ವಾರಾಂತ್ಯಕ್ಕೆ ಕರ್ನಾಟಕ ಹಬ್ಬವೇ ಅತ್ಯುತ್ತಮ ಆಯ್ಕೆ..ಯಾಕಂದ್ರೆ?
ಬೆ೦ಗಳೂರು, ಫೆಬ್ರವರಿ, 27: ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಹಬ್ಬದ ವಾತಾವರಣ, ಕೈ ಬೀಸಿ ಕರೆಯುತ್ತಿರುವ ಕಲಾಕೃತಿಗಳು, ಮನಮೆಚ್ಚುವ ರೇಷ್ಮೆ ಬಟ್ಟೆ, ವಿವಿಧ ವಿನ್ಯಾಸದ ಗೃಹೋಪಯೋಗಿ ವಸ್ತುಗಳು, ಪೆಂಟಿಗ್ಸ್, ಬಗೆಬಗೆಯ ತಿಂಡಿ,.. ಆಹಾ ಇಲ್ಲಿ ಕುಳಿತು ಹೇಳಿದರೆ ಪ್ರಯೋಜನವಿಲ್ಲ.. ನೀವು ನಿಮ್ಮ ಕುಟುಂಬ ಅಥವಾ ಪ್ರೀತಿ ಪಾತ್ರರೊಂದಿಗೆ ಒಂದು ಸುತ್ತು ಹಾಕಲೇಬೇಕು.
ಹಾಂ... ನೆನಪಿರಲಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ "ಕರ್ನಾಟಕ ಹಬ್ಬ" ಭಾನುವಾರ ಅಂದರೆ ಫೆಬ್ರವರಿ 28ಕ್ಕೆ ಮುಕ್ತಾಯವಾಗಲಿದೆ. ಹಬ್ಬಕ್ಕೆ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾ೦ಡೆ ಚಾಲನೆ ನೀಡಿ ರಾಜ್ಯದ ಬೇರೆ ಕಡೆಯಲ್ಲೂ ಇಂಥ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.[ದಕ್ಷಿಣ ಭಾರತದ ಪ್ರವಾಸಿತಾಣಗಳ ಮೇಲೊಂದು ಸುತ್ತು]
ವಾರಾಂತ್ಯವನ್ನು ಮತ್ತಷ್ಟು ಸುಂದರವಾಗಿರಿಸಿಕೊಳ್ಳಲು ಚಿತ್ರಕಲಾ ಪರಿಷತ್ ಆವರಣಕ್ಕೆ ಧಾವಿಸಬಹುದು. ಯಾವುದೇ ಪ್ರವೇಶ ಶುಲ್ಕ ಇಲ್ಲ. ಬೆಳಗ್ಗೆಯಿಂದ ಸಂಜೆ ತನಕ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಾನಪದ ಲೋಕ
ಕರ್ನಾಟಕ ಹಬ್ಬದಲ್ಲಿ ಜಾನಪದ ಲೋಕವೇ ಅನಾವರಣವಾಗಿದೆ. ಪ್ರವೇಶ ದ್ವಾರದಲ್ಲಿ ನಿರ್ಮಾಣ ಮಾಡಿರುವ ಡೊಳ್ಳು ಕುಣಿತ ಬಿಂಬಿಸುವ ಪುತ್ಥಳಿ, ಯಕ್ಷಗಾನದ ವೇಷಗಳನ್ನು ಬಿಂಬಿಸುವ ಚಿತ್ರಗಳು ನಿಮ್ಮನ್ನು ಒಂದು ಕ್ಷಣ ಅಲ್ಲಿಯೇ ನಿಲ್ಲಿಸುತ್ತದೆ.
ಹಂಪಿ ಕಲ್ಲಿನ ರಥ!
ಚಿತ್ರಕಲಾ ಪರಿಷತ್ ಆವರಣದಲ್ಲಿ ನಿರ್ಮಾಣ ಮಾಡಿರುವ ಹಂಪಿ ಕಲ್ಲಿನ ರಥ ಎಲ್ಲರನ್ನು ಸೆಳೆಯುವ ಕೇಂದ್ರ. ಆಗಮಿಸಿದ್ದವರು ಒಮ್ಮೆ ಕಲ್ಲಿನ ರಥದ ಎದುರು ನಿಂತು ಸೆಲ್ಫಿ ತೆಗೆದುಕೊಂಡೇ ಮುಂದೆ ಸಾಗಿದರು.
ಕೈಬೀಸಿ ಕರೆಯುವ ಕಲಾಕೃತಿಗಳು
ಅಲ೦ಕಾರಿಕ ಮಣ್ಣಿನ ಕಲಾಕೃತಿಗಳು, ಕಿನ್ನಾಳ ಕಲೆಗಳು, ಶ್ರೀಗ೦ಧದಿ೦ದ ತಯಾರಿಸಿದ ಕಲಾಕೃತಿಗಳು, ಮಧುಬನಿ ಪೆಂಟಿಗ್ಸ್ ಗಳನ್ನು ನೋಡುವುದರೊಂದಿಗೆ ಮನಮೆಚ್ಚುವ ದರದಲ್ಲಿ ಖರೀದಿ ಮಾಡಬಹುದು.
ಆಭರಣಗಳು ಇವೆ
ಜೈಪುರದ ಮುತ್ತು-ರತ್ನಾಭರಣಗಳು, ಒಡಿಶಾದ ಕುಸುರಿ ಕಲೆಗಳು, ಕಾಶ್ಮೀರದ ಶಾಲು, ಜಾಕೆಟ್, ಕುತಾ೯, ಮರದ ಕೆತ್ತನೆ ನಿಮ್ಮ ಮನಸೂರೆಗೊಳ್ಳುತ್ತದೆ. ಇವಕ್ಕೆ ದರ ಕೊಂಚ ಜಾಸ್ತಿಯಿದ್ದರೂ ಖರೀದಿ ಮಾಡುವವರಿಗೆ ಕಡಿಮೆ ಇರಲಿಲ್ಲ.
ಪಂಚಲೋಹದ ಮೂರ್ತಿ
ಪಂಚಲೋಹದ ಮೂರ್ತಿ, ಶಿಲಾ ಮೂರ್ತಿಗಳು ನಿಮ್ಮನ್ನು ಸೆಳೆಯುತ್ತವೆ. 30 ಸಾವಿರದಿಂದ 2.5 ಲಕ್ಷ ರು. ವರೆಗಿನ ಮೂರ್ತಿಗಳನ್ನು ಕಾಣಬಹುದು. 12 ಬಗೆಯ ಕರಕುಶಲ ಕಲೆಯ ಪ್ರದಶ೯ನ ನೋಡಲು ಸಾಧ್ಯವಿದೆ.
ಆಹಾ ಭೋಜನ ಶಾಲೆ
ಆಹಾರ ಪ್ರಿಯರಿಗಾಗಿ ಕರ್ನಾಟಕದ ವಿಶೇಷ ಪಾಕಪದ್ಧತಿಯನ್ವಯ ಸಿದ್ಧಪಡಿಸಿರುವ ಆಹಾರಗಳನ್ನು ಉಣಬಡಿಸುವ ಫುಡ್ಕೋರ್ಟ್ ಅನ್ನು ತೆರೆಯಲಾಗಿದೆ. ವೈನ್ ಪ್ರಿಯರಿಗಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಮಳಿಗೆ ತೆರೆದಿದ್ದು, ವಿವಿಧ ಬಗೆಯ ವೈನ್ ಗಳು ಸಹ ಲಭ್ಯವಿದೆ.
ಪ್ರಾತ್ಯಕ್ಷಿಕೆಗಳ ಸಾಲು
ಕುಂಬಾರಿಕೆ, ಟೆರ್ರಾಕೋಟಾ ಆಭರಣ, ಬಿದರಿ ಕಲೆ ಮುಂತಾದ ಉತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಮೂರು ದಿನಗಳ ಕಾಲ ನೀಡಲಾಗುತ್ತದೆ. ಆಸಕ್ತರು ಜಾನಪದ ಕಲೆ ಮತ್ತು ಉದ್ಯಮಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಮುಂಬೈನಲ್ಲೂ ಕರ್ನಾಟಕ ಹಬ್ಬ
ಕರ್ನಾಟಕ ಹಬ್ಬಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಆಧರಿಸಿ ಕಾರ್ಯಕ್ರಮವನ್ನು ರಾಜ್ಯದ ಇರರ ಭಾಗಗಳಿಗೆ ವಿಸ್ತರಿಸಲಾಗುವುದು. ಜತೆಗೆ ಮುಂಬೈನಲ್ಲಿ ಮಾ.4ರಿಂದ 6ರವರೆಗೆ ಕರ್ನಾಟಕ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ದೇಶಪಾಂಡೆ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ
ಶನಿವಾರ ಸಂಜೆ 6 ಗಂಟೆಗೆ ಕಲಾವಿದೆ ಗಾಯತ್ರಿ ಶ್ರೀಧರ್ ಅವರಿಂದ ಸುಗಮ ಸಂಗೀತ, 6.30ಕ್ಕೆ ನಿತಿಶಾ ಮತ್ತು ತಂಡದಿಂದ ಭರತನಾಟ್ಯ, 7.10ಕ್ಕೆ ಶ್ರೀನಿವಾಸ್ ಅವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಸಂಜೆ 6ಕ್ಕೆ ಎನ್.ಎಸ್.ಪ್ರಸಾದ್ ಮತ್ತು ತಂಡದಿಂದ ಮಾಂಡೋಲಿನ್, 6.30ಕ್ಕೆ ವಿವಿಧ ಜಿಲ್ಲೆಗಳ ಕಲಾವಿದರಿಂದ ಜನಪದ ಜಾತ್ರೆ ಕಾರ್ಯಕ್ರಮಗಳು ನಡೆಯಲಿವೆ.