ನೋಟು ಬದಲಿಸಲು ಆರ್ ಬಿಐ ಅಧಿಕಾರಿಗೆ ಶೇ 30 ಕಮಿಷನ್
ಬೆಂಗಳೂರು, ಡಿಸೆಂಬರ್ 14: ನೋಟು ರದ್ದು ಘೋಷಣೆಯಾದ ನಂತರ ಕಪ್ಪುಹಣ ಇರುವವರಿಗೆ ಸಹಾಯ ಮಾಡಿದ ಆರೋಪದಲ್ಲಿ ಮಂಗಳವಾರ ಸಿಬಿಐ ಅಧಿಕಾರಿಗಳು ಬಂಧಿಸಿದ ರಿಸರ್ವ್ ಬ್ಯಾಂಕ್ ನ ಹಿರಿಯ ವಿಶೇಷ ಸಹಾಯಕ ಮೈಕೆಲ್ ಮತ್ತಿಬ್ಬರಿಂದ ಹೊಸ ಸಂಗತಿಗಳು ಬಯಲಿಗೆ ಬರುತ್ತಿವೆ.
ನೋಟು ಬದಲಾವಣೆಯ ನಂಟು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯವರೆಗೆ ಚಾಚಿಕೊಂಡಿದೆ. ಆರೋಪಿಗಳಿಂದ ಹದಿನೇಳು ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಮೈಕೆಲ್ ಹಾಗೂ ಅತನ ಸಹಚರರಾದ ಎಸ್ ಬಿಎಂ ಹೆಡ್ ಕ್ಯಾಷಿಯರ್ ಪರಶಿವಮೂರ್ತಿ ಇತರರ ವಿರುದ್ಧ ಹನ್ನೆರಡು ಪ್ರಕರಣದಲ್ಲಿ ಭಾಗಿಯಾದ ಆರೋಪವಿದೆ.[ನೋಟು ಬದಲಿಸಲು ಶೇ 30 ಕಮಿಷನ್: ಬ್ಯಾಂಕ್ ನೌಕರ ಅಮಾನತು]
1.51 ಕೋಟಿ ರುಪಾಯಿ ಹೊಸ ನೋಟಿಗೆ ಹಣ ಬದಲಾಯಿಸಿಕೊಟ್ಟ ಆರೋಪ ಇವರ ಮೇಲಿದೆ. ನೋಟು ನಿಷೇಧದ ನಂತರ ಬಂಧಿಸಲಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಅಧಿಕಾರಿ ಮೈಕೆಲ್. ಅಪನಗದೀಕರಣ ಘೋಷಣೆ ನಂತರ ಮೈಕೆಲ್ ನನ್ನು ಕೊಳ್ಳೇಗಾಲದ ಕರೆನ್ಸಿ ಚೆಸ್ಟ್ ಗೆ ಕಳಿಸಲಾಗಿತ್ತು.
ಅಲ್ಲಿ ಆತ ಪರಶಿವಮೂರ್ತಿ ಜತೆಗೆ ಕೈ ಜೋಡಿಸಿ, ಹದಿಮೂರು ಮಂದಿ ಬಳಿ ಶೇ 30ರಷ್ಟು ಕಮಿಷನ್ ತೆಗೆದುಕೊಂಡು ಹಣ ಬದಲಿಸಿಕೊಳ್ಳಲು ನೆರವು ನೀಡಿದ್ದರು ಎಂದು ಆರ್ ಬಿಐ ಅಧಿಕಾರಿಗಳು ತಿಳಿಸಿದ್ದಾರೆ.