ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ಇಂಧನ, ಅರಣ್ಯ ಇಲಾಖೆ ಅಡ್ಡಿ
ಬೆಂಗಳೂರು, ಜೂನ್ 22 : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭವಾಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯೋಜನೆಗೆ ಶಂಕಿಸ್ಥಾಪನೆ ಮಾಡಿದ್ದಾರೆ. ಆದರೆ, ಇಲಾಖೆಗಳ ನಡುವಿನ ಹಗ್ಗಜಗ್ಗಾಟದಿಂದ ವಿಸ್ತರಣೆಗೆ ಅಡ್ಡಿ ಉಂಟಾಗಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂಧನ ಮತ್ತು ಅರಣ್ಯ ಇಲಾಖೆಗಳ ಮೇಲೆ ಆರೋಪ ಮಾಡಿದ್ದಾರೆ. ಎರಡೂ ಇಲಾಖೆಗಳಿಂದಾಗಿ ಯೋಜನೆ ತಡವಾಗುತ್ತಿದೆ ಎಂದು ದೂರಿದ್ದಾರೆ.
ಬೆಂಗಳೂರು-ಮೈಸೂರು ಮಾರ್ಗಕ್ಕಾಗಿ 200 ಮರಗಳಿಗೆ ಕೊಡಲಿ?
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬರುವ ವಿದ್ಯುತ್ ಕಂಬಗಳ ಸ್ಥಳಾಂತರ, ಇತರ ಕಾರ್ಯಗಳಿಗೆ ಯೋಜನೆಯ ಶೇ 15ರಷ್ಟು ವೆಚ್ಚವಾಗುತ್ತದೆ ಎಂದು ಇಂಧನ ಇಲಾಖೆ ಹೇಳಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಶೇ 2.5ಕ್ಕಿಂತ ಹೆಚ್ಚಿನ ವೆಚ್ಚವಾಗಬಾರದು ಎಂದು ಹೇಳಿದೆ.
ರಸ್ತೆಯನ್ನು ಅಗಲೀಕರಣ ಮಾಡಲು ಅರಣ್ಯ ಇಲಾಖೆ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ರಸ್ತೆ ಮಾರ್ಗದಲ್ಲಿ ಬರುವ ಮರಗಳ ಸ್ಥಳಾಂತರಕ್ಕೆ ಬೇರೆ ವೆಚ್ಚವಾಗಲಿದೆ ಎಂದು ಇಲಾಖೆ ಹೇಳುತ್ತಿದೆ. ಆದ್ದರಿಂದ, ಕಾಮಗಾರಿ ಇನ್ನೂ ಆರಂಭವಾಗಿಲ್ಲ.
8 ಪಥದ ರಸ್ತೆ ನಿರ್ಮಾಣ : 4 ಪಥದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಸಲಾಗಿದೆ. 8 ಪಥದ ರಸ್ತೆ ನಿರ್ಮಾಣ, ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಿ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ.
6,400 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ನಿತಿನ್ ಗಡ್ಕರಿ ಅವರು ಮಾರ್ಚ್ನಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ.
ಕಳೆದ ವಾರ ದೆಹಲಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿ ನೀಡಿದಾಗ ಗಡ್ಕರಿ ಅವರ ಜೊತೆಗೂ ಮಾತುಕತೆ ನಡೆಸಿದ್ದಾರೆ. ನಿತಿನ್ ಗಡ್ಕರಿ ಅವರು ಶೀಘ್ರದಲ್ಲಿಯೇ ರಾಜ್ಯಕ್ಕೆ ಆಗಮಿಸಲಿದ್ದು, ಕಾಮಗಾರಿ ಆರಂಭಿಸಲು ಇರುವ ತೊಡಕನ್ನು ನಿವಾರಿಸಲಿದ್ದಾರೆ.