ಹಾಪ್ ಕಾಮ್ಸ್ ವ್ಯಾಪಾರ ಕುಂಠಿತಕ್ಕೆ ಕಾರಣವೇನು?
ಬೆಂಗಳೂರು, ಮೇ 08: ದಾರಿಯ ಮೇಲೆ ಬರುತ್ತ ಸುಮ್ಮನೇ ಒಮ್ಮೆ ಕಣ್ಣು ಹಾಯಿಸಿ.. ಹಾಪ್ ಕಾಮ್ಸ್ ಮಳಿಗೆಗಳು ಖಾಲಿ ಖಾಲಿ ಹೊಡೆಯುತ್ತಿರುತ್ತಿದ್ದಂತೆ ತೋರುತ್ತದೆ ಅಲ್ಲವೇ? ಹೌದು ಹಾಗಾದರೆ ಇದಕ್ಕೆ ಕಾರಣವೇನು? ಆನ್ ಲೈನ್ ಮಾರುಕಟ್ಟೆ ಪರಿಣಾಮವೇ? ಅಥವಾ ದಾರಿ ಬದಿ ವ್ಯಾಪಾರಿಗಳ ಪೈಪೋಟಿಯೇ? ಎಂಬ ಅಂಶಗಳ ಆಧಾರದ ಮೇಲೆ ನಾವು ರಿಯಾಲಿಟಿ ಚೆಕ್ ಮಾಡಲು ಮುಂದಾದೆವು.
ಒಂದು ಸಂಗತಿ ಬೆನ್ನು ಹತ್ತಿ ಹೊರಟ ನಮಗೆ ಅನೇಕ ಹೊಸ ಹೊಸ ವಿಷಯಗಳು ಗೊತ್ತಾಗತೊಡಗಿದವು. ಅವುಗಳನ್ನೆಲ್ಲ ಒಟ್ಟುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಹಾಪ್ ಕಾಮ್ಸ್ ಮಳಿಗೆಗಳನ್ನು ನೋಡಿಕೊಳ್ಳುತ್ತಿರುವವರು ಎದುರಿಸುತ್ತಿರುವ ಸಮಸ್ಯೆ? ವ್ಯಾಪಾರ ಕುಂಠಿತವಾಗಲು ಬಹುಮುಖ್ಯವಾದ ಕಾರಣ ಎಲ್ಲವೂ ತಿಳಿದು ಬಂದಿತು. ಜಯನಗರ ಮೂರನೇ ಬ್ಲಾಕ್, ಹನುಮಂತ ನಗರ, ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಮತ್ತು ಮಿನರ್ವ್ ವೃತ್ತದ ಬಳಿಯ ಹಾಪ್ ಕಾಮ್ಸ್ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ವ್ಯಾಪಾರ ಕುಂಠಿತವಾಗಿರೋದು ನಿಜ
ವ್ಯಾಪಾರ ಕುಂಠಿತವಾಗಿರುವುದು ನಿಜ. ಆದರೆ ಇದಕ್ಕೆ ಕಾರಣ ಆನ್ ಲೈನ್ ಮಾರ್ಕೆಟಿಂಗ್ ವ್ಯವಸ್ಥೆಯಲ್ಲ. ಬೀದಿ ಬದಿ ವ್ಯಾಪಾರಿಗಳು ಮತ್ತು ತಳ್ಳು ಗಾಡಿಯವರ ಪೈಪೋಟಿ ಹಾಪ್ ಕಾಮ್ಸ್ ಮೇಲೆ ಪರಿಣಾಮ ಬೀರಿದೆ. ಜಯನಗರದ 3 ನೇ ಹಂತದಲ್ಲಿ ಮೊದಲು 8 ರಿಂದ 10 ಸಾವಿರ ರೂ. ವ್ಯಾಪಾರ ಇದ್ದದ್ದು 4 ಸಾವಿರ ರೂ. ಗೆ ಕುಸಿದಿದೆ. ಇದು ಒಂದು ಮಳಿಗೆಯ ಲೆಕ್ಕಾಚಾರವಲ್ಲ, ಬೆಂಗಳೂರಿನ ಎಲ್ಲಾ ಮಳಿಗೆಗಳ ವ್ಯಾಪಾರದಲ್ಲೂ ಗಣನೀಯ ಇಳಿಮುಖವಾಗಿದೆ.
ನಾವೇ ಸಾಮಗ್ರಿ ತರಬೇಕು
ಹಾಪ್ ಕಾಮ್ಸ್ ವ್ಯವಹಾರವೇ ಹಾಗೆ. ನಾವೇ ಮುಂಜಾನೆ ಲಾಲ್ ಬಾಗ್ ಮುಖ್ಯ ಕಚೇರಿಗೆ ತರಳಿ ಬೇಕಾದಷ್ಟು ಹಣ್ಣು, ತರಕಾರಿಗಳನ್ನು ತರಬೇಕು. ತಂದ ಸಾಮಗ್ರಿಗಳ ಮೊತ್ತಕ್ಕೆ ನಾವೇ ಜವಾಬ್ದಾರರಾಗಿರುತ್ತೇವೆ. ಒಂದು ವೇಳೆ ಕೊಳೆತರೆ, ಹಾಳಾದರೆ ನಾವೇ ಆ ಮೊತ್ತವನ್ನು ಕೈಯಿಂದ ತುಂಬಬೇಕಾಗುತ್ತದೆ ಎಂದು ಅಂಗಡಿ ನಿರ್ವಾಹಕರು ಅಳಲು ತೋಡಿಕೊಂಡರು.
ಹೆಚ್ಚಿದ ಮಾಲ್ ಗಳು, ಕಡಿಮೆಯಾದ ಅಭಿರುಚಿ
ಮಾಲ್ ಗಳು ಹೆಚ್ಚಾಗಿದ್ದು ಸಹ ವ್ಯಾಪಾರ ಕುಂಠಿತವಾಗಲು ಕಾರಣವಾಗಿದೆ. ಮಾಲ್ ಗಳ ಆಕರ್ಷಣೆ ಆಫರ್ ಗಳು, ಜಾಹೀರಾತುಗಳು ಹಾಪ್ ಕಾಮ್ಸ್ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿವೆ.
ಹೆಚ್ಚಳಕ್ಕೆ ಏನಾದರೂ ಉಪಾಯ?
ಹಾಪ್ ಕಾಮ್ಸ್ ಇಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ. ಅಲ್ಲಿ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಸರ್ಕಾರ ನಿರ್ದಿಷ್ಟ ವೇತನ ನೀಡುತ್ತಿದೆ. ಅವರು ಅನೇಕ ಸಮಸ್ಯೆ ಎದುರಿಸುತ್ತಯಿದ್ದಾರೆ ನಿಜ. ಆದರೆ ವ್ಯಾಪಾರ ವಹಿವಾಟು ವೃದ್ಧಿಗೆ ತೋಟಗಾರಿಕಾ ಇಲಾಖೆ ಯಾವುದಾದರೂ ಕ್ರಮಕ್ಕೆ ಮುಂದಾಗಿದೆಯೇ? ಅಥವಾ ವ್ಯಾಪಾರ ಕುಂಠಿತ ಅದರ ಗಮನಕ್ಕೆ ಬಂದಿದ್ದರೂ ಸುಮ್ಮನೆ ಕುಳಿತುಕೊಂಡಿದೆಯೇ? ಎಂಬ ಪ್ರಶ್ನೆಗಳಿಗೆ ಇಲಾಖೆ ಬಳಿ ಸಮರ್ಪಕ ಉತ್ತರವಿಲ್ಲ.
ಖಾಯಂ ಗ್ರಾಹಕರು
ಹಾಪ್ ಕಾಮ್ಸ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಹಣ್ಣು ತರಕಾರಿ ಸಿಗುತ್ತದೆ ಎಂಬ ಭಾವನೆ ಮನೆ ಮಾಡಿದೆ. ಇದು ಅರ್ಧ ಸತ್ಯವೂ ಕೂಡ. ಹಾಗಾಗಿ ಕೆಲ ಗ್ರಾಹಕರು ಇದನ್ನೇ ನೆಚ್ಚಿಕೊಂಡಿದ್ದು ಬೇರೆಡೆ ಖರೀದಿ ಮಾಡಲು ಹೋಗುವುದಿಲ್ಲ.
ಸಿಸನ್ ಗೆ ಅನುಗುಣವಾಗಿ ಬದಲಾವಣೆ
ಆಯಾ ಕಾಲಕ್ಕೆ ಸರಿ ಹೊಂದುವಂಥ ಹಣ್ಣು, ತರಕಾರಿ ತಂದು ಮಾರಾಟ ಮಾಡುವ ರೂಢಿಯಿದೆ. ಒಮ್ಮೆ ಆಗಮಿಸಿದ ಗ್ರಾಹಕರನ್ನು ಮತ್ತೆ ಸೆಳೆಯಲು ನಮ್ಮ ಬಳಿ ತಂತ್ರವಿಲ್ಲ. ಗುಣಮಟ್ಟವಿದ್ದರೇ ಅವರೇ ಬರುತ್ತಾರೆ ಎಂದು ಜಯನಗರ ಮೂರನೇ ಬ್ಯಾಕ್ ಉಸ್ತುವಾರಿ ವಹಿಸಿಕೊಂಡಿರುವ ರಾಜೇಶ್ ಹೇಳುತ್ತಾರೆ.
ವ್ಯಾಪಾರ ಕುಂಠಿತ, ಪರಿಹಾರವೇನು?
ಹಾಪ್ ಕಾಮ್ಸ್ ವ್ಯಾಪಾರ ಕುಂಠಿತ ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರುತ್ತಿರುವುದು ನಿಜ. ವ್ಯಾಪಾರ ಹೆಚ್ಚಿಸಲು ತೋಟಗಾರಿಕಾ ಇಲಾಖೆ ಮುಂದಾಗಬೇಕಿದೆ. ಮಾಲ್ ಗಳ ರೀತಿಯಲ್ಲೇ ಆಫರ್ ಗಳನ್ನು ನೀಡುವುದು ಒಂದಾದರೆ, ಸಿಬ್ಬಂದಿಯ ಹಿತ ಕಾಯುವ ಕ್ರಮ ತೆಗೆದುಕೊಳ್ಳಬೇಕಿದೆ. ಜತೆಗೆ ಈಗಿನ ಮಳಿಗೆಗಳು ಜನಸಂಚಾರ ಕ್ಷೇತ್ರದಿಂದ ದೂರವಾದಂತೆ ತೋರುತ್ತಿದ್ದು ಅಗತ್ಯವಿದ್ದಲ್ಲಿ ಮಳಿಗೆ ಸ್ಥಳ ಬದಲಾವಣೆ ಮಾಡಬೇಕಿದೆ.