಸ್ಥಳೀಯ ಮುಖಂಡರು, ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.