ವೈರಲ್ ವಿಡಿಯೋ: ಖಾಕಿಯ ಗತ್ತಿನೊಳಗೊಂದು ಮೃದು ಹೃದಯ!
"ಅದು ಆಗಸ್ಟ್ 28 ರ ಸಂಜೆಯ ಹೊತ್ತು. ನನ್ನ ಪಾಲಿಗೆ ಅದು ಎಂದಿಗೂ ಮರೆಯಲಾಗದ ದಿನ. ವ್ಯಕ್ತಿಯೊಬ್ಬ ಎದುಸಿರು ಬಿಡುತ್ತ ಪುಟ್ಟ ಹೆಣ್ಣು ಶಿಶುವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ನನ್ನ ಎದುರುಬಂದು ನಿಂತಿದ್ದ.
ಪಾಟ್ನಾ: ಅಮ್ಮನ ಚಿಕಿತ್ಸಾವೆಚ್ಚ ಭರಿಸುವುದಕ್ಕೆ ಭಿಕ್ಷೆ ಬೇಡಿದ ಪುಟ್ಟಕಂದ
ಮಗು ಜನಿಸಿ ಕೆಲವೇ ಹೊತ್ತಾಗಿರಬಹುದಷ್ಟೆ, ಅದರ ದೇಹವನ್ನು ನೋಡಿದರೆ ಹುಟ್ಟಿದೊಡನೆ ಸ್ನಾನವನ್ನೂ ಮಾಡಿಸಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆ ಮಗು ಇದ್ದ ಪರಿಸ್ಥಿತಿಯನ್ನು ನೋಡಿದರೆ ಮೊದಲು ಆ ಮಗುವನ್ನು ಆಸ್ಪತ್ರೆಗೆ ಸೇರಿಸೋದು ಮುಖ್ಯ ಅನ್ನಿಸಿತ್ತು..." ಹೀಗೇ ಸಾಗುತ್ತದೆ ಬೆಂಗಳೂರಿನ ಎಸ್ಪಿ ಶಶಿಧರ್ ಎಂಬ ಮಾನವೀಯ ಅಂತಃಕರಣವೊಳ್ಳ ಪೊಲೀಸ್ ಅಧಿಕಾರಿಯೊಬ್ಬರ ಮಾತು.
1 ವರ್ಷದ ಮಗು ಕಳೆದುಕೊಂಡ ತಾಯಿಯೊಬ್ಬಳ ಕರುಣಾಜನಕ ಕಥೆ
ಹುದ್ದೆಗೆ ತಕ್ಕಂಥ ಗಾಂಭೀರ್ಯ, ವೃತ್ತಿಗೆ ಅಗತ್ಯವಿರುವ ಕಠಿಣ ಹೃದಯದ ಜೊತೆಗೇ ಮನುಷ್ಯ ಸಹಜವಾದ ಮಾನವೀಯತೆ, ಭಾವುಕತೆಯನ್ನೂ ಹೊಂದಿದ್ದ ಶಶಿಧರ್ ಪುಟ್ಟ ಹೆಣ್ಣು ಮಗುವಿಗೆ ಹೊಸ ಬದುಕು ನೀಡಿದ ಕತೆಯಿದು. ಕರ್ನಾಟಕ ಪೊಲೀಸ್ ಕುರಿತು ಹೆಮ್ಮೆ ಮೂಡಿಸುವ, ಶಶಿಧರ್ ಅವರ ಮಾನವೀಯ ಅಂತಃಕರಣದ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿದೆ. ಟ್ವಿಟ್ಟರ್ ನಲ್ಲೂ ಅವರ ವಿಡಿಯೋ ಹರಿದಾಡುತ್ತ, ವೈರಲ್ ಆಗಿದೆ.
ಖಾಕಿಯ ಗತ್ತಿನೊಳಗೂ ಇರುವ ಮೃದು ಹೃದಯಕ್ಕೆ ಈ ಘಟನೆ ಸಾಕ್ಷ್ಯವಾಗಿ ನಿಲ್ಲುತ್ತದೆ.
|
ಹುಟ್ಟುತ್ತಿದ್ದಂತೆಯೇ ಬೀದಿ ಪಾಲಾದ ಶಿಶು!
ಬಹುಶಃ ಆ ಮುದ್ದು ಶಿಶುವಿನ ಹಣೆಯಲ್ಲಿ, ತಾಯಿ ಗರ್ಭದಿಂದ ಭೂಮಿಗೆ ಆಗಮಿಸುತ್ತಿದ್ದಂತೆಯೇ ಬೀದಿಪಾಲಾಗುವ ದುರದೃಷ್ಟ ಬರೆದಿತ್ತು ಅನ್ನಿಸುತ್ತೆ. ಹುಟ್ಟಿದ ಆ ಹಸಿಮೈಯಲ್ಲೇ ಆ ಪುಟ್ಟ ಕಂದ ಬೀದಿಯ ಕಸದ ಬುಟ್ಟಿಯೊಂದರ ಪಕ್ಕ ಅಳುತ್ತ ಮಲಗಿತ್ತು. ಯಾವ ಬೀದಿ ನಾಯಿಗೂ ಆಹಾರವಾದಷ್ಟು ಅದೃಷ್ಟವನ್ನಾದರೂ ಪಾಪ ಅದು ಬರೆದುಕೊಂಡು ಬಂದಿತ್ತಲ್ಲ! ಅದೇ ಸಮಾಧಾನ!
ಆತನಿಗೆ ಸಿಕ್ಕಿದ್ದು ಎಸ್ಪಿ ಶಶಿಧರ್!
ಅಚಾನಕ್ಕಾಗಿ ಕಂಡ ದಾರಿಹೋಕನೊಬ್ಬ ಕಂಡೂ ಕಾಣದಂತೆ ಸುಮ್ಮನಿರಲಾಗದೆ, ಆ ಮಗುವನ್ನು ಎತ್ತಿಕೊಂಡು ಪಕ್ಕದಲ್ಲೇ ಇದ್ದ ಪೊಲೀಸ್ ಠಾಣೆಯತ್ತ ನಡೆದಿದ್ದ. ಎದೆಯಲ್ಲಿ ಢವ ಢವ! ಉಪಕಾರ ಮಾಡೋಕೆ ಹೋಗಿ ತಾನೇ ಸಿಕ್ಕಿಹಾಕಿಕೊಂಡರೆ ಅನ್ನೋ ಆತಂಕ. ಆದರೆ ಹಾಗಾಗಲಿಲ್ಲ. ಅವನ ಅದೃಷ್ಟಕ್ಕೆ ಸಿಕ್ಕಿದ್ದು ಎಸ್ಪಿ ಶಶಿಧರ್!
ಮೊದಲು ಆಸ್ಪತ್ರೆಗೆ ಸೇರಿದಬೇಕು!
ಆ ಮಗು ಇದ್ದ ಪರಿಸ್ಥಿತಿಯನ್ನು ಕಂಡರೆ ಶಶಿಧರ್ ಅವರಿಗೆ ಅನ್ನಿಸಿದ್ದು, ಮೊದಲು ಅದನ್ನು ಆಸ್ಪತ್ರೆಗೆ ಸೇರಿಸಲೇಬೇಕು ಅಂತ. ಹುಟ್ಟಿದ ಕೂಡಲೆ ಆ ಮಗುವಿಗೆ ಹಾಲುಣಿಸಲೂ ಇರಲಿಲ್ಲ. ಸ್ನಾನವನ್ನೂ ಮಾಡಿಸಿರಲಿಲ್ಲ. ಆಸ್ಪತ್ರೆಗೆ ಹೋದರೆ ಅವರು ಮೊದಲು ಕೇಳಿದ ಪ್ರಶ್ನೆ, 'ಈ ಮಗುವಿನ ಚಿಕಿತ್ಸೆಯ ವೆಚ್ಚವನ್ನು ಸಂಪೂರ್ಣ ಭರಿಸುತ್ತೀರಾ..?!' ಇಲ್ಲ ಅನ್ನುವುದಕ್ಕೆ ಮನಸ್ಸು ಒಪ್ಪಲಿಲ್ಲ. 'ಆಯ್ತು' ಎಂದು ಒಪ್ಪಿಕೊಂಡರು ಶಶಿಧರ್. ಮಗುವಿನ ಚಿಕಿತ್ಸೆಗೆ ಅಗತ್ಯವಿದ್ದ ಹಣ ಶಶಿಧರ್ ಅವರಿಗೆ ಹೊಂದಿಸಲು ಸಾಧ್ಯವಿದ್ದ ವೆಚ್ಚದ ಮಿತಿಯನ್ನು ದಾಟಿದಾಗ ದೇಣಿಗೆ ಸಂಗ್ರಹಕ್ಕೂ ಮುಂದಾದರೂ ಶಶಿಧರ್! ಈ ಸಮಾಜದಲ್ಲಿ ಎಷ್ಟೆಲ್ಲ ಸದ್ಗುಣಿಗಳಿದ್ದಾರೆ ಎಂಬ ಮಾತು ನಿಜವಾಗುವಂತೆ, ಮಗುವಿನ ಚಿಕಿತ್ಸೆಗೆ ಸಾಕಷ್ಟು ದೇಣಿಗೆಯೂ ಸಂಗ್ರಹವಾಯ್ತು.
ಅವಕಾಶವಿದ್ದರೆ ನಾನೇ ದತ್ತು ಪಡೆಯುತ್ತಿದ್ದೆ!
"ಆ ಮಗುವನ್ನು ನೋಡಿದರೆ ಕರುಳು ಕಿವುಚುತ್ತದೆ. ಅದಕ್ಕೀಗ ಎರಡೂವರೆ ತಿಂಗಳಾಗಿದೆ. ನನಗೆ ಅವಕಾಶವಿದ್ದಿದ್ದರೆ ನಾನೇ ಅದನ್ನು ದತ್ತು ತೆಗೆದುಕೊಳ್ಳುತ್ತಿದ್ದೆ. ಅಷ್ಟು ಮುದ್ದಾದ ಮಗು ಅದು. ಆದರೆ ನನಗೆ ಆ ಅವಕಾಶವಿಲ್ಲ" ಎನ್ನುತ್ತಾರೆ ಶಶಿಧರ್!
ಅನಾಥವಲ್ಲ ಈ ಮಗು
ಈ ಮಗು ಈಗ ಖಂಡಿತ ಅನಾಥವಲ್ಲ. ಅದನ್ನು ದತ್ತು ಪಡೆಯುವುದಕ್ಕೆ ಈಗಾಗಲೇ ಪೋಷಕರು ಸಿಕ್ಕಿದ್ದಾರೆ. ನನಗೆ ಈಗ ಖಂಡಿತ ಸಮಾಧಾನವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಶಶಿಧರ್. ಹುದೆ ಯಾವುದೇ ಇರಲಿ, ವೃತ್ತಿಯೂ ಏನೇ ಇದ್ದಿರಲಿ. ಪ್ರತಿ ಮನುಷ್ಯನಲ್ಲೂ ಮಾನವೀಯತೆಯ ಸೆಲೆ ಜೀವಂತವಾಗಿಯೇ ಇರುತ್ತದೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಷ್ಟೆ.