ಬೆಂಗಳೂರು: ಮಾಧ್ಯಮದವರೇ ಪ್ರತಿಭಟನೆಗೆ ಇಳಿದಿದ್ದು ಯಾಕೆ?
ಬೆಂಗಳೂರು, ಫೆಬ್ರವರಿ, 19: ಸಂಘಟನೆಗಳು, ರಾಜಕೀಯ ಪಕ್ಷಗಳು ನಡೆಸುವ ಪ್ರತಿಭಟನೆಯನ್ನು ಜನರಿಗೆ ತಿಳಿಸುವ ಮಾಧ್ಯಮ ಪ್ರತಿನಿಧಿಗಳು ತಾವೇ ಸ್ವತಃ ಶುಕ್ರವಾರ ಪ್ರತಿಭಟನೆಗೆ ಇಳಿದಿದ್ದರು.
ನವದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ವಕೀಲರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪತ್ರಕರ್ತರು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಪಾದಯಾತ್ರೆಯಲ್ಲಿ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಕೆ ಮಾಡಿದರು.
ಬೆಂಗಳೂರು ಪ್ರೆಸ್ ಕ್ಲಬ್ ನೇತೃತ್ವದಲ್ಲಿ, ಫೋಟೋಗ್ರಾಫರ್ಸ್ ಅಸೋಸಿಯೇಷನ್, ವರದಿಗಾರ ಒಕ್ಕೂಟ, ಟಿವಿ ಪತ್ರಕರ್ತರ ಸಂಘಟನೆ ಶುಕ್ರವಾರ ಬೆಳಗ್ಗೆ ದುಷ್ಕರ್ಮಿ ವಕೀಲರ ವಿರುದ್ಧ ಪ್ರತಿಭಟನೆ ನಡೆಸಿತು. "ಗೂಂಡಾ ವಕೀಲರನ್ನು ಬಂಧಿಸಿ, ಧಿಕ್ಕಾರ ಧಿಕ್ಕಾರ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ವಕೀಲರಿಗೆ ಧಿಕ್ಕಾರ, ಬೇಕೆ ಬೇಕು ನ್ಯಾಯ ಬೇಕು" ಎಂಬ ಘೋಷಣೆಗಳು ಕೇಳಿಬಂದವು.[ಜೆ ಎನ್ ಯು ಗಲಾಟೆ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಸ್ಫೋಟಕ ಮಾಹಿತಿ]
ನಾವು ದೇಶದ್ರೋಹದ ಚಟುವಟಿಕೆಯನ್ನು ಸಹಿಸುವುದಿಲ್ಲ. ಆದರೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರತಿಭಟನೆ ಮಾಧ್ಯಮದ ಮೇಲಿನ ಹಲ್ಲೆ ಖಂಡಿಸಿ ನಡೆಯುತ್ತಿದೆ ವಿನಃ ಬೇರೆ ಯಾವ ಕಾರಣಗಳಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.
ಯಾಕಾಗಿ ಪ್ರತಿಭಟನೆ?
ನವದೆಹಲಿಯ ಜವಾಹರ ಲಾಲ್ ನೆಹರು ವಿವಿಯ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರನ್ನು ದೆಹಲಿಯ ಪಟಿಯಾಲಾ ಕೋರ್ಟ್ ಗೆ ಹಾಜರುಪಡಿಸಿದ ಸಂದರ್ಭದಲ್ಲಿ ವಕೀಲರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ಪ್ರೆಸ್ ಕ್ಲಬ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಯಾರ್ಯಾರಿದ್ದರು?
ಪ್ರತಿಭಟನೆಯಲ್ಲಿ ಪತ್ರಿಕೆ, ಟಿವಿ ಮತ್ತು ಛಾಯಾಚಿತ್ರ ಪತ್ರಕರ್ತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಆರ್ ಶ್ರೀಧರ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್ ಶಿವಪ್ರಕಾಶ್ ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದರು.
ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ
ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು ವೃತ್ತಿಯೇ ಆತಂಕಕ್ಕೆ ಸಿಲುಕಿದೆ. ನಮಗೆ ಈಗ ಕಂಡಿದ್ದು ನವದೆಹಲಿಯ ಘಟನೆ ಮಾತ್ರ. ಚಿಕ್ಕ ಪುಟ್ಟ ಪತ್ರಿಕೆ ವರದಿಗಾರರ ಮೇಲೆಯೂ ಹಲ್ಲೆಯಾಗುತ್ತಿರುವುದು ದೊಡ್ಡ ಸುದ್ದಿಯಾಗುತ್ತಿಲ್ಲ ಎಂದು ಶಿವಾನಂದ ತಗಡೂರು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವಕ್ಕೆ ಮಾರಕ
ಇಂಥ ಘಟನಾವಳಿಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಸಂವಿಧಾನದ ನಾಲ್ಕನೇ ಆಧಾರ ಸ್ತಂಭದಂತಿರುವ ಪತ್ರಿಕಾ ರಂಗದ ಸ್ವಾತಂತ್ರ್ಯ ಹರಣ ಮಾಡಲು ಮುಂದಾಗುತ್ತಿರುವ ಪ್ರಕರಣಗಳು ನಡೆಯುತ್ತಿರುವುದು ಆತಂಕ ತಂದಿದೆ ಎಂದರು.
ಎಲ್ಲೆಡೆ ಪ್ರತಿಭಟನೆ
ನವದೆಹಲಿಯ ಹಲ್ಲೆ ಘಟನೆ ಖಂಡಿಸಿ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆದಿದೆ. ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಲಾಗುತ್ತಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಮಾತನಾಡದ ಮೋದಿ
ಪ್ರಧಾನಿ ನರೇಂದ್ರ ಮೋದಿ ಘಟನೆಯ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಕೇಂದ್ರ ಸರ್ಕಾರ ಪತ್ರಕರ್ತರ ಮೇಲೆ ಧಮನಕಾರಿ ನೀತಿ ಅನುಸರಿಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿಡಿಯೋ ದಾಖಲೆ ಇದೆ
ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದಕ್ಕೆ ವಿಡಿಯೋ ದಾಖಲೆಗಳಿವೆ. ಇದನ್ನು ಆಧರಿಸಿ ಹಲ್ಲೆ ಮಾಡಿದ ವಕೀಲರ ಲೈಸೆನ್ಸ್ ರದ್ದುಮಾಡಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.