ಸ್ವರಸ್ಮಿತಾದಿಂದ ಬೆಂಗಳೂರಿನಲ್ಲಿ ಆ.13ಕ್ಕೆ 'ಸ್ವರಾವಲೋಕನ' ಕಾರ್ಯಾಗಾರ
ಬೆಂಗಳೂರು, ಆಗಸ್ಟ್ 10: ಸಂಗೀತಾಸಕ್ತರಿಗೆ, ಸಹೃದಯರಿಗಾಗಿ ಒಂದಿಲ್ಲೊಂದು ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವ ಸ್ವರ ಸ್ಮಿತಾ(ರಿ.) ಸಂಸ್ಥೆ ಸಂಗೀತ ಉತ್ಸಾಹಿಗಳಿಗಾಗಿ 'ಸ್ವರಾವಲೋಕನ' ಎಂಬ ಅರ್ಥಪೂರ್ಣ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಆಗಸ್ಟ್ 13, ಭಾನುವಾರದಂದು ಬೆಳಗ್ಗೆ 9:30 ರಿಂದ ಕಾರ್ಯಾಗಾರ ಆರಂಭವಾಗಲಿದ್ದು ಸಂಜೆ 5:00 ಗಂಟೆಯವರೆಗೂ ನಡೆಯಲಿದೆ. ಬೆಂಗಳೂರಿನ ಬನಶಂಕರಿ ಮೂರನೇ ಹಂತದ ದತ್ತಾತ್ರೆಯ ನಗರದಲ್ಲಿರುವ ಅನಸೂಯಾ ಕನ್ವೆನ್ಷನ್ ಹಾಲಿನಲ್ಲಿನಡೆಯುವ ಈ ಕಾರ್ಯಾಗಾರದಲ್ಲಿ ಸಂಗೀತ ಮತ್ತು ಜೀವನಕ್ಕೆ ಇರುವ ಸಾಮ್ಯತೆಯನ್ನು ಸಂಗೀತಾಸಕ್ತರಿಗೆ ಪರಿಚಯಿಸಲಾಗುತ್ತದೆ.
ಭಜನೆಯ ಮೂಲಕ ಆರಂಭವಾಗುವ ಕಾರ್ಯಕ್ರಮವನ್ನು ಗಾಯಕಿ ಶ್ರೀಮತಿ ಪದ್ಮಿನಿ ಓಕ್ ರವರ ನೇತೃತ್ವದ 'ಒಂದೇ ಮಾತರಂ ಭಜನ ತಂಡ' ನಡೆಸಿಕೊಡಲಿದೆ.
ಸಂಗೀತ ಮತ್ತು ಜೀವನದ ಸಾಮ್ಯತೆಯನ್ನು ನಾಡಿನ ಹೆಸರಾಂತ ಕೊಳಲು ವಾದಕ ವಸಂತ್ ಕುಮಾರ್.ಎಲ್.ಎನ್ ಮತ್ತು ಗಾಯಕಿ ಸ್ಮಿತಾ ವಸಂತ್ ರವರು ಪ್ರಾಯೋಗಿಕವಾಗಿ ಪ್ರದರ್ಶಿಸಿ, ಸಂಗೀತವನ್ನು ಕ್ರಮಬದ್ಧವಾಗಷ್ಟೇ ಅಲ್ಲದೆ, ಸಂತೋಷದಿಂದ ಅನುಭವಿಸಿ ಕಲಿಯಬೇಕು ಎಂದು ಅರ್ಥೈಸುವ ಪ್ರಯತ್ನ ಮಾಡಲಿದ್ದಾರೆ.
ಸಹೃದಯ ಸಂಗೀತ ಪ್ರೇಮಿಗಳು ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.