ಬಿಜೆಪಿಯಲ್ಲಿ ಹೀರೋಗಳಿಲ್ಲ ಹಾಗಾಗಿ ಕಾಂಗ್ರೆಸ್ನ ಪಟೇಲರ ಪ್ರತಿಮೆ ನಿರ್ಮಿಸಿದ್ದಾರೆ
ಬೆಂಗಳೂರು, ನವೆಂಬರ್ 14: ಬಿಜೆಪಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರಿಲ್ಲ ಹಾಗಾಗಿ ಕಾಂಗ್ರೆಸ್ನ ಸರ್ದಾರ್ ವಲ್ಲಬಭಾಯ್ ಪಟೇಲರ ಪ್ರತಿಮೆ ನಿರ್ಮಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ನೆಹರು ಜನ್ಮದಿನೋತ್ಸವ ಸಂದರ್ಭ ಮಾತನಾಡಿದ ಅವರು, ಪಟೇಲರ ಪ್ರತಿಮೆ ನಿರ್ಮಿಸಿದಂತೆ ಬಿಜೆಪಿಯ ಯಾವ ನಾಯಕರ ಪ್ರತಿಮೆ ನಿರ್ಮಿಸುವಷ್ಟು ಅರ್ಹರಿಲ್ಲ. ತನ್ನ ಪಕ್ಷದ ಹಿರಿಯ ನಾಯಕರನ್ನೇ ಮೂಲೆ ಗುಂಪು ಮಾಡಿದ ಮೋದಿ, ಪಟೇಲ್ ಮತ್ತು ನೆಹರೂ ಅವರ ಸಂಬಂಧದ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.
ಜವಹಾರ್ಲಾಲ್ ನೆಹರು ಅವರು ಶ್ರೀಮಂತ ಕುಟುಂಬದವರಾದರೂ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು ಅವರ ತಂದೆ ಮೋತಿಲಾಲ್ ನೆಹರು ಅವರಿಂದಲೇ ಸಿಕ್ಕಿದ ಪ್ರೇರೇಪಣೆ ಅವರನ್ನು ಸ್ವಾತಂತ್ರ್ಯ ಹೋರಾಟದತ್ತ ಹೊರಳುವಂತೆ ಮಾಡಿತು ಎಂದರು.
ನೆಹರು 3259 ದಿನ ಜೈಲಿನಲ್ಲಿದ್ದರು
ಬಿಜೆಪಿ, ಆರ್ಎಸ್ಎಸ್ನ ಯಾವೊಬ್ಬ ನಾಯಕರೂ ಸಹ 10 ದಿನಗಳ ಕಾಲವೂ ಸೆರೆವಾಸ ಅನಭವಿಸಿರಲಿಲ್ಲ ಆದರೆ ಜವಾಹರ್ ಲಾಲ್ ನೆಹರು ಅವರು 3259 ದಿನಗಳ ಕಾಲ ಸೆರೆಯಲ್ಲಿದ್ದರು. ಆದರೆ ಇಂದು ಇದೇ ಬಿಜೆಪಿ, ಆರ್ಎಸ್ಎಸ್ ನೆಹರು ಅವರನ್ನು ಪ್ರಶ್ನೆ ಮಾಡುತ್ತದೆ ಎಂದು ಅವರು ಹೇಳಿದರು.
ಆರ್ಎಸ್ಎಸ್ ಬ್ರಿಟೀಷರೊಂದಿಗೆ ಕೈಜೋಡಿಸಿತ್ತು
ಆರ್ಎಸ್ಎಸ್ ನವರು ಬ್ರಿಟೀಷರೊಂದಿಗೆ ಕೈಜೋಡಿಸಿ ಬೇಕಾದ ಅನುಕೂಲಗಳನ್ನು ಮಾಡಿಕೊಂಡರು ಆದರೆ ನೆಹರು ಅವರ ಕುಟುಂಬ ದೇಶಕ್ಕಾಗಿ ಬಲಿದಾನಗಳನ್ನು ಕೊಟ್ಟಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬ ಅವರದ್ದು ಎಂದು ಅವರು ಹೇಳಿದರು.
ನೆಹರೂ ಕುಟುಂಬಕ್ಕೆ ಖಳನಾಯಕ ಪಟ್ಟ ನೀಡಲಾಗುತ್ತಿದೆ
ನೆಹರೂ ಮತ್ತು ಅವರ ಕುಟುಂಬವನ್ನು ಖಳನಾಯಕರಂತೆ ಬಿಂಬಿಸುವುದು ಮತ್ತು ಕಳಂಕ ಹಚ್ಚುವ ಪ್ರಯತ್ನವನ್ನು ನಿರಂತರವಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ಮಾಡುತ್ತಿದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಮುರಳಿ ಮನೋಹರ್ ಜೋಷಿ, ಯಶ್ವಂತ್ ಸಿನ್ಹಾ ಅನೇಕ ಹಿರಿಯ ನಾಯಕರನ್ನು ಪಕ್ಷ ಬಿಟ್ಟು ಓಡಿಸಿದ್ದಾರೆ. ಅಡ್ವಾಣಿಯಂತಹವರು ಮಾತನಾಡಲಾಗದಂತಹ ಭಯದ ವಾತಾವರಣ ನಿರ್ಮಿಸಲಾಗಿದೆ. ನೆಹರೂ ಕಾಲದಲ್ಲಿ ಎಲ್ಲರಿಗೂ ಮಾತನಾಡುವ ಮುಕ್ತ ಸ್ವತಂತ್ರವಿತ್ತು, ಪ್ರಜಾಪ್ರಭುತ್ವವಿತ್ತು. ಮೋದಿಯಂತೆ ಸರ್ವಾಧಿಕಾರಿ ಆಡಳಿತ ಇರಲಿಲ್ಲ ಎಂದು ಅವರು ಕಿಡಿಕಾರಿದರು.
ಸುಳ್ಳು ಹೇಳುವ ಬಿಜೆಪಿ ಪಕ್ಷ
ಸುಳ್ಳು ಹೇಳಿ ಭಾವನಾತ್ಮಕ ವಿಷಯಗಳ ಮೇಲೆ ಅಧಿಕಾರ ಹಿಡಿಯುವ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಅವರು ಕರೆ ನೀಡಿದರು.