ಗೌರಿ ಹತ್ಯೆ ಬಗ್ಗೆ ಹೇಳಿಕೆ ಇತಿಹಾಸಕಾರ ಗುಹಾ ವಿರುದ್ಧ ಕೇಸು ದಾಖಲಿಸಿದ ಬಿಜೆಪಿ
ಬೆಂಗಳೂರು, ಅಕ್ಟೋಬರ್ 10:ಲೇಖಕ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಕಾನೂನು ತೊಡಕಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. 'ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಸಂಘ ಪರಿವಾರ ಇದೆ' ಎಂದು ಹೇಳಿಕೆ ನೀಡಿದ್ದ ಗುಹಾ ವಿರುದ್ಧ ಬಿಜೆಪಿ ಯುವ ಮೋರ್ಚಾದ ಕರ್ನಾಟಕ ಘಟಕ ದೂರು ದಾಖಲಿಸಿದೆ.
ಗೌರಿ ಗತಿಯೇ ನಿಮಗೂ ಬರಲಿದೆ'ಎಂದಿದ್ದ ಹಿಂದು ನಾಯಕಿ ಮೇಲೆ ಕೇಸ್
ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕುರಿತಂತೆ ಗುಹಾ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ನೋಟಿಸ್ ಗೆ ಉತ್ತರಿಸದ ಹಿನ್ನಲೆಯಲ್ಲಿ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸ್ಕ್ರಾಲ್.ಇನ್ ಗೆ ಗುಹಾ ನೀಡಿದ ಸಂದರ್ಶನದಲ್ಲಿ, ದಾಭೋಲ್ಕರ್, ಪನ್ಸಾರೆ ಹಾಗೂ ಕಲ್ಬುರ್ಗಿ ಅವರನ್ನು ಕೊಂದ ಅದೇ ಸಂಘ ಪರಿವಾರದವರೇ ಗೌರಿ ಲಂಕೇಶ್ ಅವರನ್ನೂ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಸ್ಪಷ್ಟನೆ ಕೋರಿ ನೋಟಿಸ್ ನೀಡಲಾಗಿತ್ತು. ಬೇಷರತ್ ಕ್ಷಮೆಯಾಚಿಸುವಂತೆ ಕೋರಲಾಗಿತ್ತು. ಆದರೆ, ಈ ಬಗ್ಗೆ ಗುಹಾ ಅವರು ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಸದಸ್ಯರು ದೂರು ದಾಖಲಿಸಿದ್ದಾರೆ.
ಗುಹಾ ಅವರು ಕ್ಷಮೆ ಕೇಳದ ಕಾರಣ ಇಂದು ಕ್ರಿಮಿನಲ್ ದೂರು ದಾಖಲಿಸಿದ್ದೇವೆ. ನಾಡಿದ್ದು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಕೂಡಾ ದೂರು ದಾಖಲಿಸುತ್ತೇವೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹೇಳಿದ್ದಾರೆ.