ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!
ಆಕೆ ಹೆಸರು ಎಸ್.ಜೆ.ರಾಜಲಕ್ಷ್ಮಿ. ವಯಸ್ಸು ಮೂವತ್ತೊಂದು. ಬೆಂಗಳೂರಿನವರು. ವೃತ್ತಿಯಿಂದ ದಂತತಜ್ಞೆ. ಜತೆಗೆ ಸಹಾಯಕ ಪ್ರಾಧ್ಯಾಪಕಿಯೂ ಹೌದು. ಕಳೆದ ಕೆಲವು ವಾರಗಳಿಂದ ಬಿಡುವಿಲ್ಲದಷ್ಟು ಕೆಲಸದಲ್ಲಿ ತೊಡಗಿದ್ದಾರೆ. ಕಠಿಣವಾದ ಆಹಾರ ಪಥ್ಯವನ್ನು ಅನುಸರಿಸುತ್ತಿದ್ದಾರೆ. ಜತೆಗೆ ವ್ಯಾಯಾಮ, ತಮ್ಮ ಚರ್ಮ ಹಾಗೂ ಕೂದಲಿನ ಬಗ್ಗೆ ವಿಶೇಷ ಆಸ್ಥೆ ವಹಿಸುತ್ತಿದ್ದಾರೆ.
ಇಷ್ಟೆಲ್ಲ ನಿಮಗೆ ಯಾಕೆ ಹೇಳಬೇಕಾಯಿತು ಅಂದರೆ ರಾಜಲಕ್ಷ್ಮಿ ಅವರು ಮಿಸ್ ವ್ಹೀಲ್ ಚೇರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ 7ನೇ ತಾರೀಕು ಪೋಲೆಂಡ್ ನಲ್ಲಿ ಸ್ಪರ್ಧೆಯಿದೆ. ಅದೂ ರಾಜಲಕ್ಷ್ಮಿ ಅವರು ಮಿಸ್ ವ್ಹೀಲ್ ಚೇರ್ ಇಂಡಿಯಾ ಎಂದು ಆಯ್ಕೆಯಾದ ಮೂರು ವರ್ಷಗಳ ನಂತರ ನಡೆಯುತ್ತಿದೆ ಈ ಸ್ಪರ್ಧೆ.
ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ!
"ಇದು ತುಂಬ ಪರಿಶ್ರಮ ಬೇಡುವಂಥದ್ದು. ಆದರೂ ಅಷ್ಟು ಶ್ರಮ ಪಡುವುದಕ್ಕೆ ಅರ್ಹವಾದ ಸ್ಪರ್ಧೆ ಇದು" ಮುಂದಿನ ವಾರ ಪೋಲೆಂಡ್ ಗೆ ಹೊರಡಲು ಸಿದ್ದತೆ ನಡೆಸಿರುವ ರಾಜಲಕ್ಷ್ಮಿ ಹೇಳುವ ಮಾತಿದು. ರಾಜಲಕ್ಷ್ಮಿ ಅವರು ಹತ್ತಾರು ಆಸಕ್ತಿಗಳಿವೆ. ಅದರಲ್ಲೊಂದು ಮಾಡೆಲಿಂಗ್. ಅದನ್ನು ಮನಸಾರೆ ಅನುಭವಿಸುತ್ತಾರೆ. ಜತೆಗೆ ಅದಕ್ಕಾಗಿಯೇ ವಿಪರೀತ ಶ್ರಮವನ್ನೂ ಹಾಕುತ್ತಾರೆ.
ವ್ಹೀಲ್ ಚೇರ್ ಮೇಲೆ ದಿನ ದೂಡುತ್ತಾ ಮತ್ತು ಮಾಡೆಲಿಂಗ್ ನಲ್ಲಿ ತೊಡಗಿಕೊಳ್ಳುವುದೆಂದರೆ ಪ್ರಶ್ನಾರ್ಥಕ ಚಿಹ್ನೆಯೊಂದು ಉದ್ಭವಿಸುತ್ತದೆ ಅಲ್ಲವೇ ಎಂಬ ಪ್ರಶ್ನೆಯನ್ನೂ ಅವರೇ ತೂರಿಬಿಡುತ್ತಾರೆ.
ಚೆನ್ನೈಗೆ ಹೋಗುವಾಗ ಅಪಘಾತ
ಅದು 2007ನೇ ಇಸವಿ. ಆಗಷ್ಟೇ ರಾಜಲಕ್ಶ್ಮಿ ಅವರು ಬಿಡಿಎಸ್ ನಲ್ಲಿ ಅತ್ಯುತ್ತಮ ಅಂಕ ಪಡೆದಿದ್ದರು. ಚೆನ್ನೈನಲ್ಲಿ ರಾಷ್ಟ್ರ್ ಮಟ್ಟದ ಸಮಾವೇಶದಲ್ಲಿ ಪ್ರಬಂಧ ಮಂಡಿಸಲು ಅವರನ್ನು ಆಹ್ವಾನಿಸಲಾಗಿತ್ತು. ಅಲ್ಲಿಗೆ ತೆರಳುವ ಹಾದಿಯಲ್ಲಿ ಅಪಘಾತಕ್ಕೀಡಾದರು. ವಾಹನ ಚಲಾಯಿಸುತ್ತಿದ್ದ ಚಾಲಕ ನಿದ್ರೆ ಮಾಡಿದ್ದರಿಂದ ಆದ ಅಪಘಾತದಲ್ಲಿ ರಾಜಲಕ್ಷ್ಮಿ ಅವರ ಬೆನ್ನು ಹುರಿಗೆ ಬಲವಾದ ಪೆಟ್ಟು ಬಿತ್ತು.
ಏನೆಲ್ಲ ಮಾಡಬೇಕು ಅಂದುಕೊಂಡೆನು ಎಲ್ಲವೂ ಮಾಡಿದೆ
ಸೊಂಟದಿಂದ ಕೆಳಗಿನ ಭಾಗ ನಿಶ್ಚಲವಾದವು. "ನನ್ನ ಇಡೀ ದೇಹದ ಜತೆಗೆ ಹೊಸದಾಗಿ ಮಾತನಾಡಬೇಕಾಯಿತು. ದೈಹಿಕವಾಗಿ ಹೇಳಬೇಕು ಅಂದರೆ ಇಡಿಯಾಗಿ ನಾನು ಹೊಸ ವ್ಯಕ್ತಿಯಾಗಿದ್ದೆ" ಎನ್ನುತ್ತಾರೆ ರಾಜಲಕ್ಷ್ಮಿ. ಆದರೆ ಆಕೆ ಧೃತಿಗೆಡಲಿಲ್ಲ. ತಮ್ಮ ಆಸಕ್ತಿಯನ್ನು ಕೈ ಬಿಡಲಿಲ್ಲ. ಮನಶ್ಶಾಸ್ತ್ರ ಹಾಗೂ ಫ್ಯಾಷನ್ ಗೆ ಸಂಬಂಧಿಸಿದ ಕೋರ್ಸ್ ಸೇರಿಕೊಂಡರು. ಜತೆಗೆ ಎಂಬಿಎ. "ನನಗೆ ಈ ಎಲ್ಲವನ್ನೂ ಮಾಡಬೇಕು ಅಂತಿತ್ತು" ಎನ್ನುತ್ತಾರೆ ರಾಜಲಕ್ಷ್ಮಿ.
ಸ್ಪರ್ಧೆ ಗೆದ್ದ ಸಾರ್ಥಕ್ಯ ಕ್ಷಣ
ಆ ಸಂದರ್ಭದಲ್ಲೇ ಅವರಿಗೆ ಮಿಸ್ ವ್ಹೀಲ್ ಚೇರ್ ಇಂಡಿಯಾ ಬಗ್ಗೆ ಇಂಟರ್ ನೆಟ್ ನಲ್ಲಿ ಮಾಹಿತಿ ಸಿಕ್ಕು, ಅದರಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಆ ಸ್ಪರ್ಧೆಯಲ್ಲಿ ಅವರೇ ವಿಜೇತರೂ ಆಗಿ, ತಮ್ಮ ಕನಸನ್ನು ನನಸು ಮಾಡಿಕೊಂಡ ಸಾರ್ಥಕ್ಯ ರಾಜಲಕ್ಷ್ಮಿಗೆ ಇದೆ.
ಜನ ಸಹಾಯ ಮಾಡ್ತಾರೆ
"ನಿಮಗೆ ಈ ದೇಶದಲ್ಲಿ ಅಂಗ ವೈಕಲ್ಯ ಇರುವವರ ಪಾಲಿಗೆ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದು ಅಷ್ಟು ಸುಲಭವಲ್ಲ. ಹಿರಿಯ ನಾಗರಿಕರಿಗೂ ಇಂಥದ್ದೇ ಸಮಸ್ಯೆ ಇದೆ. ಇನ್ನೊಂದು ಕಡೆ ಜನರು ನಿಮಗೆ ಖಂಡಿತಾ ನೆರವಿಗೆ ಬರುತ್ತಾರೆ. ರಸ್ತೆ ದಾಟುವಾಗ, ಮೆಟ್ಟಿಲು ಹತ್ತುವಾಗ ನಾನಾಗಿಯೇ ಕೇಳದೆ ಕೂಡ ಸಹಾಯ ಮಾಡಿದ್ದಾರೆ" ಎನ್ನುತ್ತಾರೆ ರಾಜಲಕ್ಷ್ಮಿ.
ವೈಕಲ್ಯದಿಂದ ವ್ಯಕ್ತಿಯನ್ನು ಅಳೆಯಲು ಸಾಧ್ಯವಿಲ್ಲ
ನನ್ನ ವೈಕಲ್ಯ ದೈಹಿಕವಾದದ್ದು ಅದರಿಂದ ಕಾಣ್ತಿದೆ. ಆದರೆ ಹಲವರಿಗೆ ವೈಕಲ್ಯ ಇದ್ದರೂ ಅವು ಕಾಣುತ್ತಿಲ್ಲ. ವೈಕಲ್ಯದಲ್ಲಿ ಹಲವು ಬಗೆ. ನಡತೆ, ದೈಹಿಕ, ಮಾನಸಿಕ ಅಥವಾ ಬೌದ್ಧಿಕ ವೈಕಲ್ಯ. ಆದರೆ ಅದನ್ನೇ ಆಧರಿಸಿ ಒಬ್ಬ ವ್ಯಕ್ತಿಯನ್ನು ವಿವರಿಸುವುದಕ್ಕೋ ಅಳೆಯುವುದಕ್ಕೋ ಸಾಧ್ಯವಿಲ್ಲ ಎನ್ನುತ್ತಾರೆ ಆಕೆ.