ಸಂಕೇತಿ ಉತ್ಸವ: ತಿಂದು ತೇಗಿ ಸಖತ್ ಮಜಾ ಮಾಡಿ
ಬೆಂಗಳೂರು, ಜನವರಿ 7: ನಗರದ ಬಸವನಗುಡಿ ರಸ್ತೆಯ ಮರಾಠ ಹಾಸ್ಟೇಲಿನ ಛತ್ರದಲ್ಲಿ ಬೆಂಗಳೂರು ಸಂಕೇತಿ ಮಹಿಳಾ ಟ್ರಸ್ಟ್ ವತಿಯಿಂದ ಐದನೇ ಸಂಕೇತಿ ಉತ್ಸವ ಶನಿವಾರ ಆರಂಭವಾಯಿತು. ಎರಡು ದಿನದ ಉತ್ಸವದಲ್ಲಿ 105ಕ್ಕೂ ಹೆಚ್ಚು ಮಳಿಗೆಗಳು, ಕೊಳಕಟ್ಟೆ ,ಚೋಮಾಯಿ ಒತ್ತು ಶಾವಿಗೆಯಿಂದ ಕೂಡಿದ ಬಗೆ ಬಗೆಯ ಖಾದ್ಯಗಳು, ವಿವಿಧ ಕರಕುಶಲ ಮಳಿಗೆಗಳು ವಿಶೇಷವಾಗಿದೆ.
ಸಂಕೇತಿ ಸಂಪ್ರದಾಯದ ಆಚರಣೆ, ಬಾಷೆ, ಉಡುಗೆ, ತಿನಿಸು ಎಲ್ಲವೂ ವಿಭಿನ್ನವಾಗಿದ್ದು ಮಹಿಳೆಯರನ್ನು ಗಂಡಿ ಸೀರೆ ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ವಿಶ್ವದಲ್ಲಿಯೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸಂಕೇತಿಗಳು ಸಾಂಪ್ರದಾಯಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದ ಸಮಾಜ ಎಂಬುದನ್ನು ಅವರನ್ನು ನೋಡಿಯೇ ತಿಳಿಯಬೇಕು.[ಸಂಕೇತಿ ಉತ್ಸವ : ಗಂಡಿ ಸೀರೆಯ ಗತ್ತು ; ಒತ್ತು ಶಾವಿಗೆ ಗಮ್ಮತ್ತು]
ಇದು ಎರಡು ದಿನದ ಕಾರ್ಯಕ್ರಮವಾಗಿದ್ದು ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ 105 ಮಳಿಗೆಗಳಲ್ಲಿ ಕರಕುಶಲ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳು, ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಸೀರೆಗಳು, ಸಿದ್ದ ಉಡುಪುಗಳ ಪ್ರದರ್ಶನ ನಡೆಯುತ್ತಿದೆ. ಸಂಕೇತಿ ಸಮಾಜಕ್ಕೆ ಸಂಬಂಧಿಸಿದ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಅನೇಕ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗಿದೆ.
ಸಂಕೇತಿ ಉತ್ಸವ-5 ಉದ್ಘಾಟನೆ
ಐದನೇ ಸಂಕೇತಿ ಉತ್ಸವದ ಕರ್ನಾಟಕ ಸಂಗೀತ, ನೃತ್ಯ ಅಕಾಡಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ, ಹಾಗು ವಿಶೇಷ ಆಹ್ವಾನಿತರಾಗಿ ಡಾ.ರಮ್ಯಾ ಮೋಹನ್ ಆಗಮಿಸಿದ್ದು, ಸಂಕೇತಿ ಉತ್ಸವ-5ರ ಉದ್ಘಾಟನೆ ಮಾಡಿದರು.
ಗಂಡಿ ಸೀರೆಯ ಗತ್ತು
ಕಾವೇರಿ ತೀರದ ಸಂಕೇತಿ ಜನಾಂಗ ಒಂಬತ್ತು ಗಜದ ಗಂಡಿ ಸೀರೆಯನ್ನಟ್ಟು ಕೃಷಿ ಮಾಡುತ್ತಿದ್ದದ್ದು ಆಶ್ಚರ್ಯ. ಆದರೆ ಸಂಕೇತಿ ಮಹಿಳೆಯರು ಈಗಲೂ ಆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು ಕಾರ್ಯಕ್ರಮದಲ್ಲಿ ಮಹಿಳೆಯರು ಗಂಡಿ ಸೀರೆಯನ್ನುಟ್ಟು ಸಂಕೇತಿ ಉತ್ಸವದ ಗಮನ ಸೆಳೆದರು.
ಒತ್ತು ಶಾವಿಗಯ ಕಸರತ್ತು
ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಅಕಾಡಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ. ಆರ್. ಪೂರ್ಣಿಮಾ, ರಮ್ಯಾ ಮೋಹನ್ ಅವರು ಸಂಕೇತಿ ಜನಾಂಗದ ವಿಶಿಷ್ಟ ಹಾಗು ನಿತ್ಯ ಆಹಾರವಾದ ಒತ್ತು ಶಾವಿಗೆಯನ್ನು ಒತ್ತಿ ಶಾವಿಗೆಯನ್ನು ಸವಿದಿದ್ದು ಹೀಗೆ
ವಿವಿಧ ಕರಕುಶಲ ಮಳಿಗೆಗಳು
ಸಂಕೇತಿ ಉತ್ಸವದಲ್ಲಿ ವಿವಿಧ ಮಾದರಿಯ ತಿನಿಸಿನ ಮಳಿಗೆಗಳಿದ್ದವು ಚೋಮಾಯಿ, ಕೊಳಕಟ್ಟೆ, ಉದ್ದಿನಿಂದ ತಯಾರಿಸಿದ ಪದಾರ್ಥಗಳ ಮಳಿಗೆಗಳು, ಕುರಕುಶಲ ವಸ್ತುಗಳ ಮಳಿಗೆ, ಗ್ರಾಮೋದ್ಯೋಗ ವಸ್ತುಗಳ ಮಳಿಗೆಗಳು, ಸಿದ್ದ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಸಿರಿಧಾನ್ಯಗಳು ಸೇರಿದಂತೆ ಅನೇಕ ನೂರಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸಂಕೇತಿ ಉತ್ಸವದ ಸ್ಪರ್ಧೆಗಳು
ಸಂಕೇತಿ ಉತ್ಸವದಲ್ಲಿ ಸಂಕೇತಿ ಜನಾಂಗಕ್ಕಾಗಿಯೇ ಶನಿವಾರ ಮತ್ತು ಭಾನುವಾರ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಲ್ಲಿ ಸಾಂಪ್ರದಾಯಿಕ ಜಡೆ ಅಲಂಕಾರ ಸ್ಪರ್ಧೆ, ಅಡುಗೆ ಸ್ಪರ್ಧೆಗಳಿವೆ. ಹಿಂದಿನ ಉತ್ಸವದಲ್ಲಿ ದೇವಿ ಅಲಂಕಾರ, ಗೆಜ್ಜೆ ವಸ್ತ್ರ, ಆರತಿ ತಟ್ಟೆ ಅಲಂಕಾರ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.
ಸಮಾಜಸೇವೆಯೇ ಉತ್ಸವದ ಧ್ಯೇಯ
ಪ್ರತಿಬಾರಿ ಉತ್ಸವವನ್ನು ಮಾಡಿದಾಗಲೂ ಮಳಿಗೆಗಳು ಮತ್ತು ಕಾರ್ಯಕ್ರಮದಲ್ಲಿ ಸಂದಾಯವಾದ ಹಣವನ್ನು ಒಂದು ಉದ್ದೇಶವನ್ನು ಇಟ್ಟುಕೊಂಡು ನಿರ್ಗತಿಕರು, ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ನೀಡುತ್ತದೆ. ಅಲ್ಲದೆ ಪ್ರತಿ ತಿಂಗಳೂ 16 ಮಂದಿಗೆ ವೃದ್ಧರಿಗೆ ಸಮಾಜದ ವತಿಯಿಂದ ಮಾಸಾಶನ ನೀಡಲಾಗುತ್ತಿದೆ. ಪ್ರತಿ ವರ್ಷ ಟ್ರಸ್ಟಿನಿಂದ ಶೈಕ್ಷಣಿಕ ಸಹಾಯ ಮತ್ತು ವೈದ್ಯಕೀಯ ಸಹಾಯ ಮಾಡಲಾಗುತ್ತಿದೆ. ಈ ವರ್ಷ ವೈದ್ಯಕೀಯ ಸಹಾಯಾರ್ಥವಾಗಿ ಉತ್ಸವ ಸಂಗ್ರಹಿತ ಹಣವನ್ನು ನೀಡಲು ನಿರ್ಧಾರ ಮಾಡಲಾಗಿದೆ.
ಪೂರ್ಣಿಮಾ ಆತ್ಮೀಯ ನುಡಿ
ಸಂಕೇತಿ ಸಮಾಜದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಅವರು, ನನಗೆ ಈ ಸಂಕೇತಿ ಜನಾಂಗದೊಂದೆಗೆ ನಲವತ್ತು ವರ್ಷದ ಸಂಬಂಧವಿದೆ. ನಮ್ಮ ತಂದೆಯ ಅನೇಕ ಗಮಕ ಸ್ನೇಹಿತರು ಸಂಕೇತಿಗಳೇ ಆಗಿದ್ದರು. ಸಂಕೇತಿಗಳು ಸ್ವಭಾವ ಸಹಜವಾಗಿ ಬುದ್ಧಿವಂತರು ಹಾಗು ವೃತ್ತಿ ಪ್ರವೃತ್ತಿಯಲ್ಲಿ ಸ್ವಾಭಿಮಾನಿ ಜೀವನ ಹೊಂದಿರುವವರು ಎಂದರು.
ಕನ್ನಡ ಲಿಪಿಯ ಸಂಕೇತಿ ಭಾಷೆ
ಸಂಕೇತಿ ಮೂಲನಿವಾಸಿಗಳು ಜನರು ಕೇರಳ, ತಮಿಳುನಾಡು ಕಾವೇರಿ ತೀರದಲ್ಲಿ ನೆಲೆಸಿದ ಕಾರಣ ಅವರ ಭಾಷೆಯಲ್ಲಿ ತಮಿಳು, ಕನ್ನಡ, ಮಲೆಯಾಳಂ ಭಾಷೆ ಸೇರಿ ಸಂಕೇತಿ ಭಾಷೆ ಹೊರಹೊಮ್ಮತ್ತದೆ. ಅದರೆ ಅವರು ಬಳಸುವ ಲಿಪಿ ಮಾತ್ರ ಕನ್ನಡವಾಗಿದೆ.
ಸಂಕೇತಿ ಎಂದರೆ ಯಾರು?
ಕಾವೇರಿ ತೀರದಲ್ಲಿ ನೆಲೆಸಿದ್ದ ಹಾಗು ಕರ್ನಾಟಕ, ತಮಿಳುನಾಡು, ಕೇರಳ ಗಡಿ ಭಾಗದಲ್ಲಿ ವಾಸವಾಗಿದ್ದ ಜನಸಮೂಹವೇ ಸಂಕೇತಿಗಳು, ಕೃಷಿಯನ್ನು ಮಾಡುತ್ತಾ ಪ್ರಾಕೃತಿಕ ಸಂಘರ್ಷಗಳನ್ನು ಎದರುಸಿ ದೃಢಗೊಂಡ ಗಟ್ಟಿಗರು, ವೇದ, ಶಾಸ್ತ್ರ, ಸಂಗೀತ,ಕೃಷಿ ಗಳಲ್ಲಿ ಪರಿಣತಿ ಪಡೆದ ಸುಸಂಸ್ಕೃತರು.
ನಾಚಾರಮ್ಮ ಮಾಡಿದ ನಿರ್ಧಾರ
ಸಂಕೇತಿ ಜನಾಂಗದ ಮೂಲ ವ್ಯಕ್ತಿ ಮಹಿಳೆ ಆಕೆಯೇ ನಾಚಾರಮ್ಮ. ತನ್ನ ಪಂಗಡದಲ್ಲಿ ಉಂಟಾದ ಅವಮಾನವನ್ನು ಸಹಿಸಲಾರದೆ ತನ್ನ ಜನರನ್ನು ಕರೆದು ಕಾವೇರಿ ತೀರ ಪ್ರದೇಶದಲ್ಲಿ ನೆಲೆಸಿದಾಕೆ. ತಮ್ಮದೇ ಆದ ರೀತಿಯಲ್ಲಿ ಬದುಕಲು ಪ್ರಾರಂಭಿಸಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದವಳು.