ಸಾರಕ್ಕಿ ಕೆರೆ ತೆರವು: 2 ಸಾವಿರ ಕೋಟಿ ಮೌಲ್ಯದ ಜಾಗ ವಶ
ಬೆಂಗಳೂರು, ಏ. 16: 'ಅಲ್ಲಾ ಸ್ವಾಮಿ, ನಮ್ಮನ್ನು ತೆರವು ಮಾಡಿ ಏನೂ ಪ್ರಯೋಜನ? ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು? ಕೆರೆ ಜಾಗವನ್ನು ಸೈಟ್ ಆಗಿ ಪರಿವರ್ತಿಸಿ ಮಾರಾಟ ಮಾಡಿ ಹಣ ಜೇಬಿಗಿಳಿಸಿಕೊಂಡವರನ್ನು ಮೊದಲು ಹಿಡಿಯಿರಿ' ಇದು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರ ಆಕ್ರೋಶಭರಿತ ಮಾತುಗಳು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶದಂತೆ ನಗರದ ಜೆಪಿ ನಗರ ಸಾರಕ್ಕಿ ಕೆರೆ, ಪುಟ್ಟೇನಳ್ಳಿ ಕರೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 32 ಎಕರೆ ಜಾಗವನ್ನು ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಲಾಗುತ್ತಿದೆ. ಒಟ್ಟು 82 ಎಕರೆ ವ್ಯಾಪ್ತಿಯಲ್ಲಿ ಇದ್ದ ಕೆರೆಯ ಕಾಲು ಭಾಗಕ್ಕಿಂತ ಹೆಚ್ಚಿನದನ್ನು ಒತ್ತುವರಿ ಮಾಡಲಾಗಿತ್ತು.[ಮೊದಲಿನ ಸೌಂದರ್ಯಕ್ಕೆ ಮರಳಲಿದೆ ಪುಟ್ಟೇನಹಳ್ಳಿ ಕೆರೆ]
ಕರೆ ಒತ್ತುವರಿ ಕಾರ್ಯಾಚರಣೆ ಇನ್ನು ಎರಡು ದಿನ ಮುಂದುವರಿಯಲಿದೆ. ಪೊಲೀಸ್ ಇಲಾಖೆ, ಅರೆ ಸೇನಾ ತುಕಡಿ ಎಲ್ಲ ನೆರವು ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದ್ದಾರೆ.[ಯಡಿಯೂರು ಕೆರೆ ಮೇಲೊಂದು ಪಕ್ಷಿ ನೋಟ]
'ನಿಮ್ಮ ಕೆರೆ ನೀವು ರಕ್ಷಿಸಿ, ನಾಳೆಯ ನಿಮ್ಮ ಪೀಳಿಗೆಗೆ' , ಎಂಬ ಹೆಸರಿನಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿರುವ ಜಿಲ್ಲಾಡಳಿತ ಈ ಮೊದಲು ನ್ಯಾಯಾಲಯದ ಅನುಮತಿಯನ್ನು ಪಡೆದಿತ್ತು. ಅಲ್ಲದೇ ಒತ್ತುವರಿದಾರರಿಗೆ ಸ್ವಯಂ ಪ್ರೇರಿತವಾಗಿ ತೆರವು ಮಾಡಲು ದಿನಾಂಕವನ್ನು ನಿಗದಿ ಮಾಡಿತ್ತು.