ಬೆಂಗಳೂರಿನ ರಕ್ಕಸ ರಸ್ತೆ ಗುಂಡಿಗೆ ಯುವಕ ದುರ್ಮರಣ: ವಾರದಲ್ಲಿ ಇದು 5 ನೇ ಬಲಿ!
ಬೆಂಗಳೂರು, ಅಕ್ಟೋಬರ್ 11: ನಿನ್ನೆ ತಾನೇ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಬೆಂಗಳೂರಿನ ರಸ್ತೆ ಗುಂಡಿಗೆ ಇಂದು(ಅಕ್ಟೋಬರ್ 11) ಮತ್ತೊಬ್ಬ ಯುವಕ ಬಲಿಯಾಗಿದ್ದು, ಮೃತ್ಯುಕೂಪಗಳಾಗಿ ಬದಲಾಗಿರುವ ರಸ್ತೆಗುಂಡಿಗಳು ಸರ್ಕಾರದ ಬೇಜವಾಬ್ದಾರಿಯನ್ನು ಅಣಕಿಸುತ್ತಿವೆ.
ಬೆಂಗಳೂರಿನ ರಸ್ತೆ ಗುಂಡಿಗೆ ಮಹಿಳೆ ಬಲಿ
ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಬೆಂಗಳೂರಿನ ಉತ್ತರಹಳ್ಳಿಯ ತೇಜಸ್ವಿ ಗೌಡ(20) ಎಂಬ ಯುವಕ ರಸ್ತೆ ಗುಂಡಿಯನ್ನು ತಪ್ಪಿಸುವುದಕ್ಕೆ ಹೋಗಿ, ರಸ್ತೆಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಆತನ ಮೇಲೆ ಹರಿದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಿನ್ನೆ (ಅಕ್ಟೋಬರ್ 10) ತಾನೇ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಯುವಕನೊಬ್ಬ ರಸ್ತೆ ಗುಂಡಿ ತಪ್ಪಿಸುವುದಕ್ಕೆ ಹೋಗಿ, ಆತನ ಹಿಂದೆ ಕುಳಿತಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು, ಹಿಂದಿನಿಂದ ಬಂದ ಲಾರಿ ಹರಿದು ಸಾವಿಗೀಡಾಗಿದ್ದರು.
ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ತೆರಳುತ್ತಿದ್ದ ದೇವನಹಳ್ಳಿ ತಾಲೂಕಿನ ಕುಂದಾಣದ ವೀಣಾ(18) ಮೃತ ದುರ್ದೈವಿ ಎಂದು ಗುರುತಿಸಲಾಗಿತ್ತು.
ಮೈಸೂರು ರಸ್ತೆಯಲ್ಲಿ ಅಕ್ಟೋಬರ್ 8 ರಂದು ರಾಧಾ ಎಂಬ ಮಹಿಳೆ ಬಲಿಯಾಗಿದ್ದರು. ಜೊತೆಗೆ ಮೈಸೂರು ರಸ್ತೆಯ ಫ್ಲೈ ಓವರ್ ನಲ್ಲಿ ಅಕ್ಟೋಬರ್ 3 ರಂದು ಆಂಥೋನಿ ಜೋಸೆಫ್ ಮತ್ತು ಸಗಾಯ ಮೇರಿ ಎಂಬ ದಂಪತಿ ಬಲಿಯಾಗಿದ್ದರು. ಈ ಮೂಲಕ ಒಂದೇ ವಾರದ ಅಂತರದಲ್ಲಿ ಬೆಂಗಳೂರಿನ ರಕ್ಕಸ ರಸ್ತೆ ಗುಂಡಿಗೆ 5 ನೇ ಬಲಿ ಸಿಕ್ಕಂತಾಗಿರುವುದು ದುರದೃಷ್ಟಕರ ಸಂಗತಿ.