ಬೆಂಗಳೂರು ಮಳೆ ಅವಾಂತರ: ಮುಖ್ಯಮಂತ್ರಿಗಳಿಗೆ ಬಿಜೆಪಿಯ 5 ಪ್ರಶ್ನೆ
ಮಳೆಯಿಂದ ಬೆಂಗಳೂರು ನಗರದಲ್ಲಿ ಇಷ್ಟೊಂದು ಸಮಸ್ಯೆಯಾಗಲು ಹಿಂದಿನ ಸರಕಾರ ಏನೂ ಕೆಲಸ ಮಾಡದೇ ಇರುವುದು ಕಾರಣ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು.
ಬೆಂಗಳೂರು, ಸೆ 11: ಮಳೆ ಇನ್ನೇನು ಅವಾಂತರ ಮಾಡುತ್ತೋ ಎನ್ನುವ ಭೀತಿಯಲ್ಲಿ ಬೆಂಗಳೂರಿಗರು ಇದ್ದರೆ, ಇಷ್ಟೆಲ್ಲಾ ತೊಂದರೆಗಳಿಗೆ ಹಿಂದಿನ ಸರಕಾರವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮೇಲೆ ಗೂಬೆ ಕೂರಿಸಿದ್ದಾರೆ.
ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಾನುವಾರ (ಸೆ 10) ಭೇಟಿ ನೀಡಿರುವುದನ್ನು ದೊಡ್ಡ ನಾಟಕ ಎಂದು ಹೇಳಿರುವ ಸಿದ್ದರಾಮಯ್ಯ, ಮಳೆಯಿಂದ ನಗರದಲ್ಲಿ ಇಷ್ಟೊಂದು ಸಮಸ್ಯೆಯಾಗಲು ಹಿಂದಿನ ಸರಕಾರ ಏನೂ ಕೆಲಸ ಮಾಡದೇ ಇರುವುದು ಕಾರಣ ಎಂದು ಹೇಳಿದ್ದಾರೆ.
ಮರ ಬಿದ್ದರೆ ಬಿಬಿಎಂಪಿಗೆ ದೂರು ನೀಡೋದು ಹೇಗೆ
ಮುಖ್ಯಮಂತ್ರಿಗಳ ಪ್ರತಿಕ್ರಿಯೆಗೆ ತಿರುಗೇಟು ನೀಡಿರುವ ಬಿಜೆಪಿ, ಮುಖ್ಯಮಂತ್ರಿಗಳಲ್ಲಿ ಐದು ಪ್ರಶ್ನೆಗಳನ್ನು ಕೇಳಿದೆ. ಬೆಂಗಳೂರು ನಗರ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವಥನಾರಾಯಣ ಈ ಸಂಬಂಧ ಟ್ವೀಟ್ ಮಾಡಿ, ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳು ಇಂತಿವೆ:
1. ಮಳೆ ಇಷ್ಟೆಲ್ಲಾ ಆವಾಂತರ ಮಾಡಲು ಕಾಲುವೆಗಳನ್ನು ಅತಿಕ್ರಮಿಸಿರುವುದೂ ಒಂದು ಕಾರಣ ಎಂದು ಗೊತ್ತಿದ್ದರೂ, ಅದಕ್ಕೆ ಅನುಮತಿ ನೀಡಲು (encroachment-clearance) ಮುಂದಾಗಿದ್ದು ಯಾಕೆ?
2. ಮುಂಗಾರು ಪೂರ್ವದಲ್ಲಿ ಮಳೆನೀರು ಹರಿಯುವ ಕಾಲುವೆಯಿಂದ ಹೂಳೆತ್ತುವ ಕೆಲಸವನ್ನೇಕೆ ಕೈಗೊಂಡಿಲ್ಲ?
3. ಬೆಂಗಳೂರು ನಗರ ಅಭಿವೃದ್ದಿಗಾಗಿ ಕೋಟ್ಯಾಂತರ ರೂಪಾಯಿ ಬಿಡುಗಡೆಯಾದ ದುಡ್ಡು ಎಲ್ಲಿಗೆ ಹೋಯಿತು?
4. ಮಳೆಗಾಲ ಆರಂಭವಾಗುತ್ತಿರುವುದನ್ನು ಅರಿತೂ, ಮರಗಳ ಕೊಂಬೆಯನ್ನು ಕಡಿಯುವ ಕೆಲಸಕ್ಕೆ ಬಿಬಿಎಂಪಿ/ಸರಕಾರ ಯಾಕೆ ಮುಂದಾಗಲಿಲ್ಲ?
5. ಮೋರಿ, ಚರಂಡಿಗಳನ್ನು ಮುಚ್ಚುವ ಯಾವುದೇ ಮುಂಜಾಗೃತಾ ಕ್ರಮಗಳನ್ನು ಸರಕಾರ ಯಾಕೆ ತೆಗೆದುಕೊಳ್ಲಲಿಲ್ಲ, ಮೋರಿಗಳನ್ನು ಮುಚ್ಚಿದ್ದರೆ ಜೀವಕ್ಕಾಗುವ ತೊಂದರೆಯನ್ನಾದರೂ ತಪ್ಪಿಸಬಹುದಿತ್ತಲ್ಲವೇ?