ಉಕ್ಕಿನ ಸೇತುವೆ ಟೆಂಡರ್ ರದ್ದತಿಗೆ ಆಗ್ರಹಿಸಿ ಸತ್ಯಾಗ್ರಹ
ಬೆಂಗಳೂರು, ನವೆಂಬರ್. 07 : ಸ್ಟೀಲ್ ಫ್ಲೈಓವರ್ ತೊಲಗಿಸಿ ಗಿಡಗಳನ್ನು ಉಳಿಸಿ, ಬೇಡವೇ ಬೇಡ ಸ್ಟೀಲ್ ಫ್ಲೈಓವರ್ ಬೇಡ, ಉಕ್ಕಿನ ಸೇತುವೆ ನಿಲ್ಲಿಸಿ, ಪರಿಸರ ಉಳಿಸಿ, ಹಸಿರೇ ಉಸಿರು.
ಹೀಗೆ ಹಲವು ಭಿತ್ತಿಪತ್ರಗಳನ್ನು ಹಿಡಿದು ಉಕ್ಕಿನ ಟೆಂಡರ್ ರದ್ದು ಮಾಡುವಂತೆ ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆ ಹಾಗೂ ಬೇಡ ಬ್ರಿಗೇಡ್ ಸೇರಿದಂತೆ ಹಲವು ಸಂಘಟನೆಗಳು ಭಾನುವಾರ ಫ್ರೀಡಂ ಪಾರ್ಕ್ ಬಳಿ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.[ಉಕ್ಕಿನ ಸೇತುವೆ ನಿರ್ಮಾಣ ಸದ್ಯಕ್ಕಿಲ್ಲ: ಕರ್ನಾಟಕ ಸರ್ಕಾರ]
ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ರಂಗಕರ್ಮಿ ಪ್ರಕಾಶ್ ಬೆಳವಾಡಿ ಪ್ರತಿಕ್ರಿಯಿಸಿ, ನಗರದಲ್ಲಿ ದಿನೇ ದಿನೇ ಪರಿಸರ ಕಲುಷಿತಗೊಳ್ಳುತ್ತಿದೆ. ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸ್ವಚ್ಛ ಗಾಳಿ ಸಿಗುವುದು ದುಸ್ತರವಾಗಿದೆ. [ಉಕ್ಕಿನ ಸೇತುವೆ: ತಡೆಯಾಜ್ಞೆಗೆ ಸರ್ಕಾರದ ಮೇಲ್ಮನವಿ]
ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ಕೋಟಿ ರು. ವೆಚ್ಚದ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿ 800 ಮರಗಳನ್ನು ಕಡಿದು ನೆಲಕ್ಕುರುಳಿಸಲು ಮುಂದಾಗಿರುವುದನ್ನು ನೋಡಿದರೆ ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲೂ ಸರ್ಕಾರ ಹಠಮಾರಿ ಧೋರಣೆ ಮುಂದುವರೆಸಿದರೆ ಉಗ್ರಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕರಣ ಹಸಿರು ನ್ಯಾಯ ಮಂಡಳಿ ಮುಂದಿದೆ.
ನ್ಯಾಯಾಲಯದಲ್ಲೂ ಹೋರಾಟ ಮುಂದುವರೆಸುತ್ತೇವೆ. ಪರಿಸರಕ್ಕೆ ಹಾನಿ, ಜನರ ದುಡ್ಡು ಪೋಲು ಮಾಡುವುದನ್ನು ತಪ್ಪಿಸುತ್ತೇವೆ ಎಂದರು.