ನವಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹಣೆ
ಬೆಂಗಳೂರು, ಫೆಬ್ರವರಿ 15 : ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜನಪರ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಸಲುವಾಗಿ ಭಾರತೀಯ ಜನತಾ ಪಕ್ಷವು 'ನವಕರ್ನಾಟಕ ಜನಪರಶಕ್ತಿ' ಅಭಿಯಾನದ ಮೂಲಕ ಈಗಾಗಲೇ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಜೈವಿಕ ತಂತ್ರಜ್ಞಾನ, ಮಹಿಳಾ ಸಬಲೀಕರಣ, ಕಲೆ ಸಂಸ್ಕೃತಿ ಸೇರಿದಂತೆ ಹಲವು ವಲಯಗಳ ಗಣ್ಯರ, ಪರಿಣಿತರ ಮಾಹಿತಿ-ಅಭಿಪ್ರಾಯಗಳನ್ನು ಕಲೆ ಹಾಕಿದೆ.
ಅದರ ಮುಂದುವರಿದ ಭಾಗವಾಗಿ ಬುಧವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ 'ಉತ್ತಮ ಕರ್ನಾಟಕಕ್ಕಾಗಿ ಉತ್ತಮ ಆಡಳಿತ' ಕುರಿತ ಸಂವಾದದಲ್ಲಿ ಆಡಳಿತ ವಲಯದ ತಜ್ಞರಿಂದ ರಚನಾತ್ಮಕ ಸಲಹೆಗಳು ಮೂಡಿಬಂದವು.
ಪ್ರಾಸ್ತಾವಿಕವಾಗಿ ಮಾತನಾಡಿದ ಜನಪರಶಕ್ತಿ ಸಂಚಾಲಕ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, "ಪ್ರಧಾನಿ ನರೇಂದ್ರ ಮೋದಿಯವರ ನವಭಾರತ ನಿರ್ಮಾಣದ ಕನಸಿಗೆ ಪೂರಕವಾಗಿ ನವಕರ್ನಾಟಕ ನಿರ್ಮಾಣಕ್ಕೆ ಬೇಕಿರುವ ನೀಲನಕ್ಷೆಗೆ ಸಮಾಜದ ಎಲ್ಲ ವಲಯಗಳಿಂದಲೂ ಸಲಹೆ-ಸೂಚನೆಗಳನ್ನು ಸ್ವೀಕರಿಸಲಾಗುತ್ತಿದೆ. ಈ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಈಗಾಗಲೇ ನಾನಾ ವಲಯದ ಗಣ್ಯರು ತಮ್ಮ ಅಭಿಪ್ರಾಯಗಳನ್ನು, ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅವುಗಳನ್ನೆಲ್ಲ ಕ್ರೋಡೀಕರಿಸಿ, ಪ್ರಣಾಳಿಕೆಗೆ ಬಳಸಿಕೊಳ್ಳಲಾಗುವುದು" ಎಂದರು.
ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್ ಮಾತನಾಡಿ, ಉತ್ತಮ ಆಡಳಿತದಿಂದ ಮಾತ್ರ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ. ಆಡಳಿತ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಜವಾಬ್ದಾರಿ ಅಧಿಕಾರಿ ವರ್ಗದ ಮೇಲಿದೆ. ಶಾಸಕಾಂಗ ಏನೆಲ್ಲ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರೂ ಅಂತಿಮವಾಗಿ ಅವುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದಾಗಿದೆ ಎಂದರು.
ಬಿಜೆಪಿಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಎನ್. ರವಿ ಕುಮಾರ್ ಮಾತನಾಡಿ "ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆಡಳಿತ ವೈಖರಿಯಲ್ಲಿ ಸಮಗ್ರ ಬದಲಾವಣೆಗಳನ್ನು ತರಲಾಗಿದೆ. ಈ ರೀತಿಯ ತಜ್ಞರು ಹಾಗು ಸಾರ್ವಜನಿಕರನ್ನೊಳಗೊಂಡ ಸಂವಾದ ಕಾರ್ಯಕ್ರಮಗಳಿಂದ ಯಾವುದೇ ರಾಜಕೀಯ ಪಕ್ಷಗಳಿಗೆ ಜನಪರ ಪ್ರಣಾಳಿಕೆಯನ್ನು ಹೊರತರಲು ಅತ್ಯಂತ ಪ್ರಯೋಜನಕಾರಿಯಾದುದ್ದಾಗಿದೆ. ಆಡಳಿತದ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ನೀಡುವುದು ಅತ್ಯಂತ ಅವಶ್ಯಕವಾಗಿದೆ" ಎಂದರು.
ಸಂವಾದದಲ್ಲಿ ತಕ್ಷಶಿಲಾ ಸಹ ಸಂಸ್ಥಾಪಕ ಶ್ರೀ ನಿತಿನ್ ಪೈ, ಬಿ-ಪ್ಯಾಕ್ ಸದಸ್ಯ ಹಾಗೂ ವಕೀಲ ಶ್ರೀ ಎನ್. ಹರೀಶ್, ಸ್ವಾರ್ಟ್ ಸದಸ್ಯೆ ಶ್ರೀಮತಿ ಸಂಧ್ಯಾ ನಾರಾಯಣ, ಬಿಎಟಿಎಫ್ ಮಾಜಿ ಸದಸ್ಯ ಹಾಗೂ ನಾಗರಿಕ ಹಕ್ಕು ಹೋರಾಟಗಾರ ಶ್ರೀ ವಿ. ರವಿಚಂದರ್, ನಗರ ಸಾರಿಗೆ ತಜ್ಞ ಮತ್ತು ಟ್ಯಾಕ್ಸಿ ಫಾರ್ ಶೂರ್ನ ಸಂಸ್ಥಾಪಕ ಶ್ರೀ ಅಪ್ರಮೇಯ ರಾಧಾಕೃಷ್ಣ, ಇ-ಗವರ್ನ್ ಫೌಂಡೇಷನ್ ಸಿಇಒ ವಿರಾಜ್ ತ್ಯಾಗಿ ಮತ್ತಿತರರು ಸಂವಾದದಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.