ಕಾರ್ಮಿಕರ ಕಷ್ಟಕ್ಕೆ ಕಣ್ಣೀರು ಹಾಕದ ಬೆಂಗಳೂರು
ಬೆಂಗಳೂರು, ಸೆಪ್ಟೆಂಬರ್, 02: ಕಾರ್ಮಿಕ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಭಾರತ ಬಂದ್ ಗೆ ಬೆಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಆದರೆ ಆಟೋ ಓಡಾಟ ಮತ್ತು, ಮೆಟ್ರೋ ಸಂಚಾರ ಸಹ ಎಂದಿನಂತೇ ಇತ್ತು.
ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದವು. ಸಿಟಿ ಮಾರ್ಕೆಟ್, ಗಾಂಧಿ ಬಜಾರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ಪುರಭವನದ ಎದುರಿನಿಂದ ಕೆಜಿ ರಸ್ತೆ ಮಾರ್ಗವಾಗಿ ಕಾರ್ಮಿಕ ಸಂಘಟನೆಗಳು ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿ ಸಮಾವೇಶಗೊಂಡರು.[ಕರ್ನಾಟಕದಲ್ಲಿ ಬಂದ್ ಎಫೆಕ್ಟ್ ಹೇಗಿತ್ತು]
ಕಾರ್ಮಿಕ ವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಬೇಕು. ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಿರುವಷ್ಟೇ ವೇತನ ಮತ್ತಿತರ ಸೌಲಭ್ಯ ಸಿಗಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಬಸ್ ಇಲ್ಲದೇ ಪರದಾಟ
ಬಿಟಂಟಿಸಿ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು. ಆನೇಕಲ್ ಸೇರಿದಂತೆ ನಗರದ ಹೊರವಲಯಕ್ಕೆ ತೆರಳಬೇಕಿದ್ದವರು ಪರದಾಡಿದರು.
ಹಣವಿಲ್ಲದವರು ನಿಲ್ದಾಣದಲ್ಲಿ!
ಆಟೋಗಳಿಗೆ ದುಪ್ಪಟ್ಟು ಹಣ ನೀಡಲಾಗದವರು ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು. ಮೆಜೆಸ್ಟಿಕ್ ನಿಂದ ಯಶವಂತಪುರಕ್ಕೆ ಆಟೋದವರು 300 ರು. ಕೇಳುತ್ತಿದ್ದಾರೆ ಎಂದು ನಿಲ್ದಾಣದಲ್ಲಿ ಬಸ್ ಗೆ ಕಾದು ಕುಳಿತಿದ್ದ ನೀಲಕಂಠ ಅವರು ಅಳಲು ತೋಡಿಕೊಂಡರು.
ಕೆಎಸ್ ಆರ್ ಟಿಸಿ ನಿಲ್ದಾಣ ಸ್ಥಬ್ಧ
ಕೆಎಸ್ ಆರ್ ಟಿಸಿ ಸಹ ಬಂದ್ ಗೆ ಬೆಂಬಲ ನೀಡಿದ್ದರಿಂದ ಹೊರ ಊರಿಗೆ ತೆರಳಬೇಕಿದ್ದವರು ಪರದಾಡಿದರು. ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಎಲ್ಲ ಬಸ್ ಸೇವೆಗಳು ಸ್ಥಗಿತವಾಗಿದ್ದವು.
ಕೆಆರ್ ಮಾರುಕಟ್ಟೆ
ಕೆಆರ್ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆ ಸಾಗಿತ್ತು. ಅವೆನ್ಯೂ ರಸ್ತೆಯಲ್ಲಿ ಅಂಗಡಿ ಮುಂಗಟ್ಟಗಳು ತೆರೆದೇ ಇದ್ದವು.
ಕಾಯಕವೇ ಕೈಲಾಸ
ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತಮ್ಮ ಎಂದಿನ ಕೆಲಸದಲ್ಲಿ ನಿರತರಾಗಿದ್ದ ಗ್ಯಾರೇಜ್ ಕಾರ್ಮಿಕರು. ಬಂದ್ ಬಗ್ಗೆ ಕೇಳಿದರೆ ನಮ್ಮ ಈ ದಿನದ ಕೂಲಿ ನೀಡುವವರು ಯಾರು? ಎಂದು ಪ್ರಶ್ನೆ ಮಾಡಿದರು.
ಕಾರ್ಮಿಕರ ಶಕ್ತಿ
ಮೈಸೂರು ಬ್ಯಾಂಕ್ ವೃತ್ತದಲ್ಲಿ ಒಂದಾದ ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ ಹೆಜ್ಜೆ ಹಾಕಿದರು. ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಲಾರಿ ಏರಿ ಬಂದರು
ಹೊಸಕೋಟೆ, ಪೀಣ್ಯ ಕಡೆಯಿಂದ ಲಾರಿ ಏರಿ ಬಂದಿದ್ದ ಕಾರ್ಮಿಕರು ಕನಿಷ್ಠ ಕೂಲಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದರು.
ಏಕಾಂಗಿ ಹೋರಾಟ!
ಮೈಸೂರು ಬ್ಯಾಂಕ್ ವೃತ್ತದಲ್ಲಿ ಬ್ಯಾನರ್ ಹಿಡಿದು ಏಕಾಂಗಿಯಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗುತ್ತಿದ್ದ ಬ್ಯಾಂಕ್ ನಿವೃತ್ತ ನೌಕರ ಶಿವಪ್ರಸಾದ್.
ಮಹಿಳಾ ಕಾರ್ಮಿಕರ ಆಕ್ರೋಶ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗಾರ್ಮೆಂಟ್ಸ್ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು.
ಪೊಲೀಸ್ ಬಂದೋಬಸ್ತ್
ಹಿಂದೊಮ್ಮೆ ಪಿಪಿಎಫ್ ಪ್ರತಿಭಟನೆ ವೇಳೆ ಪೊಲೀಸ್ ಇಲಾಖೆ ವಿಫಲವಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಕೆಎಸ್ ಆರ್ ಟಿಸಿ ನಿಲ್ದಾಣ
ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಬೇಕಿದ್ದ ಬಸ್ ಗಳು ಮೆಜೆಸ್ಟಿಕ್ ನಲ್ಲೇ ಠಿಕಾಣಿ ಹೂಡಿದ್ದವು.
ಆಟೋ ದುಬಾರಿ!
ಕೆಲ ಆಟೋ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿರಲಿಲ್ಲ. ಆಟೋದವರು ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂತು.
ಆಟೋ ಚಾಲಕರ ಬೆಂಬಲ
ಪ್ರತಿಭಟನೆಗೆ ಬೆಂಬಲ ನೀಡಿದ್ದ ಆಟೋ ಚಾಲಕರು ಮೋಟಾರು ವಾಹನ ಕಾಯ್ದೆಯಲ್ಲಿ ಕೆಲ ತಿದ್ದುಪಡಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ಹುಡುಗಾಟ!
ಕೆ ಆರ್ ಮಾರುಕಟ್ಟೆ ಸಮೀಪ ಬಾಲಕನೊಬ್ಬ ತನ್ನ ಸೈಕಲ್ ನ್ನು ತಲೆಕೆಳಗಾಗಿ ನಿಲ್ಲಿಸಿ ಬಂದ್ ಕಾರಣದ ಖಾಲಿ ರಸ್ತೆಯನ್ನು ಎಂಜಾಯ್ ಮಾಡಿದ ಬಗೆ.