ಲಾಲ್ ಬಾಗ್ ನಲ್ಲಿ ಕುವೆಂಪು ಮನೆ, ಕವಿಶೈಲದ ಆಕರ್ಷಣೆ
ಬೆಂಗಳೂರು, ಆಗಸ್ಟ್ 3: ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯ ದಿನಾಚರಣೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಆಯೋಜನೆಗೊಳ್ಳುವ ಫಲ ಪುಷ್ಪ ಪ್ರದರ್ಶನ ಈ ಬಾರಿಯೂ ಕಣ್ಮನ ಸೆಳೆಯಲಿದೆ.
ನಾಳೆ(ಆಗಸ್ಟ್ 4)ಯಿಂದ ಆಗಸ್ಟ್ 15 ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಸಿದ್ಧತೆಗಳೆಲ್ಲ ಮುಗಿದಿದ್ದು, ಇನ್ನೇನಿದ್ದರೂ ಜನರು ಹೋಗಿ ಕಣ್ತುಂಬಿಕೊಳ್ಳಬೇಕಷ್ಟೆ! ಪ್ರತಿವರ್ಷವೂ ಒಂದಿಲ್ಲೊದು ಹೊಸ ಪರಿಕಲ್ಪನೆಯೊಂದಿಗೆ ಜನರನ್ನು ಆಕರ್ಷಿಸುವ ಫಲ-ಪುಷ್ಪ ಮೇಳದ ಈ ಬಾರಿಯ ಆಕರ್ಷಣೆ ರಾಷ್ಟ್ರಕವಿ ಕುವೆಂಪು ಅವರ ಕವಿಶೈಲ.
ಬೆಂಗಳೂರಿನ ಲಾಲ್ ಬಾಗಿನಲ್ಲಿ ಕುವೆಂಪು 'ಕವಿಶೈಲ'!
ಹೌದು, ಲಾಲ್ ಬಾಗಿನ ಗ್ಲಾಸ್ ಹೌಸ್ ನ ಮಧ್ಯಭಾಗದಲ್ಲಿ ಕೆಂಪು, ಹಳದಿ, ಶ್ವೇತ ವರ್ಣದ ಗುಲಾಬಿ ಹೂವುಗಳು, ಹಳದಿ ಬಣ್ಣದ ಕಾರ್ನೇಷನ್ ಹೂಗಳು, ಸೀತಾಳೆ(ಆರ್ಕಿಡ್ಸ್) ಹೂಗಳು ಮತ್ತು ಆಯ್ದ ಎಲೆ ಜಾತಿಯ ಜೋಡಣೆಯೊಂದಿಗೆ 21 ಅಡಿ ಎತ್ತರ, 30 ಅಡಿ ಅಗಲ ಹಾಗೂ 38 ಅಡಿ ಉದ್ದದಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಮನೆಯ ಪ್ರತಿರೂಪವನ್ನು ನಿರ್ಮಿಸಲಾಗಿದೆ. 3.5 ಲಕ್ಷ ಫ್ರೆಂಚ್ ಗುಲಾಬಿ ಹಾಗೂ ಇತರೆ ಹೂಗಳಿಂದ ರಾಷ್ಟ್ರಕವಿಯ ಮನೆಯನ್ನು ಅಲಂಕರಿಸಲಾಗಿದ್ದು, ಒಟ್ಟು 10.5 ಲಕ್ಷ ಹೂವುಗಳು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ಕಣ್ಣು ತಣಿಸಲಿವೆ.
25 ದಿನಗಳಲ್ಲಿ, 30 ಕಲಾವಿದರು ನಿರ್ಮಿಸಿರುವ ಕುಪ್ಪಳ್ಳಿಯ ಕವಿ ಸಮಾಧಿ ಕವಿಶೈಲದ ಪ್ರತಿರೂಪದ ವಿನ್ಯಾಸಕಾರರು ಕಲಾನಿಪುಣ ರಂಜನ್ ರಾಮಚಂದ್ರ. 2x2 ಅಡಿ ಗಾತ್ರ ಹಾಗೂ 10 ಅಡಿ ಎತ್ತರದ 18 ಬೃಹತ್ ಶಿಲಾಮಾದರಿ ಸ್ತಂಭಗಳು ಮತ್ತು 10 ಶಿಲಾಮಾದರಿ ಬೀಮ್ ಗಳ ಜೋಡಣೆ ಮೂಲ ಕವಿಶೈಲವನ್ನು ನೆನಪಿಸುತ್ತಿದೆ. ಫಲಪುಷ್ಪ ಪ್ರದರ್ಶನದ ಕುರಿತ ಸವಿವರವನ್ನೊಳಗೊಂಡ ಲಾಲ್ ಬಾಗ್ ಆಪ್ ಅನ್ನು ಸಹ ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಮಲೆನಾಡಿನಸೊಬಗು
ಕವಿಶೈಲದ ಬಂಡೆಯ ಮೇಲೆ ಖ್ಯಾತ ಕವಿಗಳಾದ ಬಿಎಂಶ್ರೀ, ಕುವೆಂಪು, ಟಿ.ಎಸ್.ವೆಂಕಣ್ಣಯ್ಯ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಹಿಗಳನ್ನು ನೆನಪಿಸುವ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಕುವೆಂಪು ಅವರ ಪುತ್ಥಳಿಯನ್ನೂ ಇಡಲಾಗುತ್ತಿದೆ. ಕವಿಮನೆ, ಕವಿಶೈಲದೊಟ್ಟಿಗೆ ಮಲೆನಾಡಿನ ಸೊಬಗನ್ನು ಪ್ರತಿನಿಧಿಸುವ 3ಡಿ ಜೋಗ ಜಲಪಾತವೂ ನೋಡುಗರ ಕಣ್ಮನ ತಣಿಸಲಿದೆ.
ಇಮ್ಮಡಿಗೊಳ್ಳಲಿದೆ ಗ್ಲಾಸ್ ಹೌಸ್ ಸೌಂದರ್ಯ
ಕುವೆಂಪು ಪುಷ್ಪ ಸಾಹಿತ್ಯ ದರ್ಶನ, ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಅಲಂಕಾರಿಕ ಪುಷ್ಪಗಳ ಜೋಡಣೆ, ಹೂವಿನ ಪಿರಮಿಡ್ ಗಳು, ವಾರ್ಷಿಕ ಹೂಗಳ ರಂಗು, ಹೊಸ ಹೂಗಳ ಜೋಡಣೆಗಳಿಂದ ಗ್ಲಾಸ್ ಹೌಸ್ ನ ಸೌಂದರ್ಯ ಇಮ್ಮಡಿಗೊಳ್ಳಲಿದೆ. ಪ್ರದರ್ಶನ ಆಗಸ್ಟ್ 15 ರವರೆಗೆ ಇರುವುದರಿಂದ ಗಾಜಿನ ಮನೆಯ ಹೂವುಗಳು ಬಾಡದಂತೆ ನೋಡಿಕೊಳ್ಳಲು ಒಳಾಂಗಣಕ್ಕೆ ಹಿಮಸಿಂಚನ (ಫಾಗರ್ಸ್)ದ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರಕವಿ ರಚಿಸಿದ ನಾಟಕದ ದೃಶ್ಯ
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕುವೆಂಪು ಅವರು ರಚಿಸಿದ ಬೊಮ್ಮನಹಳ್ಳಿಯ ಕಿಂದರಜೋಗಿಯ ದರ್ಶನ, ಜಲಗಾರ ನಾಟಕದ ದೃಶ್ಯ, ಐದು ವರ್ಷದ ಬಾಲಕಿ ಪೂವಮ್ಮನ ಚಿತ್ರಣ, ಕಾನೂನು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸನ್ನಿವೇಶ, ಶ್ರೀರಾಮಾಯಣ ದರ್ಶನಂ-ದಶಾನನ ಸ್ವಪ್ನಸಿದ್ಧಿ ಸನ್ನಿವೇಶಗಳನ್ನು ಜನರು ಕಣ್ತುಂಬಿಸಿಕೊಳ್ಳಬಹುದು. ಮರಳಿನಲ್ಲಿ ಅರಳುವ ನೇಗಿಲ ಯೋಗಿ, ಪೇಪರ್ ಕಪ್ ಮ್ಯೂರಲ್ ನಲ್ಲಿ ಕುವೆಂಪು, ಬಣ್ಣದ ಚೆಂಡುಗಳಲ್ಲಿ ಕುವೆಂಪು ಮುಖಬಿತ್ತಿ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
ಕಲಾ ಸ್ಪರ್ಧೆ
ಆ.4 ಮತ್ತು 5ರಂದು ಡಾ.ಎಂ.ಎಚ್ ಮರಿಗೌಡ ಸ್ಮಾರಕ ಭವನದಲ್ಲಿ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಯಿದ್ದು, ಇದನ್ನು ಸಾಹಿತಿ ಡಾ.ಕಮಲಾ ಹಂಪನಾ ಉದ್ಘಾಟಿಸಲಿದ್ದಾರೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆ.14ರಂದು ಮಧ್ಯಾಹ್ನ 2ಕ್ಕೆ ಬಹುಮಾನ ವಿತರಿಸಲಾಗುವುದು.
ಉಚಿತ ಪ್ರವೇಶ ಯಾರಿಗೆ?
ಆ.4, 7, 8,9,10, 11 ಮತ್ತು 14ರಂದು ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪ್ರವೇಶ ದರ ಎಷ್ಟು?
ವಾರದ ದಿನಗಳಾದರೆ ತಲಾ 50 ರೂ. ವಾರಾಂತ್ಯದಲ್ಲಿ ತಲಾ 60 ರೂ., ಮಕ್ಕಳಿಗಾದರೆ 20 ರೂ. ನಿಗದಿಪಡಿಸಲಾಗಿದೆ. ಕ್ಯಾಮೆರಾ ತೆಗೆದುಕೊಂಡು ಹೋಗುವವರು ಅದಕ್ಕೆ ಪ್ರತ್ಯೇಕ ದರ ನೀಡಬೇಕು.
ಮೆಟ್ರೋದಿಂದ ಅನೂಕುಲ
ಲಾಲ್ ಬಾಗ್ ವರೆಗೂ ಮೆಟ್ರೋ ವ್ಯವಸ್ಥೆ ಇರುವುದರಿಂದ ಪುಷ್ಪಪ್ರದರ್ಶನಕ್ಕೆ ಬರುವ ಜನರಿಗೆ ಅನುಕೂಲವಾಗಲಿದೆ. ಲಾಲ್ ಬಾಗ್ ಸುತ್ತ ಮುತ್ತ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದ್ದು ಜನರು ಪರದಾಡುವ ಕಷ್ಟವಿರುವುದಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿದಿನ ಸಂಜೆ 4 ರಿಂದ 7 ಗಂಟೆಯವರೆಗೆ ಕುವೆಂಪು ಅವರು ರಚಿಸಿದ ಕವಿತೆಗಳ ಗೀತಗಾಯನ ಮತ್ತು ನಾಟಕಗಳನ್ನು ಪ್ರದರ್ಶಿಸಲಾಗುವುದು. ಆ.5 ರಂದು ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಮಂಡ್ಯದ ಜಯಪ್ರಕಾಶ್ ಗೌಡರ ಕಲಾಬಳಗದಿಂದ ಕುವೆಂಪು ನಾಟಕವನ್ನು ಪ್ರದರ್ಶಿಸಲಾಗುವುದು.