ರಸ್ತೆಗುಂಡಿ ಮುಚ್ಚುವ ಕೆಲಸ, ನಗರ ಪ್ರದಕ್ಷಿಣೆ ನಡೆಸಿದ ಜಾರ್ಜ್
ಬೆಂಗಳೂರು, ಅಕ್ಟೋಬರ್ 20 : ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗುಂಡಿಗಳು ಬಾಯ್ತೆರೆದು ಕೂತಿವೆ. ಬಿಬಿಎಂಪಿ ರಸ್ತೆಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಂಡಿದೆ. ಸಚಿವ ಕೆ.ಜೆ.ಜಾರ್ಜ್ ಇಂದು ಮುಂಜಾನೆ ನಗರ ಪ್ರದಕ್ಷಿಣೆ ಮಾಡಿ ಗುಂಡಿ ಮುಚ್ಚುವ ಕಾರ್ಯವನ್ನು ವೀಕ್ಷಿಸಿದರು.
ಶುಕ್ರವಾರ ಮುಂಜಾನೆ 2 ಗಂಟೆಯಿಂದ 3.45ರ ತನಕ ಜಾರ್ಜ್ ನಗರ ಪ್ರದಕ್ಷಿಣೆ ಮಾಡಿದರು. ಬಿಬಿಎಂಪಿ ಮೇಯರ್ ಸಂಪತ್ ರಾಜ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಇಂಜಿನಿಯರ್ಗಳು, ಅಧಿಕಾರಿಗಳು ಸಚಿವರ ಜೊತೆ ಉಪಸ್ಥಿತರಿದ್ದರು.
ಸೋರುತಿಹುದು ನಾಯಂಡಹಳ್ಳಿ ಅಂಡರ್ ಪಾಸ್ ಮಾಳಿಗೆ
ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಜಾರ್ಜ್ ಬೆಂಗಳೂರು ನಗರ ಪ್ರದಕ್ಷಿಣೆ ಚಿತ್ರಗಳನ್ನು ಹಾಕಿದ್ದಾರೆ. ಹಿಂದೆ ಬಿಬಿಎಂಪಿ ನೀಡಿದ ಮಾಹಿತಿಯಂತೆ ನಗರದಲ್ಲಿ 15 ಸಾವಿರ ಗುಂಡಿಗಳಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಂಡಿಗಳನ್ನು ಮುಚ್ಚಲು 15 ದಿನಗಳ ಗಡುವು ನೀಡಿದ್ದರು.
ಚಿತ್ರಗಳು : ಬೆಂಗಳೂರಿನ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ!
ನಗರದಲ್ಲಿ ರಸ್ತೆಗುಂಡಿಗಳಿಂದ ನಡೆದ ಅಪಘಾತದಲ್ಲಿ 5 ಜನರು ಸಾವನ್ನಪ್ಪಿದ್ದರು. ರಸ್ತೆಗುಂಡಿಗಳನ್ನು ಮುಚ್ಚುವಂತೆ ವಿವಿಧ ರೀತಿಯ ಪ್ರತಿಭಟನೆಗಳು ನಡೆದಿದ್ದವು. ಸದ್ಯ, ಮೂರು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿಲ್ಲ. ಆದ್ದರಿಂದ ಗುಂಡಿಮುಚ್ಚುವ ಕಾರ್ಯವನ್ನು ವೇಗವಾಗಿ ನಡೆಸಲಾಗುತ್ತಿದೆ.
ಚಾಲುಕ್ಯ ವೃತ್ತದಿಂದ ನಗರ ಪ್ರದಕ್ಷಿಣೆ ಆರಂಭ
ಶುಕ್ರವಾರ ಮುಂಜಾನೆ 2 ಗಂಟೆಗೆ ಕೆ.ಜೆ.ಜಾರ್ಜ್ ಚಾಲುಕ್ಯ ಸರ್ಕಲ್ ಬಳಿಯಿಂದ ನಗರ ಪ್ರದಕ್ಷಿಣೆ ಆರಂಭಿಸಿದರು. ವಿಂಡ್ಸರ್ ಮ್ಯಾನರ್ ಸೇತುವೆ. ಮೇಕ್ರಿ ಸರ್ಕಲ್-ಸಂಜಯ್ ನಗರ ರಸ್ತೆಯಲ್ಲಿ ಮೊದಲು ಜಾರ್ಜ್ ಪರಿಶೀಲನೆ ನಡೆಸಿದರು.
ಫೈಥಾನ್ ಯಂತ್ರದ ಕೆಲಸ ಪರಿಶೀಲನೆ
2.30ಕ್ಕೆ ಸಂಜಯ ನಗರ ಮುಖ್ಯರಸ್ತೆಯಲ್ಲಿ ಪರಿಶೀಲನೆ ನಡೆಸಿದರು. ನಂತರ ನ್ಯೂ ಬಿಇಎಲ್ ರಸ್ತೆಯಲ್ಲಿ ಫೈಥಾನ್ ಯಂತ್ರದಿಂದ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಅದನ್ನು ವೀಕ್ಷಿಸಿದರು.
ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರ ಸೇವನೆ
2.45ಕ್ಕೆ ವಾರ್ಡ್ ನಂ 18ರ ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರ ಸವಿದ ಸಚಿವರು, ನಂತರ ಹೆಬ್ಬಾಳ ಫ್ಲೈ ಓವರ್ ಕೆಳಗೆ ನಡೆಯುತ್ತಿರುವ ರಸ್ತೆಗುಂಡಿ ಮುಚ್ಚುವ ಕಾರ್ಯವನ್ನು ವೀಕ್ಷಿಸಿದರು.
ಬಿಇಎಲ್ ಫ್ಯಾಕ್ಟರಿ
ನಂತರ ಬಿಇಎಲ್ ಮುಖ್ಯರಸ್ತೆ, ಗಂಗಮ್ಮನಗುಡಿ, ಎಂ.ಎಸ್.ಪಾಳ್ಯದಲ್ಲಿ ಪರಿಶೀಲನೆ ನಡೆಸಿದರು. ವಿದ್ಯಾರಣ್ಯಪುರ, ಥಣಿಸಂದ್ರದಲ್ಲಿ ಪರಿಶೀಲನೆ ನಡೆಸಿ ಪ್ರದಕ್ಷಿಣೆಯನ್ನು ಅಂತ್ಯಗೊಳಿಸಿದರು.