ಬಿಜೆಪಿಯಿಂದ 20 ಶಾಸಕರು ಕಾಂಗ್ರೆಸ್ಸಿಗೆ ಜಂಪ್: ಪರಮೇಶ್ವರ
ಬೆಂಗಳೂರು, ನವೆಂಬರ್ 07: ಭಾರತೀಯ ಜನತಾ ಪಕ್ಷದ ಮುಖಂಡರು ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ತೊಡಗಿರುವಾಗ ಇತ್ತ ಬಿಜೆಪಿಯ 20ಕ್ಕೂ ಅಧಿಕ ಶಾಸಕರು ಆಡಳಿತಾರೂಢ ಕಾಂಗ್ರೆಸ್ ನತ್ತ ವಾಲಿರುವ ಸುದ್ದಿ ಬಂದಿದೆ. ಈ ಸುದ್ದಿಯನ್ನು ಕೆ.ಪಿ.ಸಿ.ಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರು ನೀಡಿದ್ದಾರೆ.
ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಸಿಡಿಸಿದ ಈ ಹೊಸ ಬಾಂಬ್ ಗೆ ಇನ್ನೂ ಬಿಜೆಪಿ ನಾಯಕರಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಬಾರಿ ಬೇರೆ ಪಕ್ಷಗಳಿಂದ ಜೆಡಿಎಸ್ ಸೇರುವವರ ಸಂಖ್ಯೆ ಅಧಿಕವಾಗಲಿದೆ ಎಂಬ ರಾಜಕೀಯ ಪಂಡಿತ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ ಎಂಬಂತೆ ಪರಮೇಶ್ವರ್ ಅವರು ಮಾತನಾಡಿದ್ದಾರೆ.
20 ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರಲು ಬಯಸಿದ್ದು, ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಯಾರನ್ನು ಸೇರಿಸಿಕೊಳ್ಳಬೇಕೆಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹೈಕಮಾಂಡ್ ತೀರ್ಮಾನದ ನಂತರ ಇನ್ನಷ್ಟು ಮಾಹಿತಿ ಸಿಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಸಹೋದರರಂತೆ ಇದ್ದೇವೆ. ನಾನು ಸಿ.ಎಂ. ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಚರ್ಚೆ ಈಗ ಅಪ್ರಸ್ತುತ ಎಂದು ಹೇಳಿದರು.
ಬಿ.ಜೆ.ಪಿ. ಯವರು ಯಾವ ಸಮಾವೇಶ ಮಾಡಿದರೂ ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ. ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಯಾತ್ರೆಗಳಿಂದ ಕಾಂಗ್ರೆಸ್ ಗೆ ಏನೂ ಆಗುವುದಿಲ್ಲ. ಮೊದಲು ಅವರುಗಳು ತಮ್ಮ ಪಕ್ಷದಲ್ಲಿನ ಗೊಂದಲ ಸರಿಪಡಿಸಿಕೊಳ್ಳಲಿ ಎಂದರು.