ಬೆಸ್ಕಾಂ ಸವಿಕಿರಣ ಸೇವೆ :24 ತಾಸಿನಲ್ಲಿ ವಿದ್ಯುತ್ ಸಂಪರ್ಕ
ಬೆಂಗಳೂರು, ಫೆಬ್ರವರಿ 08 : ವಸತಿ ಅಥವಾ ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸಾರ್ವಜನಿಕರು ಇನ್ನು ಮುಂದೆ ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ಬೆಂಗಳೂರು ವಿದ್ಯುತ್ ಸರಬರಾಜು ನಿಗಮಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ 24 ತಾಸಿನೊಳಗೆ ವಿದ್ಯುತ್ ಸಂಪರ್ಕ ದೊರೆಯಲಿದೆ.
ಇಂಥಹದ್ದೊಂದು ವಿನೂತನ ಸವಿ ಕಿರಣ ಸೇವೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಗ್ರಾಹಕರಿಗೆ ೨೪ ತಾಸಿನಲ್ಲಿ ವಿದ್ಯುತ್ ಸಂಪರ್ಕ ಒದಗಿಸುವ ಸವಿ ಕಿರಣ ಸೇವೆಗೆ 49 ವಿಭಾಗಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಯಿತು.
ವಿದ್ಯುತ್ ಬೆಲೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ ಎಸ್ಕಾಂ
ಹೊಸ ವಿದ್ಯುತ್ ಸಂಪರ್ಕ ಹೆಸರು ವರ್ಗಾವಣೆ, ವಿದ್ಯುತ್ ದರ ಪ್ರವರ್ಗ ಬದಲಾವಣೆ, ವಿದ್ಯುತ್ ಲೋಡ್ ಕಡಿಮೆ ಮಾಡಿಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಗ್ರಾಹಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅಪ್ಲಿಕೇಷನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಎಲೆಕ್ಟ್ರಿಕ್ ಗುತ್ತಿಗೆದಾರರಿಂದ ವೈರಿಂಗ್ ಕೆಲಸ ಮುಗಿಸಿದ ಬಳಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೆ 24 ಗಂಟೆಗಳಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ತಕ್ಷಣವೇ ಮೀಟರ್ ಕೂಡ ಒದಗಿಸಿಕೊಡಲಾಗುವುದು ಎಂದರು.
ನಗರದಲ್ಲಿ 11ಕಡೆ ಚಾರ್ಜಿಂಗ್ ವ್ಯವಸ್ಥೆ:ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ 11ಸ್ಥಳಗಳಲ್ಲಿ ಚಾರ್ಜಿಂಗ್ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಫೆ.೧೮ರಂದು ಬೆಸ್ಕಾಂ ಆವರಣದಲ್ಲಿ ಚಾಲನೆ ನೀಡಲಾಗುತ್ತದೆ. ವಿಧಾನಸೌಧ ಸೇರಿದಂತೆ ಇತರೆಡೆಯೂ ಘಟಕಗಳನ್ನು ನಿರ್ಮಿಸಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು. ಚಾರ್ಜಿಂಗ್ ದರ ನಿಗದಿಗೆ ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.