ಬೆಂಗಳೂರಲ್ಲಿ ಸರಗಳ್ಳತನ, ಉತ್ತರ ಭಾರತದ ಖದೀಮರ ಬಂಧನ
ಬೆಂಗಳೂರು, ನವೆಂಬರ್ 9: ಉದ್ಯೋಗ, ವ್ಯಾಪಾರ, ಉದ್ಯಮ ಹೀಗೆ ಉದ್ಯಾನ ನಗರಿಗೆ ಹಲವಾರು ಕಾರಣಗಳಿಗೆ ಉತ್ತರ ಭಾರತದ ಜನರು ವಲಸೆ ಬರುತ್ತಾರೆ. ಆದರೆ ಈ ಐವರು ಬಂದಿದ್ದು ಸರಗಳ್ಳತನಕ್ಕೆ. ಹೀಗೆ ಬೆಂಗಳೂರಿಗೆ ಬಂದ ಇವರನ್ನು ನಗರದ ಆಗ್ನೇಯ ವಿಭಾಗದ ಪೊಲೀಸರು ಈಗ ಕಂಬಿ ಹಿಂದೆ ಕಳುಹಿಸಿದ್ದಾರೆ.
ಸರಗಳ್ಳತನಕ್ಕೆ ಕುಖ್ಯಾತವಾಗಿರುವ ಭಾವರಿಯ ಗ್ಯಾಂಗ್ ನ ಐವರು ಸರಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ಬಂಧಿತರು 30 ಪ್ರಕರಣಗಳಲ್ಲಿ ಪಾಲ್ಗೊಂಡಿರುವುದು ತಿಳಿದು ಬಂದಿದೆ. ಪೊಲೀಸರು ಬಂಧಿತರಿಂದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭಾವರಿಯಾ ಎಂಬುದು ಒಂದು ಜಾತಿಯಾಗಿದ್ದು ಈ ಜನರು ಉತ್ತರದ ರಾಜ್ಯಗಳಲ್ಲಿ ವಾಸಿಸುತ್ತಾರೆ. ಇದೇ ಸಮುದಾಯದ ಒಂದಷ್ಟು ಕಳ್ಳರು ನಗರದ ಮಹಿಳೆಯರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಈ ಸರಗಳ್ಳರ ಗ್ಯಾಂಗ್ ಗೆ ಭಾವರಿಯಾ ಎಂಬ ಹೆಸರು ಬಂದಿತ್ತು.
ಈ ಗ್ಯಾಂಗ್ ನ ಕಳ್ಳರು ಎಲ್ಲೆಂದರಲ್ಲಿ ನುಗ್ಗಿ ಮಹಿಳೆಯರ ಚಿನ್ನದ ಸರಗಳನ್ನು ಕಳ್ಳತನ ಮಾಡುತ್ತಿದ್ದರು. ಇದೀಗ ಈ ಗ್ಯಾಂಗ್ ಸರಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕೆಲವು ಪ್ರದೇಶಗಳ ಮಹಿಳೆಯರಾದರೂ ನಿರ್ಭೀತಿಯಿಂದ ಓಡಾಡುವಂತಾಗಿದೆ.
ಬಂಧಿತರಿಂದ ವಶಪಡಿಸಿಕೊಂಡ ಚಿನ್ನಾಭರಗಳನ್ನು ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಇದರಿಂದ ತಮ್ಮ ಅಮೂಲ್ಯ ದುಡಿಮೆಯ ಹಣದಲ್ಲಿ ಕೊಂಡುಕೊಂಡ ಸರಗಳನ್ನು ಕಳೆದುಕೊಂಡಿದ್ದ ಹೆಂಗಳೆಯರು ಅವುಗಳನ್ನು ಮರಳಿ ಪಡೆದಿದ್ದಾರೆ. ಮತ್ತು ಪೊಲೀಸರಿಗೆ ಧನ್ಯವಾದ ಸಮರ್ಪಿಸಿದ್ದಾರೆ.