ಝೂಮ್ ಕಾರಿನೊಂದಿಗೆ ಬೆಂಗಳೂರಿನ ನಿವಾಸಿ ಪರಾರಿ!
ಬೆಂಗಳೂರು, ಜೂನ್ 27 : ಝೂಮ್ ಕಾರು ಬಾಡಿಗೆಗೆ ಪಡೆದಿದ್ದ ಬೆಂಗಳೂರಿನ ನಿವಾಸಿ ಕಾರಿನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಾಯಿ ಕುಮಾರ್ ಎಂಬ ವ್ಯಕ್ತಿ ಶ್ರೀನಿವಾಸ ನಗರದ ವಿಳಾಸ ನೀಡಿ ಜೂನ್ 18ರಂದು ಹುಂಡೈ ಐ 20 ಕಾರನ್ನು ಬಾಡಿಗೆಗೆ ಪಡೆದಿದ್ದರು. ನಿಯಮದಂತೆ ಮರುದಿನ ಅವರು ಕಾರನ್ನು ವಾಪಸ್ ನೀಡಬೇಕಿತ್ತು. ಆದರೆ, ಈಗ ಕಾರು ನೀಡಿಲ್ಲ, ಮೊಬೈಲ್ ಸಹ ಸ್ವಿಚ್ ಆಫ್ ಬರುತ್ತಿದೆ.
ಅಪರಿಚಿತರಿಗೆ ಲಿಫ್ಟ್ ನೀಡಿದರೆ ದಂಡ ತೆರಬೇಕಾಗಿಲ್ಲ: ಪೊಲೀಸ್ ಸ್ಪಷ್ಟನೆ
ಸಾಯಿ ಕುಮಾರ್ ಕಾರು ತೆಗೆದುಕೊಂಡು ಆಂಧ್ರಪ್ರದೇಶದ ತನಕ ಹೋಗಿದ್ದು, ಅಲ್ಲಿ ಜಿಪಿಎಸ್ ಕಿತ್ತು ಹಾಕಿದ್ದಾರೆ. ಆದ್ದರಿಂದ, ಮುಂದೆ ಎಲ್ಲಿ ಹೋಗಿದ್ದಾರೆ? ಎಂಬುದು ಇನ್ನೂ ಖಚಿತವಾಗಿ ತಿಳಿಯುತ್ತಿಲ್ಲ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಝೂಮ್ ಕಾರ್ ಸಂಸ್ಥೆಯ ಮ್ಯಾನೇಜರ್ ಎಂ.ಜಯಂತ್ ಜಾಧವ್ ದೂರು ನೀಡಿದ್ದಾರೆ. ಕಾರು ಬಾಡಿಗೆ ಪಡೆಯುವ ವೇಳೆ ನೀಡಿದ ಡ್ರೈವಿಂಗ್ ಲೈಸೆನ್ಸ್ ಪ್ರಕಾರ ಸಾಯಿ ಕುಮಾರ್ ಶ್ರೀನಿವಾಸ ನಗರದ ನಿವಾಸಿಯಾಗಿದ್ದಾರೆ. ಆದರೆ, ಆ ವಿಳಾಸ ನಕಲಿಯಾಗಿದೆ.
ಹೊಸ ಕಾರು ಕೇಳಿರಲಿಲ್ಲ, ಕೇಳಿದ್ದು ಹಳೆಯ ಫಾರ್ಚೂನರ್: ಜಮೀರ್
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆಂಧ್ರಪ್ರದೇಶದ ಗುಂಟೂರು ಬಳಿ ಕಾರನ್ನು ಪತ್ತೆ ಹಚ್ಚಿದ್ದಾರೆ. ನಂತರ ಸಾಯಿ ಕುಮಾರ್ ಜಿಪಿಎಸ್ ಕಿತ್ತು ಹಾಕಿದ್ದು, ಎತ್ತ ಸಾಗಿದ್ದಾನೆ? ಎಂಬುದು ನಿಗೂಢವಾಗಿದೆ. ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ.