ಟ್ರಾಫಿಕ್ ಸಮಸ್ಯೆ ತಪ್ಪಲಿದೆ ಮಾಣೆಕ್ ಷಾ ಕ್ರೀಡಾಂಗಣದಲ್ಲಿ
ಬೆಂಗಳೂರು, ಆಗಸ್ಟ್, 14 : ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ, ಸಾರ್ವಜನಿಕರ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಕ್ರೀಡಾಂಗಣದಲ್ಲಿ ಬಹಳ ಅದ್ದೂರಿಯಾಗಿ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನಡೆಸಿ, ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.[ಟ್ರಾಫಿಕ್ ಸಿಗ್ನಲ್ ಲೈಟಿಗೆ ಗೂಗಲ್ ಡೂಡ್ಲ್ ನಮನ]
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು, ಸಾರ್ವಜನಿಕರು ಆಗಮಿಸುವುದರಿಂದ ಅವರ ಭದ್ರತಾ ದೃಷ್ಟಿಯಿಂದ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಂದ ತಲೆದೋರುವ ಹಲವಾರು ಸಮಸ್ಯೆಗಳನ್ನು ತಪ್ಪಿಸಿ ಗಣ್ಯರ ಹಾಗೂ ಸಾರ್ವಜನಿಕರು ಸುಗಮವಾದ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.
ಬೆಳಗ್ಗೆ 8 ರಿಂದ 10.30 ರವರೆಗೆ ಕಬ್ಬನ್ ಪಾರ್ಕ್ ರಸ್ತೆಯ ಬಿ.ಆರ್ ವಿ. ಜಂಕ್ಷನ್ ಯಿಂದ ಕಾಮರಾಜ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ವ್ಯವಸ್ಥೆ ಹೀಗಿದೆ ನೋಡಿ :
* ಹಳದಿ ಹಾಗೂ ಬಿಳಿ ಪಾಸ್ ಗಳನ್ನು ಹೊಂದಿರುವ ಕಾರುಗಳು ಪ್ರವೇಶ ದ್ವಾರ 1 ಮತ್ತು 2ರ ಮೂಲಕ ಮೈದಾನಕ್ಕೆ ಆಗಮಿಸಿ ಪಶ್ಚಿಮ ಭಾಗದಲ್ಲಿ ನಿಲುಗಡೆ ಮಾಡಬೇಕು.
* ಮಾಧ್ಯಮದವರ ಒಬಿ ವಾಹನಗಳು ಪ್ರವೇಶ ದ್ವಾರ 3 ರ ಮೂಲಕ ಆಗಮಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಲುಗಡೆ ಮಾಡಬೇಕು.
* ಪಿಂಕ್ ಪಾಸ್ಗಳನ್ನು ಹೊಂದಿರುವ ವಾಹನಗಳು ಪ್ರವೇಶ ದ್ವಾರ 3 ರ ಮೂಲಕ ಒಳ ಬಂದು ಮೈದಾನದ ಈಶಾನ್ಯ ಭಾಗದಲ್ಲಿ ನಿಲ್ಲಿಸಬೇಕು.
* ಹಸಿರು ಪಾಸ್ ಹೊಂದಿರುವ ವಾಹನಗಳು ಕಾಮರಾಜ ರಸ್ತೆ ಮತ್ತು ಮೈನ್ ಗಾರ್ಡ್ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಬಳಿಕ ಪ್ರವೇಶದ್ವಾರ 4 ಮತ್ತು 5 ರ ಮೂಲಕ ಮೈದಾನಕ್ಕೆ ಬರಬೇಕು.
* ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ಶಾಲಾ ಬಸ್ಸುಗಳು ಪ್ರವೇಶ ದ್ವಾರ 1 ರ ಬಳಿ ಮೂಲಕ ಬಂದು, ನಂತರ ವಾಹನಗಳನ್ನು ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೆ ನಿಲ್ಲಿಸಬೇಕು.
* ಲೋಕೋಪಯೋಗಿ, ಬಿಬಿಎಂಪಿ ಸೇರಿದಂತೆ ಇತರೆ ಸರ್ಕಾರಿ ವಾಹನಗಳು ಪ್ರವೇಶ ದ್ವಾರ 1 ರ ಮೂಲಕ ಮೈದಾನಕ್ಕೆ ಬಂದು ನಂತರ ಪೋರ್ಟ್ ಪೋಲ್ ಹಿಂಭಾಗದಲ್ಲಿ ನಿಲುಗಡೆ ಮಾಡಬೇಕು.
* ಸಾರ್ವಜನಿಕರ ವಾಹನಗಳಿಗೆ ಕಾಮರಾಜ ರಸ್ತೆ, ಶಿವಾಜಿನಗರದ ಸಫೀನಾ ಪ್ಲಾಜಾ ಮುಂಭಾಗ, ಬಿಬಿಎಂಟಿಸಿ ಸಂಕೀರ್ಣ 2ನೇ ಮಹಡಿ, ಛೋಟಾ ಮೈದಾನ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.