ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್'
ಬೆಂಗಳೂರು, ಅಕ್ಟೋಬರ್, 28 : ದೇಶಾದ್ಯಂತ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಸೂಕ್ತ ಪರಿಹಾರ ಹಾಗೂ ಹೊರೆಯಾಗಿ ಪರಿಣಮಿಸಿರುವ ಕೃಷಿಯಲ್ಲಿ ಬದಲಾವಣೆ ತರುವ ಉದ್ದೇಶದಿಂದ 'ಯೂ ಫಾರ್ಮ್' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.
ಬೆಂಗಳೂರಿನ ಮೂಲದವರಾದ ಲಂಡನ್ ನ ಟೈಮ್ ಲಾಜಿಕಾ ಲಿಮಿಟೆಡ್ ನ ಮುಖ್ಯ ಅಧಿಕಾರಿಯಾದ ಚಂದ್ರಶೇಖರ್ ಎಚ್.ಎನ್ ಯೂ ಫಾರ್ಮ್ ಎಂಬ ಹೊಸ ಯೋಜನೆಯ ಮುಖ್ಯ ರೂವಾರಿ. 'ಈ ಯೂ ಪಾರ್ಮ್ ಕೃಷಿ ಹಾಗೂ ಹೂಡಿಕೆದಾರರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಇಬ್ಬರಿಗೂ ಅನುಕೂಲವಾಗಲಿದೆ' ಎಂದು ತಿಳಿಸಿದ್ದಾರೆ.[ಕಾಲುವೆಗೆ ಹಾರಿ ಕೆ. ಆರ್ ಪೇಟೆ ರೈತ ಆತ್ಮಹತ್ಯೆ]
ಏನಿದು ಯೂ ಫಾರ್ಮ್?
ಯೂ ಫಾರ್ಮ್ ಪರಿಕಲ್ಪನೆಯ ಅಡಿಯಲ್ಲಿ ಕಂಪನಿ ನಿರ್ದಿಷ್ಟ ತಾಣದಲ್ಲಿ ಭೂಮಿ ಮತ್ತು ಇತರೆ ಸೌಲಭ್ಯಗಳನ್ನು ಹೊಂದಿದ ಕೃಷಿಕರನ್ನು ಆಯ್ಕೆ ಮಾಡುತ್ತದೆ. ಕೃಷಿಕರು ಹಣವನ್ನು ಹೂಡಿಕೆ ಮಾಡುವಂತಿಲ್ಲ. ಬದಲಿಗೆ ಅವರು ಹೂಡಿಕೆದಾರರ ಪರವಾಗಿ ಕಾರ್ಯ ನಿರ್ವಹಿಸುತ್ತಾರೆ.
ಹೂಡಿಕೆದಾರ ಪ್ರದೇಶ, ಕೃಷಿಭೂಮಿ, ಬೆಳೆಯ ಆಯ್ಕೆ, ಬೆಳೆಯ ವಿಧಾನ (ಶೂನ್ಯ ಕೃಷಿ, ಸಾವಯವ ಕೃಷಿ, ರಾಸಾಯನಿಕ ಕೃಷಿ ಇತ್ಯಾದಿ) ಆಯ್ಕೆ ಮಾಡಿಕೊಳ್ಳುತ್ತಾನೆ. ಕೃಷಿ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕ ವ್ಯವಸ್ಥೆ ಇದ್ದು, ಹೂಡಿಕೆದಾರರಿಗೆ ಪ್ರತಿನಿತ್ಯದ ಕೃಷಿ ಚಟುವಟಿಕೆಯ ಮಾಹಿತಿ ನೀಡಲಾಗುತ್ತದೆ.
ಹೂಡಿಕೆದಾರರಿಗೆ ಇಂಟರ್ ನೆಟ್ ಮೂಲಕ ತಮ್ಮ ಕೃಷಿಯ ನೇರ ಮಾಹಿತಿ ಲಭ್ಯವಾಗುತ್ತದೆ. ಅವರು ಸಲಹೆ ನೀಡಬಹುದು, ಬೆಳೆ ಗಮನಿಸಬಹುದು, ಕೃಷಿ ಚಟುವಟಿಕೆ, ಶೀತಲ ಸಂಗ್ರಹ, ಆನ್ ಲೈನ್ ಮಾರಾಟ ಇತ್ಯಾದಿ ಕುರಿತು ಗಮನ ನೀಡಬಹುದು.[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಈ ವ್ಯವಸ್ಥೆಯ ಅನ್ವಯ ಕೃಷಿಕರಿಗೆ ನಿಶ್ಚಿತ ಆದಾಯವಿರುತ್ತದೆ ಮತ್ತು ಶೂನ್ಯ ಹೂಡಿಕೆ ಇರುತ್ತದೆ. ಹೂಡಿಕೆದಾರರು ತಮ್ಮ ಆಯ್ಕೆಯ ಬೆಳೆಯನ್ನು ಭೂಮಿ ಕೊಳ್ಳದೆ ಬೆಳೆಯಬಹುದು. ಇದು ಕೃಷಿಕರಿಗೆ ಮತ್ತು ಆಸಕ್ತಿಯ ಬೆಳೆಗಾರರಿಗೆ ಇಬ್ಬರೂ ಗೆಲ್ಲುವ ಅವಕಾಶ ನೀಡುತ್ತದೆ.
ಕೃಷಿ ವಲಯ ಮತ್ತು ಕೃಷಿಕರನ್ನು ಬಿಕ್ಕಟ್ಟಿನಿಂದ ಹೊರಕ್ಕೆ ತರುವುದು ನನ್ನ ಗುರಿ. ಆದ್ದರಿಂದ ನಾನು ಈ ವಿಶಿಷ್ಟ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು ಇಲ್ಲಿ ಕೃಷಿಕರಿಗೆ ನಿಶ್ಚಿತ ಆದಾಯವಿರುತ್ತದೆ. ಇದರಿಂದ ಅವರ ಜೀವನಮಟ್ಟ ಸುಧಾರಿಸುವುದಲ್ಲದೆ ಕೃಷಿಗೆ ಸಾಲ ಪಡೆಯುವ ಅಗತ್ಯವಿರುವುದಿಲ್ಲ.
ಮತ್ತೊಂದು ಕಡೆ ಹೊಸ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುತ್ತದೆ. ಕೃಷಿಭೂಮಿ ಹೊಂದಿರುವವರಿಗೆ ಕೃಷಿಕರಾಗುವ ಅವಕಾಶ ನೀಡುತ್ತದೆ. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯ ಮೂಲಕ ಗ್ರಾಮೀಣ ಅರ್ಥವ್ಯವಸ್ಥೆ ಸುಧಾರಿಸುತ್ತದೆ' ಎಂದು ಎಚ್.ಎನ್.ಚಂದ್ರಶೇಖರ್ ಹೇಳುತ್ತಾರೆ.[ಮೀನು ಕೃಷಿಗೆ ಗಾಳ ಹಾಕಿದ ಕಲಬುರಗಿ ರೈತ ಮಹಿಳೆ]
ಎಚ್.ಎನ್.ಚಂದ್ರಶೇಖರ್ ಯಾರು ?
ಎಚ್.ಎನ್.ಚಂದ್ರಶೇಖರ್ ಲಂಡನ್ನ ಟೈಮ್ ಲಾಜಿಕಾ ಲಿಮಿಟೆಡ್ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ಸಂಸ್ಥಾಪಕರು. ಫೆಬ್ರವರಿ 2014ರಂದು ಟೈಮ್ ಲಾಜಿಕಾಗೆ ಪ್ರವೇಶಿಸುವ ಮುನ್ನ ಶೇಖರ್ ಡಿಜಿಟಲ್ ಫೊರೆನ್ಸಿಕ್ಸ್ ನಿಂದ ಶೈಕ್ಷಣಿಕ ಸಂಶೋಧನೆಯವರೆಗೆ ಹಲವು ಉದ್ಯಮಗಳಲ್ಲಿ ಪರಿವರ್ತನೆ ತಂದಿದ್ದಾರೆ.
ಬೆಂಗಳೂರು ಮೂಲದವರಾದ ಚಂದ್ರಶೇಖರ್ ಪ್ರಸ್ತುತ ಲಂಡನ್ನಲ್ಲಿದ್ದಾರೆ. ಐಟಿ ಕ್ಷೇತ್ರದಲ್ಲಿ 14ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಅವರ ನಾಯಕತ್ವದ ಸಾಮರ್ಥ್ಯಕ್ಕೆ ಹೆಸರಾದ ಅವರು ಸಂಕೀರ್ಣ ಸಮಸ್ಯೆಗಳನ್ನು ಸರಳ ವಿಧಾನದಲ್ಲಿ ಪರಿಹರಿಸುತ್ತಾರೆ. ಇತ್ತೀಚೆಗೆ ಲಂಡನ್ನ ಕ್ಸೈಲೊಸಿಸ್ ಸೆಕ್ಯೂರಿಟಿ ಸಲ್ಯೂಷನ್ಸ್ ನ ಡಿಜಿಟಲ್ ಫೊರೆನ್ಸಿಕ್ಸ್ ಮತ್ತು ಸೈಬರ್ ಸೆಕ್ಯೂರಿಟಿ ಸಲ್ಯೂಷನ್ಸ್ ನಿರ್ದೇಶಕರಾಗಿದ್ದರು.[ಭಾರತ ಕೃಷಿ ವಿಜ್ಞಾನಿಗೆ ದಕ್ಷಿಣ ಕೊರಿಯಾ ಪ್ರಶಸ್ತಿ]
ಅದಕ್ಕೆ ಮುಂಚೆ ರೀಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ನಿನಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರು ವಿಶ್ವದ ಸಮಸ್ಯೆಗಳನ್ನು ಐಟಿ ಅಳವಡಿಕೆ ಮತ್ತು ಸಂಪರ್ಕಿತ ವಿಶ್ವದಿಂದ ಪರಿಹರಿಸುವ ಬಯಕೆ ಹೊಂದಿದ್ದಾರೆ. ಸಕಾಲಕ್ಕೆ ಸರಿಯಾದ ವ್ಯಕ್ತಿಗಳನ್ನು ಸಂಪರ್ಕಿಸುವ ಮೂಲಕ ಕೃಷಿ, ಆರೋಗ್ಯಸೇವೆ ಮತ್ತು ಇ-ಕಾಮರ್ಸ್ ಕ್ಷೇತ್ರದಲ್ಲಿ 2025ರ ವೇಳೆಗೆ ಎಲ್ಲ ಸಮಸ್ಯೆಗಳನ್ನೂ ನಿವಾರಿಸಬಹುದು ಎನ್ನುವುದು ಅವರ ದೂರದೃಷ್ಟಿ.
ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಬ್ಯಾಚಲರ್ ಆಫ್ ಎಂಜಿನಿಯರಿಂಗ್ ಪದವಿ ಹೊಂದಿದ್ದಾರೆ. ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸರ್ಟಿಫಿಕೇಟ್ ಆಫ್ ಪ್ರೊಫಿಷಿಯೆನ್ಸಿ ಪಡೆದಿದ್ದಾರೆ.