ಮೂವರು ಶಾಲಾ ಮಕ್ಕಳ ಕೊಲೆ : ಇನ್ನೂ ಸಿಕ್ಕಿಲ್ಲ ಒಂದು ಶವ
ಬೆಂಗಳೂರು, ಸೆಪ್ಟೆಂಬರ್, 10 : ದ್ವೇಷದ ಕಾರಣಕ್ಕಾಗಿ ಫಯೂಮ್ ಎಂಬಾತ ನಾಜಿಮಾ ಬೇಗಂಳ ಮೂರು ಮಕ್ಕಳನ್ನು ಮ್ಯಾನ್ ಹೋಲ್ ಗೆ ತಳ್ಳಿ ಹತ್ಯೆಗೈದಿದ್ದು, ಈ ಮೂರು ಮಕ್ಕಳ ಪೈಕಿ ಇಬ್ಬರು ಮಕ್ಕಳ ಶವ ಪತ್ತೆಯಾಗಿದ್ದು, ಇನ್ನೊಂದು ಮಗುವಿನ ಶವದ ಹುಡುಕಾಟ ಮುಂದುವರೆದಿದೆ.
ಈಕೆಯ ಮೂವರು ಮಕ್ಕಳಲ್ಲಿ ಈಗಾಗಲೇ ಅಬ್ಬಾಸ್ ಬೇಗ್ ಹಾಗೂ ರಹೀಂ ಬೇಗ್ ಶವ ಪತ್ತೆಯಾಗಿದೆ. ಅದರಲ್ಲಿ ಉಸ್ಮಾಬೇಗಂ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದ್ದು, ಇದರಲ್ಲಿ ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡದ 40 ಸಿಬ್ಬಂದಿ ಬಾಣಸವಾಡಿ ಪೊಲೀಸರು ಭಾಗವಹಿಸಿದ್ದಾರೆ.[ತಾಯಿಯನ್ನು ಮದುವೆಯಾಗಲು ಮಕ್ಕಳನ್ನೇ ಕೊಂದ ಭೂಪ!]
ಕಿರುಗೊಂಡನಹಳ್ಳಿಯ ಮ್ಯಾನ್ಹೋಲ್ ಬಳಿ ಸುಮಾರು 7 ಗಂಟೆವರೆಗೆ ಶೋಧ ಕಾರ್ಯ ಮುಂದುವರಿಸಿದರೂ ಉಸ್ಮಾ ಬೇಗಂ ಶವ ಪತ್ತೆಯಾಗದ ಕಾರಣ ಗುರುವಾರವೂ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಆರೋಪಿ ಫಯೂಮ್ ನಾಜಿಮಾ ಬೇಗಂನ್ನು ವಿವಾಹ ಮಾಡಿಕೊಡಬೇಕೆಂದು ಆಕೆಯ ಮನೆಯವರೊಂದಿಗೆ ಕೇಳಿದ್ದನು. ಆದರೆ ಇದಕ್ಕೆ ಸಮ್ಮತಿ ನೀಡದ ಬೇಗಂ ಕುಟುಂಬದವರು ಈಕೆಗಿರುವ ಮೂವರು ಮಕ್ಕಳ ಪ್ರಸ್ತಾಪವನ್ನು ಆತನ ಮುಂದಿರಿಸಿದ್ದರು.
ನಾಜಿಮಾಳ ಮೇಲೆ ಒಲವಿದ್ದ ಫಯೂಮ್ ತನ್ನ ಮದುವೆಗೆ ಈಕೆಯ ಮೂವರು ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ಭಾವಿಸಿದ್ದಾನೆ. ಬಳಿಕ ಮಕ್ಕಳನ್ನು ಕೊಲ್ಲುವ ತಂತ್ರ ರೂಪಿಸಿದ ಫಯೂಮ್ ಆಗಸ್ಟ್ 27ರ ಗುರುವಾರದಂದು ಶಾಲೆಯಿಂದ ಮನೆಗೆ ತೆರಳುತ್ತಿದ್ದ ಈಕೆಯ ಮಕ್ಕಳನ್ನು ಲಿಂಗರಾಜ ಪುರ ಕ್ರಾಸ್ ಬಳಿ ತಡೆದಿದ್ದಾನೆ.
ಬಳಿಕ ಗದ್ದೆಯಲ್ಲಿ ಕೊಕ್ಕರೆ ತೋರಿಸುವುದಾಗಿ ಹೇಳಿದ ಈತ ಕಿರುಗೊಂಡನಹಳ್ಳಿ ಅರಣ್ಯ ಪ್ರದೇಶದ ಮ್ಯಾನ್ ಹೋಲ್ ಬಳಿ ಮಕ್ಕಳನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ. ಕೊನೆಗೆ ಈತನೇ ಸತ್ಯ ಒಪ್ಪಿಕೊಂಡಿದ್ದು, ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿದ್ದಾರೆ.