ಬೆಂಗಳೂರು: ಬೆಳ್ಳಂದೂರು ಕರೆ ಮತ್ತೆ ವಿಷದ ಒಡಲು
ಬೆಂಗಳೂರು, ಮೇ 23: ಬೆಳ್ಳಂದರು ಕೆರೆ ಮತ್ತೆ ಬೆಳ್ಳಗಾಗಿದೆ. ಮತ್ತೆ ರಾಸಾಯನಿಕ ತುಂಬಿದ ನೊರೆ ಕೆರೆಯಲ್ಲಿ ತುಂಬಿಕೊಂಡಿದ್ದು ಕೋಡಿಯಾಗಿ ಹರಿದಿದೆ.
ನಗರದಲ್ಲಿ ಕಳೆದ ಒಂದು ವಾರದಿಂದ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಹರಿವು ಹೆಚ್ಚಿರುವುದರ ಪರಿಣಾಮ ನೊರೆ ತುಂಬಿಕೊಂಡಿದ್ದು ಸ್ಥಳೀಯರಲ್ಲಿ ಅತಂಕಕ್ಕೆ ಕಾರಣವಾಗಿದೆ.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]
ಒಂದೆಡೆ ರಾಜಕಾಳುವೆ ಕಿರಿದಾಗಿದ್ದು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದು ನಾಗರಿಕರು ಪರದಾಡುವಂತಾಗಿದೆ. ಯಮಲೂರಿನಿಂದ ಕರಿಯಮ್ಮನ ಅಗ್ರಹಾರದ ಮೂಲಕ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವು ಜಲಾವೃತ್ತವಾಗಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ.[ಬೆಳ್ಳಂದೂರು ಕೆರೆ ಶುದ್ಧೀಕರಣ ಸಮಿತಿಯಲ್ಲಿ ಯಾರ್ಯಾರಿದ್ದಾರೆ?]
ಸಮಿತಿ ನೇಮಕ: ರಾಸಾಯನಿಕ ತುಂಬಿರುವ ಬೆಳ್ಳಂದೂರು ಕೆರೆ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 18 ಸದಸ್ಯರ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಲಾಗಿದೆ. ಈ ಕೆರೆಯನ್ನು ಯಾವ ಆಧಾರದಲ್ಲಿ ಶುದ್ಧ ಮಾಡಬಹುದು? ಪರ್ಯಾಯ ಪರಿಹಾರ ಕ್ರಮಗಳು ಏನು? ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಆರು ವಾರಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಸೂಚನೆ ನೀಡಲಾಗಿದೆ.