ಬಿಬಿಎಂಪಿ ವ್ಯಾಪ್ತಿ ಹಳ್ಳಿಗಳು: ಕಾವೇರಿ ನೀರಿಗೆ ಅರ್ಜಿ ಸಲ್ಲಿಸಿ
ಬೆಂಗಳೂರು, ಮಾರ್ಚ್ 05: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು ಜಲಮಂಡಳಿ ಸಿದ್ಧತೆ ನಡೆದಿದೆ. ಈ ಹಳ್ಳಿಗಳ ನಿವಾಸಿಗಳು ಮಂಡಳಿಯ ಎಂಜಿನಿಯರ್ ಗಳ ಕಚೇರಿಯಲ್ಲಿ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನೀರಿನ ಸಂಪರ್ಕ ಪಡೆಯಬಹುದಾಗಿದೆ.
ಅರ್ಜಿದಾರರು ಮನೆಯ ಮಾಲೀಕತ್ವದ ದಾಖಲೆಗಾಗಿ ಆಸ್ತಿ ತೆರಿಗೆ ಪಾವತಿಸಿದ ರಸೀದಿಯನ್ನು ನೀಡಬೇಕು, ಆಸ್ತಿಗೆ ಸಂಬಂಧಿಸಿದ ಬೇರೆ ದಾಖಲೆಯನ್ನೂ ಒದಗಿಸಬಹುದು ಎಂದು ಮುಖ್ಯ ಎಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ. 110 ಹಳ್ಳಿಗಳ ಅನೇಕ ನಿವಾಸಿಗಳು ಈಗಾಗಲೇ ವಂತಿಗೆ ಮೊತ್ತವನ್ನು ಪಾವತಿಸಿದ್ದಾರೆ.
ಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ
ಅವರು ಅರ್ಜಿಯ ಜೊತೆಗೆ ಪಾವತಿಯ ರಸೀದಿಯನ್ನು ಸಲ್ಲಿಸಿದರೆ ಸಾಕು. ಶುಲ್ಕ ಪಾವತಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿದ ಬಳಿಕ ನೀರಿನ ಸಂಪರ್ಕ ಕಲ್ಪಿಸಲು ಒಂದು ವಾರ ಕಾಲಾವಕಾಶ ಬೇಕಾಗುತ್ತದೆ. ಅರ್ಜಿದಾರರ ಮನೆಗೆ ಜಲಮಂಡಳಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ಅವರಿಗೆ ಕಂದಾಯ ನೋಂದಣಿ (ಆರ್.ಆರ್) ಸಂಖ್ಯೆ ನೀಡಿ, ನೀರಿನ ಮಾಪಕವನ್ನು ಅಳವಡಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಫಲಾನುಭವಿಯ ವಂತಿಗೆ ಮೊತ್ತವನ್ನು (ಬಿಸಿಸಿ) ಡಿಮಾಂಡ್ ಡ್ರಾಫ್ಟ್ (ಡಿ.ಡಿ) ಮೂಲಕವೇ ಸಲ್ಲಿಸಬೇಕು. ಕಟ್ಟಡದ ವಿಸ್ತೀರ್ಣವನ್ನು ಆಧರಿಸಿ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಅಪಾರ್ಟ್ ಮೆಂಟ್ ಸಮುಚ್ಚಯಗಳಿಗೆ ಹಾಗೂ ವಾಣಿಜ್ಯ ಸಂಪರ್ಕಕ್ಕೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ. 1,200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿರುವ ಡ್ಯೂಪ್ಲೆಕ್ಸ್ ಮನೆಗೆ ಸಂಪರ್ಕ ಪಡೆಯಲು ಮಾಲೀಕರು 11 ಸಾವಿರ ರೂ ವಂತಿಗೆ ಮೊತ್ತವಾಗಿ ಪಾವತಿಸಬೇಕಾಗುತ್ತದೆ ಎಂದರು.
ಮಾರ್ಚ್ನಲ್ಲಿ ಬಿಬಿಎಂಪಿ ವ್ಯಾಪ್ತಿಯ7 ಹಳ್ಳಿಗಳಿಗೆ ಕಾವೇರಿ ನೀರು!
ನೀರಿನ ಸಂಪರ್ಕ ಪಡೆಯುವ ಹಳ್ಳಿಗಳು: ವಲ್ಲಭನಗರ, ಸೊನ್ನೇನಹಳ್ಳಿ, ಹೊರಮಾವು, ಸಿದ್ದಾಪುರ, ದಾಸರಹಳ್ಳಿ, ಚಳ್ಳಕೆರೆ, ಕೂಡ್ಲು, ನಾಗನಾಥಪುರ, ಪರಪ್ಪನ ಅಗ್ರಹಾರ, ಗಣಕಲ್ಲು, ಉತ್ತರಹಳ್ಳಿ (ಆಯ್ದ ಪ್ರದೇಶಗಳು), ತೂಬರಹಳ್ಳಿ, ಬೇಗೂರು, ಅರಳೂರು ಪ್ರದೇಶಗಳಾಗಿವೆ.